ಸಾರಿಗೆ ಬಸ್ ಬಳಸಲು ಮೋದಿ ಮನವಿ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಸಾರಿಗೆ ನೌಕರರು ಸರ್ಕಾರದ ವಿರುದ್ದ ತೀವ್ರ ಆಕ್ರೋಶ ಹೊರಹಾಕಿದ್ದು ಮಾತ್ರವಲ್ಲ, ಮೇ.20ರಂದು ಬಸ್ ನಿಲ್ಲಿಸಿ ಮುಷ್ಕರ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಬೆಂಗಳೂರು (ಮೇ.15) ವಿವಿಧ ಬೇಡಿಕೆಗೆಳ ಈಡೇರಿಕೆಗೆ ಆಗ್ರಹಿಸಿ ಕಳೆದ ಕೆಲ ವರ್ಷಗಳಿಂದ ಸಾರಿಗೆ ನೌಕರರು ಪ್ರತಿಭಟನೆ, ಮುಷ್ಕರ ನಡೆಸುತ್ತಲೇ ಬಂದಿದ್ದಾರೆ. ಆದರೆ ಸಾರಿಗೆ ನೌಕರರ ಬೇಡಿಕೆಗಳು ಪೂರ್ಣವಾಗಿ ಈಡೇರಿಕೆಯಾಗಿಲ್ಲ. ಬಿಕ್ಕಟ್ಟು ತೀವ್ರಗೊಂಡಾ ಎಸ್ಮಾ ಜಾರಿ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಆದರೆ ಇದ್ಯಾವುದಕ್ಕೂ ಜಗ್ಗದೆ ಇದೀಗ ಸಾರಿಗೆ ನೌಕರರು ಪ್ರತಿಭಟನೆ ತೀವ್ರಗೊಳಿಸಲು ಎಚ್ಚರಿಸಿದ್ದಾರೆ. ತಮ್ಮ ಬೇಡಿಕೆ ಈಡೇರಿಸದಿದ್ದರೆ ಮೇ.20ರಂದು ಮುಷ್ಕರ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಮೇ.20ಕ್ಕೆ ಸಾರಿಗೆ ಸೇವೆ ಬಂದ್
ಬೆಂಗಳೂರಿನ ಟೌನ್ಹಾಲ್ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಾರಿಗೆ ನೌಕರರ ಮುಖಂಡರು ಮಹತ್ವದ ನಿರ್ಧಾರ ಘೋಷಿಸಿದ್ದಾರೆ ಮೇ. 20 ರಂದು ಎಲ್ಲಾ ಬಸ್ ನಿಲ್ಲಿಸಿ ಪ್ರತಿಭಟನೆ ನಡೆಸುತ್ತೇವೆ. ರಾಜ್ಯ ಸರ್ಕಾರ ಪ್ರತಿ ಬಾರಿ ನಮ್ಮ ಬೇಡಿಕೆ ಈಡೇರಿಸಲು ಹಿಂದೇಟು ಹಾಕಿ ಸಂಧಾನ ನಡೆಸುತ್ತದೆ. ಈ ಬಾರಿ ಯಾವುದೇ ಮಾತುಕತೆಗೆ ಜಗ್ಗುವುದಿಲ್ಲ. ಬೇಡಿಕೆ ಈಡೇರಿಸದಿದ್ದರೆ ಭಾರಿ ಪ್ರತಿಭಟನೆ ನಡೆಸುವುದಾಗಿ ಸಾರಿಗೆ ಮುಖಂಡ ವಿಜಯ್ ಭಾಸ್ಕರ್ ಎಚ್ಚರಿಸಿದ್ದಾರೆ.
ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ
ಮೇ 20 ರಂದು ಬಸ್ ಮುಷ್ಕರ ನಡೆಸಿದರೆ, ಮೇ. 19 ರಂದು ಕಾಂಗ್ರೆಸ್ ತುಮಕೂರಿನಲ್ಲಿ ಹಮ್ಮಿಕೊಂಡಿರುವ ಸಾಧನಾ ಸಮಾವೇಶದಲ್ಲಿ ಕಪ್ಪು ಬಾವುಟ ಪ್ರದರ್ಶಿಸವುದಾಗಿ ಎಚ್ಚರಿಸಿದ್ದಾರೆ. ನಿಮ್ಮ ಸಾಧನೆ ನಮಗೆ ನೋವು ತಂದಿದೆ. ತುಮಕೂರಿನ ಸಮಾವೇಶದಲ್ಲಿ ನಮ್ಮ ಪ್ರತಿಭಟನೆ ಮಾಡುತ್ತೇವೆ. ಕಾರ್ಯಕ್ರಮಕ್ಕೆ ಆಗಮಿಸುವ ರಾಹುಲ್ ಗಾಂಧಿ ನಮ್ಮ ಕಪ್ಪು ಬಾವುಟ ನೋಡಬೇಕು, ಪ್ರತಿಭಟನೆ ಬಿಸಿ ತಟ್ಟಬೇಕು ಎಂದು ವಿಜಯ್ ಭಾಸ್ಕರ್ ಹೇಳಿದ್ದಾರೆ. ಈ ಬಾರಿ ಮುಷ್ಕರ ತಣ್ಣಗೆ ಆಗುವುದಿಲ್ಲ. ಬೇಡಿಕೆ ಈಡೇರಿಕೆ ಮಾತ್ರ ಸರ್ಕಾರದ ಮುಂದಿರುವ ದಾರಿ ಎಂದು ವಿಜಯ್ ಭಾಸ್ಕರ್ ಎಚ್ಚರಿಸಿದ್ದಾರೆ.
ಪ್ರತಿಭಟನೆ ಯಾಕೆ?
ಸಾರಿಗೆ ನೌಕರ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆ ಪೈಕಿ ಇತ್ತೀಚೆಗೆ ರಾಜ್ಯ ಸರ್ಕಾರ ವೇತನ ಹೆಚ್ಚಳ ಮಾಡಿದೆ. ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ 12.5% ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಆದರೆ ರಾಜ್ಯ ಸರ್ಕಾರದ ಆದೇಶ ವಿರುದ್ದ ಸಾರಿಗೆ ನೌಕರರ ಜಂಟಿ ಕ್ರಿಯಾಸಮಿತಿಯಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. 15%-25% ವರೆಗೆ ವೇತನ ಪರಿಷ್ಕರಿಸಲು ಜಂಟಿಕ್ರಿಯಾ ಸಮಿತಿ ಬೇಡಿಕೆ ಇಟ್ಟಿತ್ತು. ಇದೇ ವೇಳೆ 1-1-2024ಕ್ಕೆ ಅನ್ವಯವಾಗುವಂತೆ ವೇತನ ಪರಿಷ್ಕರಿಸಲು ಸಾರಿಗೆ ನೌಕರರ ಜಂಟಿಕ್ರಿಯಾ ಸಮಿತಿ ಬೇಡಿಕೆ ಇಟ್ಟಿತ್ತು. ಆದರೆ ಸರ್ಕಾರ 12.50% ವೇತನ ಪರಿಷ್ಕರಿಸಿ ಸರ್ಕಾರ ಆದೇಶ ಮಾಡಿದೆ.
ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತಗೊಂಡಿದೆಂದು ಆಕ್ರೋಶ ವ್ಯಕ್ತಪಡಿಸಿತ್ತು. ಸರ್ಕಾರದ ಆದೇಶದ ಹೊರಬಂದ ಬೆನ್ನಲ್ಲೇ ಮೇ.20ರಂದು ಮುಷ್ಕರದ ಎಚ್ಚರಿಕೆ ನೀಡಿತ್ತು. ಇದೀಗ ಪ್ರತಿಭಟನೆ ತೀವ್ರಗೊಂಡಿದೆ. ಹೀಗಾಗಿ ಮೇ. 20 ರಂದು ಸಾರಿಗೆ ಬಸ್ ಲಭ್ಯವಿರುವ ಸಾಧ್ಯತೆಗಳು ಕ್ಷೀಣಿಸುತ್ತಿದೆ.


