ರಾಜ್ಯ ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಬೃಹತ್ ಮಟ್ಟದ ವರ್ಗಾವಣೆ ನಡೆದಿದ್ದು, 69 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳು ಮತ್ತು 18 ಡಿವೈಎಸ್‌ಪಿ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಬೆಂಗಳೂರು (ಸೆ.2): ರಾಜ್ಯ ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಬೃಹತ್ ಮಟ್ಟದ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿ ಪ್ರಕ್ರಿಯೆ ನಡೆದಿದೆ. ಶಾಸನಬದ್ಧವಾಗಿ ಸಿವಿಲ್ ವಿಭಾಗದ 69 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಿಗೆ (PI) ನಿಯೋಜನೆಗೊಳಿಸಿ ಸ್ಥಳ ನಿಯುಕ್ತಿಗೊಳಿಸಲಾಗಿದ್ದು, ಇದರ ಬೆನ್ನಲ್ಲೇ 18 ಡಿವೈಎಸ್‌ಪಿ (DySP - Civil) ಅಧಿಕಾರಿಗಳನ್ನು ವರ್ಗಾವಣೆ ಹಾಗೂ ಮಾರ್ಪಡಿತ ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು (DG & IGP) ಅಧಿಕೃತ ಆದೇಶ ಹೊರಡಿಸಿದ್ದಾರೆ. ಆಗಸ್ಟ್ 29 ರಂದು ನಡೆದ ಪೊಲೀಸ್ ಸಿಬ್ಬಂದಿ ಮಂಡಳಿಯ (Police Establishment Board) ಸಭೆಯ ನಿರ್ಧಾರದಂತೆ ಈ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.

69 ಇನ್‌ಸ್ಪೆಕ್ಟರ್‌ಗಳಿಗೆ ಸ್ಥಳ ನಿಯುಕ್ತಿ

ವರ್ಗಾವಣೆಯಾಗಿ ಸ್ಥಳ ನಿರೀಕ್ಷೆಯಲ್ಲಿದ್ದ ಹಾಗೂ ವಿವಿಧ ವಿಭಾಗಗಳಲ್ಲಿದ್ದ 69 ಇನ್ಸ್‌ಪೆಕ್ಟರ್‌ಗಳನ್ನು ಸಿಸಿಬಿ, ಲೋಕಾಯುಕ್ತ, ಸಿಐಡಿ, ರಾಜ್ಯ ಗುಪ್ತವಾರ್ತೆ ಮತ್ತು ವಿವಿಧ ಕಾನೂನು ಮತ್ತು ಸುವ್ಯವಸ್ಥೆ (L&O) ಠಾಣೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ನಿಯೋಜಿಸಲಾಗಿದೆ.

ಪ್ರಮುಖ ಬದಲಾವಣೆಗಳು

  • ಲೋಕಾಯುಕ್ತ ಹಾಗೂ ಸಿಐಡಿ: ದೀಪಕ್ ಕುಮಾರ್ ಕೆ.ಹೆಚ್, ಮಹದೇವಯ್ಯ, ಸತೀಶ ಕೆ.ಜಿ, ಲಕ್ಷ್ಮೀಪತಿ ಕೆ. ಸೇರಿದಂತೆ ಹಲವು ಅಧಿಕಾರಿಗಳನ್ನು ಕರ್ನಾಟಕ ಲೋಕಾಯುಕ್ತಕ್ಕೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.
  • ಬೆಂಗಳೂರು ಸಿಸಿಬಿ & ಪ್ರಮುಖ ಠಾಣೆಗಳು: ಹಜರೇಶ್ ಎ ಕಿಲ್ಲೇದಾರ್, ವೀರೇಂದ್ರ ಪ್ರಸಾದ್ ಎಸ್.ಆರ್, ಅಶೋಕ್ ಬಿ.ಎಸ್ ಅವರನ್ನು ಬೆಂಗಳೂರು ನಗರ ಸಿಸಿಬಿಗೆ (CCB) ನೇಮಿಸಲಾಗಿದೆ. ರವಿಶಂಕರ್ ಎಂ.ಎನ್ ಅವರನ್ನು ವೈಯ್ಯಾಲಿಕಾವಲ್ ಠಾಣೆಗೆ ಹಾಗೂ ಲಕ್ಷ್ಮಯ್ಯ ಎಂ.ಬಿ ಅವರನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
  • ಸಂಚಾರ & ಇತರ ವಿಭಾಗಗಳು: ನಾರಾಯಣಸ್ವಾಮಿ ಜಿ ಅವರನ್ನು ಹೈಗ್ರೌಂಡ್ಸ್ ಸಂಚಾರ ಠಾಣೆಗೆ ಮತ್ತು ಮಹೇಶ್ ಇ.ಎಸ್ ಅವರನ್ನು ಜೀವನ್‌ಭೀಮಾನಗರ ಸಂಚಾರ ಠಾಣೆಗೆ ನಿಯೋಜಿಸಲಾಗಿದೆ.
  • ವಿಶೇಷ ಸೂಚನೆ: ಸ್ಥಳ ನಿಯುಕ್ತಿಗೊಳ್ಳದ ಇತರ ಇನ್ಸ್‌ಪೆಕ್ಟರ್‌ಗಳು ಮುಂದಿನ ಆದೇಶಕ್ಕಾಗಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ (PHQ) ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.

