Asianet Suvarna News Asianet Suvarna News

ಕಾಂಗ್ರೆಸ್‌ 2ನೇ ಗ್ಯಾರಂಟಿ ಜಾರಿಗೆ ಜು.1 ದಿನಾಂಕ ನಿಗದಿ: ಅನ್ನಭಾಗ್ಯ ಯೋಜನೆಗೆ ಚಾಲನೆ

ರಾಜ್ಯ ಸರ್ಕಾರದಿಂದ ಜು.1ರಂದು ಮೈಸೂರಿನಲ್ಲಿ ಕಾಂಗ್ರೆಸ್‌ 2ನೇ ಗ್ಯಾರಂಟಿಯಾಗಿ ಅನ್ನ ಭಾಗ್ಯ ಯೋಜನೆಗೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

Karnataka Congress government 2nd guarantee Anna Bhagya Yojana launching at July 1 sat
Author
First Published Jun 12, 2023, 3:15 PM IST

ಚಿಕ್ಕಬಳ್ಳಾಪುರ (ಜೂ.12): ರಾಜ್ಯದಲ್ಲಿ ಈಗಾಗಲೇ ಮೊದಲ ಗ್ಯಾರಂಟಿಯನ್ನು ಭಾನುವಾರ ಜಾರಿಗೊಳಿಸಿದ ಕಾಂಗ್ರೆಸ್‌ ಸರ್ಕಾರಕ್ಕೆ ಮೆಚ್ಚುಗೆ ಮಹಾಪೂರವೇ ವ್ಯಕ್ತವಾಗುತ್ತಿದೆ. ಇನ್ನು ಕಾಂಗ್ರೆಸ್‌ 2ನೇ ಗ್ಯಾರಂಟಿಯಾಗಿ ಅನ್ನಭಾಗ್ಯ ಯೋಜನೆಯನ್ನು ಜು.1ರಿಂದ ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ 2ನೇ ಗ್ಯಾರಂಟಿಗೆ ಚಾಲನೆ ನೀಡಲಾಗುತ್ತದೆ.

ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಹೆಚ್. ಮುನಿಯಪಪ ಅವರು, ಜುಲೈ 1 ರಂದು ಮತ್ತೊಂದು ಗ್ಯಾರಂಟಿ ಯೋಜನೆ ಜಾರಿ ಮಾಡಲಾಗುತ್ತದೆ. ಮೈಸೂರಿನಲ್ಲಿ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಲಾಗುವುದು. ಜುಲೈ 1 ರಂದು ರಾಜ್ಯದ ಎಲ್ಲ ಅರ್ಹ ಫಲಾನುಭವಿಗಳಿಗೆ 10 ಕೆಜಿ ಉಚಿತ  ನೀಡುವ ಗ್ಯಾರಂಟಿ ಯೋಜನೆಗೆ ಚಾಲನೆ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

'ಶಕ್ತಿ ಯೋಜನೆ ಸ್ಮಾರ್ಟ್‌ ಕಾರ್ಡ್‌' ಪಡೆದ ಮೊದಲ ಮಹಿಳೆ ಇವರೇ! ಉಚಿತ ಪ್ರಯಾಣವನ್ನೂ ಮಾಡಿದ್ರು

ಎಲ್ಲ ಗ್ಯಾರಂಟಿಗಳ ಹಂತ ಹಂತವಾಗಿ ಚಾಲನೆ : ರಾಜ್ಯದಲ್ಲಿ ಈಗಾಗಲೇ ಒಂದು ಗ್ಯಾರಂಟಿಯನ್ನು ಜಾರಿಗೆ ತರಲಾಗಿದ್ದು, ಈಗ 2ನೇ ಗ್ಯಾರಂಟಿ ಚಾಲನೆಗೂ ಸಿದ್ಧತೆ ನಡೆಯುತ್ತಿದೆ. ಹಂತಹಂತವಾಗಿ ಉಳಿದ ಗ್ಯಾರಂಟಿಗಳಿಗೆ ಚಾಲನೆ ನೀಡಲಿದ್ದೇವೆ ಎಂದು ಮಾಹಿತಿ ನೀಡಿದರು. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಭೋಗ ನಂದೀಶ್ವರ ದೇವಸ್ಥಾನಕ್ಕೆ ಕುಟುಂಬ ಸಮೇತ ಆಗಮಿಸಿದ್ದ ಸಚಿವ ಕೆ.ಹೆಚ್. ಮುನಿಯಪ್ಪ ದರ್ಶನ ಪಡೆದರು. 

