ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬೃಹತ್ ಟೆಕ್ ಪಾರ್ಕ್ಗಳನ್ನು ನಿರ್ಮಿಸುವುದಾಗಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ. ದೇವನಹಳ್ಳಿ, ಮೈಸೂರು, ಕ್ವಿನ್ ಸಿಟಿ / ಅಡಕನಹಳ್ಳಿ ಮತ್ತು ಕೋಚನಹಳ್ಳಿಗಳಲ್ಲಿ ಈ ಪಾರ್ಕ್ಗಳು ತಲೆ ಎತ್ತುತ್ತವೆ.
ಬೆಂಗಳೂರು (ಜು.30): ದೇವನಹಳ್ಳಿ ಸಮೀಪದ ಆದಿನಾರಾಯಣ ಹೊಸಹಳ್ಳಿ ಅಥವಾ ಐಟಿಐಆರ್ ಪ್ರದೇಶದಲ್ಲಿ 100 ಎಕರೆಯಲ್ಲಿ ಸ್ಪೇಸ್ ಪಾರ್ಕ್, ಮೈಸೂರಿನ ಕೋಚನಹಳ್ಳಿ ಹಂತ-2ರಲ್ಲಿ 150 ಎಕರೆಯಲ್ಲಿ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಪಾರ್ಕ್, ಕ್ವಿನ್ ಸಿಟಿ / ಅಡಕನಹಳ್ಳಿ ಮತ್ತು ಕೋಚನಹಳ್ಳಿ ಎರಡೂ ಕಡೆಗಳಲ್ಲಿ ತಲಾ 100 ಎಕರೆಯಲ್ಲಿ ಗ್ಲೋಬಲ್ ಇನ್ನೋವೇಶನ್ ಸಿಟಿ ನಿರ್ಮಾಣ ಮಾಡಲಾಗುವುದು ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಕೈಗಾರಿಕಾ ಇಲಾಖೆ ಹಾಗೂ ಐಟಿ-ಬಿಟಿ ಇಲಾಖೆ ಜಂಟಿಯಾಗಿ ನಡೆಸಿದ ಸಭೆಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ ಅವರು, ತಮ್ಮ ಇಲಾಖೆಯು ದೇವನಹಳ್ಳಿ ಸಮೀಪದ ಆದಿನಾರಾಯಣ ಹೊಸಹಳ್ಳಿ ಅಥವಾ ಐಟಿಐಆರ್ ಪ್ರದೇಶದಲ್ಲಿ 100 ಎಕರೆಯಲ್ಲಿ ಸ್ಪೇಸ್ ಪಾರ್ಕ್, ಮೈಸೂರಿನ ಕೋಚನಹಳ್ಳಿ ಹಂತ-2ರಲ್ಲಿ 150 ಎಕರೆಯಲ್ಲಿ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಪಾರ್ಕ್, ಕ್ವಿನ್ ಸಿಟಿ / ಅಡಕನಹಳ್ಳಿ ಮತ್ತು ಕೋಚನಹಳ್ಳಿ ಎರಡೂ ಕಡೆಗಳಲ್ಲಿ ತಲಾ 100 ಎಕರೆಯಲ್ಲಿ ಗ್ಲೋಬಲ್ ಇನ್ನೋವೇಶನ್ ಸಿಟಿ, ಅಡಕನಹಳ್ಳಿ/ ಕೋಚನಹಳ್ಳಿಯಲ್ಲಿ 100 ಎಕರೆಯಲ್ಲಿ ಕಿಯೋನಿಕ್ಸ್ ಪ್ಲಗ್ & ಪ್ಲೇ ಸೌಲಭ್ಯ ಕೇಂದ್ರದ ಅಭಿವೃದ್ಧಿ ಮೂಲಕ ʻಗ್ಲೋಬಲ್ ಕೇಪಬಿಲಿಟಿ ಸೆಂಟರ್ʼಗಳನ್ನು ಸ್ಥಾಪಿಸಲು ತೀರ್ಮಾನಿಸಿದೆ. ಇದಕ್ಕಾಗಿ ಈ ಸ್ಥಳಗಳಲ್ಲಿ ಜಮೀನನ್ನು ಮಂಜೂರು ಮಾಡುವಂತೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರಲ್ಲಿ ಕೋರಿದರು.