18 ಡಿವೈಎಸ್‌ಪಿಗಳ ವರ್ಗಾವಣೆ / ಸ್ಥಳ ಮಾರ್ಪಡು

ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಜತೆಗೆ 18 ಡಿವೈಎಸ್‌ಪಿ (DySP Civil) ಹಂತದ ಅಧಿಕಾರಿಗಳನ್ನೂ ವರ್ಗಾಯಿಸಿ ಹೆಚ್ಚುವರಿ ಕಚೇರಿ ಆದೇಶ ಹೊರಡಿಸಲಾಗಿದೆ.

ಪ್ರಮುಖ ಡಿವೈಎಸ್‌ಪಿಗಳ ಪಟ್ಟಿ

  • ರವಿ ಹೆಚ್ - ಸಿಟಿ ಎಸ್.ಬಿ, ಬೆಂಗಳೂರು ನಗರ
  • ಸುನೀಲ್ ವೈ ನಾಯ್ಕ - ಸಿಸಿಬಿ, ಬೆಂಗಳೂರು ನಗರ
  • ಬಾಲಕೃಷ್ಣ ಸಿ - ಹಲಸೂರು ಉಪ ವಿಭಾಗ, ಬೆಂಗಳೂರು ನಗರ
  • ಎಂ.ಎಸ್ ನಾಯ್ಕರ್ - ಬೆಳಗಾವಿ ಗ್ರಾಮೀಣ ಉಪ ವಿಭಾಗ
  • ಜಿ.ಆರ್. ಶಿವಮೂರ್ತಿ - ಚನ್ನರಾಯಪಟ್ಟಣ ಉಪ ವಿಭಾಗ, ಹಾಸನ ಜಿಲ್ಲೆ
  • ಗಿರಿ ಬಿ - ಸಿಟಿ ಎಸ್.ಬಿ, ಬೆಂಗಳೂರು ನಗರ
  • ಮೊಹಮ್ಮದ್ ಹಸ್ಮತ್ ಖಾನ್ - ಪಿ.ಟಿ.ಸಿ, ಕಲಬುರಗಿ
  • ಲೋಕೇಶ್ ಎ.ಸಿ, ಶಿವಾನಂದ ಎನ್ ಮದರಖಂಡಿ, ಅಯ್ಯನಗೌಡ ಟಿ, ಪ್ರತಾಪ್ ಸಿಂಗಾ ಥೋರಾಟ್, ಗಂಗಾಧರ್ ಬಿ.ಎಂ - ಡಿ.ಸಿ.ಆರ್.ಇ (DCRE) ವಿಭಾಗಕ್ಕೆ ನಿಯೋಜನೆ.
  • ಮಲ್ಲೇಶಪ್ಪ ಮಲ್ಲಾಪುರ, ಮುತ್ತಪ್ಪ ಎಸ್ ಪಾಟೀಲ್, ಜಗದೀಶ ಹೆಚ್.ಎಸ್ - ಕರ್ನಾಟಕ ಲೋಕಾಯುಕ್ತಕ್ಕೆ ಸ್ಥಳ ಮಾರ್ಪಾಡುಗೊಳಿಸಿ ಆದೇಶ.

ತಕ್ಷಣವೇ ವರದಿ ಮಾಡಿಕೊಳ್ಳಲು ಕಟ್ಟುನಿಟ್ಟಿನ ಆದೇಶ

ವರ್ಗಾವಣಗೊಂಡಿರುವ ಹಾಗೂ ಸ್ಥಳ ನಿಯುಕ್ತಿಯಾಗಿರುವ ಎಲ್ಲಾ ಅಧಿಕಾರಿಗಳನ್ನು ಆಯಾ ಘಟಕಾಧಿಕಾರಿಗಳು ತಕ್ಷಣವೇ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು. ಅಧಿಕಾರಿಗಳು ಯಾವುದೇ 'ಸೇರುವಿಕೆ ಕಾಲಾವಕಾಶ' (Joining Time) ಬಳಸಿಕೊಳ್ಳದೇ, ತಕ್ಷಣವೇ ನಿಯೋಜಿತ ಹೊಸ ಸ್ಥಳಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಪಾಲನಾ ವರದಿ ಸಲ್ಲಿಸುವಂತೆ ಡಿಜಿ-ಐಜಿಪಿ ಕಚೇರಿಯಿಂದ ಸ್ಪಷ್ಟ ನಿರ್ದೇಶನ ನೀಡಲಾಗಿದೆ.