ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 24 ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯೋಪಾದ್ಯಾಯ ಬೀರಪ್ಪ ಅಂಡಗಿ ಅವರು ಸ್ವಂತ ಖರ್ಚಿನಲ್ಲಿ ಬೆಂಗಳೂರಿಗೆ ವಿಮಾನದ ಮೂಲಕ ಕರೆದೊಯ್ದು ಮಾದರಿ ಕಾರ್ಯ ಮಾಡಿದ್ದಾರೆ.

ಕೊಪ್ಪಳ (ಡಿ.27): ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 24 ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯೋಪಾದ್ಯಾಯ ಬೀರಪ್ಪ ಅಂಡಗಿ ಅವರು ಸ್ವಂತ ಖರ್ಚಿನಲ್ಲಿ ಬೆಂಗಳೂರಿಗೆ ವಿಮಾನದ ಮೂಲಕ ಕರೆದೊಯ್ದು ಮಾದರಿ ಕಾರ್ಯ ಮಾಡಿದ್ದಾರೆ. ಶುಕ್ರವಾರ ಜಿಂದಾಲ್ ವಿಮಾನ ನಿಲ್ದಾಣದ ಮೂಲಕ 24 ಮಕ್ಕಳು ಸೇರಿದಂತೆ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಲೆಯ ಶಿಕ್ಷಕರು ಸೇರಿ 40 ಜನರನ್ನು ಬೆಂಗಳೂರಿಗೆ ಕರೆದೊಯ್ದರು. ಮಕ್ಕಳ ಸಂಭ್ರಮ ಅಕ್ಷರಶಃ ಮುಗಿಲು ಮುಟ್ಟಿರುವುದು ಕಂಡುಬಂದಿತು. ಜಿಂದಾಲ್ ವಿಮಾನ ನಿಲ್ದಾಣದಿಂದ ವಿದ್ಯಾರ್ಥಿಗಳು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಪರೀಕ್ಷೆ ಮೂಲಕ ಆಯ್ಕೆ

ಬೀರಪ್ಪ ಅಂಡಗಿ ಅವರು ವಿದ್ಯಾರ್ಥಿಗಳಿಗೆ ವಿಮಾನ ಯಾನದ ಅವಕಾಶ ಕಲ್ಪಿಸಲು ಕಳೆದ ಏಪ್ರಿಲ್‌ನಲ್ಲಿ 5 ರಿಂದ 8 ನೆಯ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದ್ದರು. ಅದರಲ್ಲಿ ತೇರ್ಗಡೆಯಾದ 24 ವಿದ್ಯಾರ್ಥಿಗಳನ್ನು ವಿಮಾನ ಮೂಲಕ ಪ್ರವಾಸಕ್ಕೆ ರಾಜ್ಯದ ರಾಜಧಾನಿಗೆ ಕರೆದೊಯ್ಯಲಾಯಿತು. 220 ಮಕ್ಕಳು ಪರೀಕ್ಷೆ ಬರೆದಿದ್ದರು, ಆಯ್ಕೆಯಾದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೋಡುಗೆ ನೀಡಿ ಸಂಸದ ರಾಜಶೇಖರ ಹಿಟ್ನಾಳರಿಂದ ಶುಭ ಹಾರೈಸಿದರು.

ಬೀರಪ್ಪ ಅಂಡಗಿ ಅವರು 3.5 ಲಕ್ಷ ರು. ವ್ಯಯಿಸಿ ಚಾರ್ಟರ್ಡ್‌ ವಿಮಾನವನ್ನು ಬುಕ್‌ ಮಾಡಿದ್ದರಂತೆ. ಬಳಿಕ ಉಳಿದ ವೆಚ್ಚ ಸೇರಿ 5 ಲಕ್ಷ ರು. ವೆಚ್ಚ ಬರಬಹುದೆಂದು ಅವರು ತಿಳಿಸಿದ್ದಾರೆ. ಶಾಲೆಯ ಮಕ್ಕಳು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರಲ್ಲದೇ ಬಿಸಿಯೂಟ ನೌಕರರನ್ನೂ ಸಹ ವಿಮಾನದಲ್ಲಿ ಕರೆದೊಯ್ದಿದ್ದಾರೆ. ಬೀರಪ್ಪ ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.