ಜೊತೆಗೆ, ಡ್ರೋನ್ ಪರೀಕ್ಷಾ ಕೇಂದ್ರವು ನಿರ್ಜನ ಪ್ರದೇಶದಲ್ಲಿ ಇರಬೇಕು ಎನ್ನುವ ನಿಯಮವಿದೆ. ಆದ್ದರಿಂದ ಬೆಂಗಳೂರಿನ ಭಾಗವೇ ಆಗಿರುವ ಹೆಸರಘಟ್ಟದಲ್ಲಿ ಈ ಯೋಜನೆ ಬರುವುದು ಕಷ್ಟವಾಗಬಹುದು. ಆದ್ದರಿಂದ ಇದಕ್ಕೆ ಸೂಕ್ತ ಜಾಗ ಹುಡುಕುವುದು ಸೂಕ್ತ ಎಂದೂ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಉದ್ದೇಶಿತ ಬಾಹ್ಯಾಕಾಶ ಪಾರ್ಕ್, ವಿದ್ಯುನ್ಮಾನ ಬಿಡಿಭಾಗಗಳ ತಯಾರಿಕೆ ಪಾರ್ಕ್ ಮುಂತಾದ ಯೋಜನೆಗಳು ಸೇರಿದಂತೆ ಹಲವು ಮಹತ್ತ್ವದ ಉದ್ಯಮಗಳಿಗೆ ಸರಕಾರ ಕೊಡುವ ರಿಯಾಯಿತಿಗಳ ಕುರಿತ ನೀತಿಯನ್ನು ರೂಪಿಸಲಾಗುತ್ತಿದೆ. ಈ ಸಂಬಂಧವಾಗಿ ಇನ್ನೊಂದು ವಾರದಲ್ಲಿ ಕೈಗಾರಿಕಾ ಮತ್ತು ಐಟಿ-ಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ವಿಸ್ತೃತ ಹೂಡಿಕೆ- ಪ್ರೋತ್ಸಾಹನಾ ನೀತಿಗೆ ಸಂಬಂಧಿಸಿದ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ಇದಾದ ಕೂಡಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿಸ್ತೃತವಾಗಿ ಚರ್ಚಿಸಲಾಗುತ್ತದೆ ಎಂದರು.
ಐಟಿ ಇಲಾಖೆಯು ಇಎಸ್ಡಿಎಂ ವಲಯಕ್ಕೆ ಸಂಬಂಧಿಸಿದಂತೆ ವಿಶೇಷ ಪ್ರೋತ್ಸಾಹನಾ ಕ್ರಮಗಳ ನೀತಿಯನ್ನು ರೂಪಿಸುತ್ತಿದೆ. ಇದಕ್ಕೆ ಪೂರಕವಾಗಿ ಕೈಗಾರಿಕಾ ಇಲಾಖೆ ಕೂಡ ವಿದ್ಯುನ್ಮಾನ ತಯಾರಿಕೆ ವಲಯದಲ್ಲಿ ಹೂಡಿಕೆ ಆಕರ್ಷಣೆಗೆ ಕಾರ್ಯತಂತ್ರ ರೂಪಿಸಬೇಕಾದ ಅಗತ್ಯವಿದೆ. ಕೆಲವೆಡೆಗಳಲ್ಲಿ ಒಂದೇ ಯೋಜನೆಗೆ ಐಟಿ ಮತ್ತು ಕೈಗಾರಿಕೆ ಇಲಾಖೆಗಳೆರಡೂ ರಿಯಾಯಿತಿಗಳನ್ನು ಕೊಡುತ್ತಿದ್ದು, ಇದನ್ನು ಸರಿ ಮಾಡಬೇಕಾಗಿದೆ ಎನ್ನುವ ಅಭಿಪಾಯ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ಸದ್ಯಕ್ಕೆ ನಮ್ಮಲ್ಲಿ ತಯಾರಾಗುತ್ತಿರುವ ಸ್ಮಾರ್ಟ್ಫೋನ್ಗಳಲ್ಲಿ ಶೇಕಡ 44ರಷ್ಟು ಅಮೆರಿಕಕ್ಕೆ ರಫ್ತಾಗುತ್ತಿದೆ. ಇದರಲ್ಲಿ ಮೊದಲು ಶೇ.61ರಷ್ಟು ಪಾಲು ಹೊಂದಿದ್ದ ಚೀನಾದ ಪ್ರಮಾಣ ಈಗ ಶೇ.25ಕ್ಕೆ ಕುಸಿದಿದೆ. ಆದರೆ, ವಿಯಟ್ನಾಂನ ಪಾಲು ಮಾತ್ರ ಶೇ.50ರಷ್ಟಿದೆ. ಈ ಸ್ಪರ್ಧೆಯನ್ನು ಪರಿಗಣಿಸಿ ಬಂಡವಾಳವನ್ನು ಸೆಳೆಯಬೇಕಾಗಿದೆ. ಜೊತೆಗೆ ಸ್ಮಾರ್ಟ್ಫೋನ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಇದಕ್ಕೆ ಪೂರಕವಾಗಿ ಈ ಕ್ಷೇತ್ರಕ್ಕೆ ಹಲವು ರಿಯಾಯಿತಿಗಳನ್ನು ಘೋಷಿಸಬೇಕಾಗಿದೆ ಎಂದು ಇಬ್ಬರೂ ಸಚಿವರು ಅಭಿಪ್ರಾಯಪಟ್ಟರು.
