ಉಡುಪಿಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸಿನಿಮಾ ರಂಗದವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ, ತನಗೆ ತಿಳಿದ ಸತ್ಯವನ್ನು ಹೇಳಿದ್ದೇನೆ ಎಂದು ಎಚ್ಚರಿಕೆ ನೀಡಿದರು. ಮೇಕೆದಾಟು ಹೋರಾಟಕ್ಕೆ ಚಿತ್ರರಂಗದವರು ಬಾರದ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಉಡುಪಿ (ಮಾ.2): ಸಿನಿಮಾ ರಂಗದವರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ನನಗೆ ಗೊತ್ತಿರುವ ಸತ್ಯ ನಾನು ಹೇಳಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಚಿತ್ರರಂಗಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದರು.
ಇಂದು ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ನಮ್ಮ ನೀರು, ನಮ್ಮ ಹಕ್ಕು' ಹೋರಾಟಕ್ಕೆ ಅವರು ಬಂದಿಲ್ಲ. ನೆಲ ಜಲದ ವಿಚಾರದಲ್ಲಿ ಪಕ್ಷಾತೀತವಾಗಿ ನಾವು ಹೋರಾಟ ಮಾಡಿದ್ದೇವೆ. ಮೇಕೆದಾಟು ಹೋರಾಟ ಮಾಡುವಾಗ ಚಿತ್ರರಂಗದವರು ಬರಲಿಲ್ಲ. ನಾನು ಸತ್ಯವನ್ನು ಹೇಳಿದ್ದೇನೆ. ಅವರು ಬೇಕಿದ್ದರೆ ಪ್ರತಿಭಟನೆ, ಮಾಡಲಿ, ಹೋರಾಟ ಮಾಡಲಿ ಎಂದರು.
ಇದನ್ನೂ ಓದಿ:ಕನ್ನಡಚಿತ್ರರಂಗ, ಕಲಾವಿದರು ಡಿಕೆಶಿ ಜೀತದಾಳ? ಪಕ್ಷದ ಬಾವುಟ ಹಿಡಿದು ಮೇಕೆದಾಟು ಪಾದಯಾತ್ರೆ ಮಾಡಿದ್ರೆ ಯಾಕೆ ಬರಬೇಕು?
ಅವರ ಹಬ್ಬದಲ್ಲಿ ಅವರೇ ಇಲ್ಲಂದ್ರೆ ಹೇಗೆ?
ನೆಲ ಜಲದ ವಿಚಾರದಲ್ಲಿ ಹೋರಾಟ ಮಾಡುತ್ತೇವೆ ಎನ್ನುತ್ತಾರೆ. ಆದರೆ ಮೇಕೆದಾಟು ಯಾತ್ರೆ ವೇಳೆ ಸಾಧುಕೋಕಿಲ ದುನಿಯ ವಿಜಿ ಕೆಲವರು ಬಿಟ್ಟರೆ ಬೇರೆ ಯಾರೂ ಬಂದಿಲ್ಲ. ಪ್ರೇಮ ದುನಿಯಾ ವಿಜಿ, ಸಾಧು ಕೋಕಿಲ ಕೇಸ್ ಹಾಕಿಸಿಕೊಂಡರು. ಬಿಜೆಪಿಯವರು ಅವರ ಮೇಲೆ ಕೇಸ್ ಹಾಕಿದರು. ನಿನ್ನೆ ಆಗಿರೋದು ಯಾರ ಫಂಕ್ಷನ್ನು? ಅದೇನು ನನ್ನ ಕಾರ್ಯಕ್ರಮನಾ? ಕನ್ನಡ ಚಿತ್ರರಂಗ ಸತ್ತು ಹೋಯಿತು, ಥಿಯೇಟರ್ಗಳು ಮುಚ್ಚಿ ಹೋಯಿತು, ನನ್ನ ಅನ್ನ ಹೋಯಿತು ಅಂತಾ ಮಾತಾಡ್ತಾರೆ. ಆದರೆ ನಿನ್ನೆ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಯಾಕೆ ಬಂದಿಲ್ಲ? ಯಾರಿಗೋಸ್ಕರ ಮಾಡ್ತಿರೋದು? ಅವರ ಹಬ್ಬದಲ್ಲಿ ಅವರೇ ಇಲ್ಲಂದ್ರೆ ಹೇಗೆ? ಎಂದು ಕಿಡಿಕಾರಿದರು.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಎಂದರೆ ಚಿತ್ರರಂಗದವರು ಹಬ್ಬ. ಇಂಡಸ್ಟ್ರಿ ಅಂದಮೇಲೆ ಅಲ್ಲಿ ಕ್ಯಾಮೆರಾಮನ್,ಸ್ಕ್ರಿಪ್ಟ್ ರೈಟರ್, ನಟರು, ನಿರ್ದೇಶಕರು ಎಲ್ಲರೂ ಬರಬೇಕು ತಾನೇ? ಅವರ ಹಬ್ಬಕ್ಕೆ ಅವರೇ ಬಂದಿಲ್ಲ ಎಂದರು. ಇದೇ ವೇಳೆ ಆರ್ ಆಶೋಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಅವರು, ಆರ್ ಅಶೋಕ್ ಬೇಕಾದರೆ ತಲೆ ಕೆಳಗೆ ಮಾಡಿಕೊಳ್ಳಲಿ, ಕಾರ್ಯಕರ್ತರ ಅವಶ್ಯಕತೆ ಇಲ್ಲ. ನಾವು ಐಟಿಬಿಟಿ, ಇನ್ವೆಸ್ಟರ್ಸ್ ಮೀಟ್ ಮಾಡ್ತೇವೆ ಅವರನ್ನೂ ಕಾಂಗ್ರೆಸ್ ಕಾರ್ಯಕರ್ತರು ಅನ್ನೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ರೀ ಡಿಕೆಶಿ ಅಂದು ದೇವೇಗೌಡ್ರು ನಟ್ಟು ಬೋಲ್ಟ್ ಟೈಟ್ ಮಾಡಿದ್ರೆ ನೀವು ಇಂದು ಬೆಳೆಯೋಕೆ ಸಾಧ್ಯ ಇರಲಿಲ್ಲ: ಮುನಿರತ್ನ ಕಿಡಿ!
ಗೃಹಲಕ್ಷ್ಮಿ ಕಾಂಗ್ರೆಸ್ನವರಿಗೆ ಮಾತ್ರ ಕೊಡ್ತಿದ್ದೇವಾ?
ಗೃಹಲಕ್ಷ್ಮಿ ಬಗ್ಗೆ ಬಿಜೆಪಿಯವರು ಅಪಪ್ರಚಾರ ಮಾಡ್ತಾರೆ. ಗೃಹಲಕ್ಷ್ಮಿ ಹಣ ನಾವು ಕಾಂಗ್ರೆಸ್ವರಿಗೆ ಮಾತ್ರ ಕೊಡ್ತಿದ್ದೇವಾ? ಬಿಜೆಪಿ ಕಾರ್ಯಕರ್ತರು ಯಾರು ಗ್ಯಾರಂಟಿ ಯೋಜನೆ ತೆಗೆದುಕೊಳ್ಳಬೇಡಿ ಎಂದು ಕರೆ ಕೊಡಲಿ. ಕಾಂಗ್ರೆಸ್ ಕೊಟ್ಟ ಯೋಜನೆ ನೀವ್ಯಾರೂ ತಗೊಳ್ಳಬೇಡಿ ಅಂತಾ ಹೇಳಲಿ. ಎಲ್ಲ ಪಕ್ಷದವರು ಸೌಲಭ್ಯಗಳನ್ನು ಎಂಜಾಯ್ ಮಾಡ್ತಾ ಇದ್ದಾರೆ. ಬೇಕಿದ್ರೆ ಬಸ್ನಲ್ಲಿ ಹಣ ಕೊಟ್ಟು ಓಡಾಡ್ಲಿ ಎಂದು ಸವಾಲು ಹಾಕಿದರು.. ಮುಂದುವರಿದು, ಜನರು ಕರೆಕ್ಟ್ ಇದ್ದಾರೆ. ಆದರೆ ನಾಯಕರಿಗೆ ನಮಗೆ ಅವಕಾಶ ಸಿಗ್ತಿಲ್ಲ ಅನ್ನೋ ಹೊಟ್ಟೆ ಉರಿ ಇದೆ ಎಂದು ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