ವಾಗ್ದಾನ ಮಾಡಿದಂತೆ ನಡೆದುಕೊಂಡಿದ್ದೇವೆ: 
ದೇವನಹಳ್ಳಿ(ಜೂ.12):  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏನು ಗ್ಯಾರಂಟಿಗಳ ಮೂಲಕ ವಾಗ್ದಾನ ಮಾಡಿದ್ದೆವೋ ಅದರಂತೆ ನಮ್ಮ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಆಡಳಿತ ಹಾಗು ಚಿಕ್ಕಬಳ್ಳಾಪುರ ವಿಭಾಗ ರಾಜ್ಯ ರಸ್ತೆ ಸಾರಿಗೆ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿ ಮಾತನಾಡಿ, ಭಾರತ ಸ್ವಾತಂತ್ರ್ಯ ಗಳಿಸಬೇಕಾದರೆ ಮಹಿಳೆಯರ ಪಾತ್ರವೂ ಸಹ ಮುಖ್ಯವಾದದು. ಮುಖ್ಯವಾಗಿ ಝಾನ್ಸಿ ರಾಣಿ ಲಕ್ಷ್ಮೇ ಬಾಯ್‌, ಕಿತ್ತೂರು ರಾಣಿ ಚೆನ್ನಮ್ಮ ಹೀಗೆ ಹಲವಾರು ಮಹಿಳೆಯರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಮಹಿಳೆಯರಿಗೂ ರಾಜಕೀಯವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಮಾನ ಕಲ್ಪಿಸಬೇಕೆಂದು ರಾಜಕೀಯ ಮುಖಂಡರು ಕಂಕಣಬದ್ದವಾಗಿದ್ದಾರೆಂದು ಹೇಳಿದರು.

ಕಾಂಗ್ರೆಸ್‌ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರು ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಸಮಾನ ಅವಕಾಶ ಮಾಡಿಕೊಟ್ಟಿದ್ದಾರೆ. ತಾಯಿಯಾದವಳಿಗೆ ನಮ್ಮ ಸಂಸ್ಕೃತಿಯಲ್ಲಿ ಪವಿತ್ರ ಸ್ಥಾನವಿದೆ. ಇಂತಹವರಿಗೆ ಸಮಾಜದಲ್ಲಿ ಸಮಾನತೆ ನೀಡಬೇಕೆಂದು ಕಾಂಗ್ರೆಸ್‌ ಮುಖಂಡರು ನಾಡಿನ ಜನತೆಗೆ ಐದು ಗ್ಯಾರಂಟಿಗಳನ್ನು ನೀಡಲು ತೀರ್ಮಾನಿಸಿ ಅದರಂತೆ ಇಂದು ಪ್ರಥಮ ಗ್ಯಾರಂಟಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದೆ. ಉಳಿದ ನಾಲ್ಕು ಆಶ್ವಾಸನೆಗಳನ್ನು ಹಂತಹಂತವಾಗಿ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಕರುನಾಡಿಗೆ ಮೂರು ದಿನದಲ್ಲಿ ಮಳೆಯಾಗದಿದ್ದರೆ ಮೋಡ ಬಿತ್ತನೆ ಮಾಡಲು ನಿರ್ಧಾರ

ಮೊದಲ ದಿನ ಜನಪ್ತಿನಿಧಿಗಳು, ಅಧಿಕಾರಿಗಳ ಸಂಚಾರ: ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಪ್ರಥಮ ದಿನದಂದು ತೂಬಗೆರೆ, ವಿಜಯಪುರ, ಬೂದಿಗೆರೆ, ಬೆಂಗಳೂರು ಹಾಗು ಚಿಕ್ಕಬಳ್ಳಾಪುರಕ್ಕೆ ಮೊದಲ ಪ್ರಯಾಣ ಬೆಳೆಸಿದವು. ಜಿಲ್ಲಾಧಿಕಾರಿ ಆರ್‌.ಲತಾ, ಉಪ ವಿಭಾಗಾಧಿಕಾರಿ ತೇಜಸ್‌ಕುಮಾರ್‌, ತಹಸೀಲ್ದಾರ್‌ ಶಿವರಾಜ್‌, ಪುರಸಭಾ ಮುಖ್ಯಾಧಿಕಾರಿ ದೊಡ್ಡಮಲವಯ್ಯ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ತಕ್ಷ ಬಿ.ರಾಜಣ್ಣ, ಮಾಜಿ ಪುರಸಭಾಧ್ಯಕ್ಷ ಸಿ.ಜಗನ್ನಾಥ್‌, ಬ್ಲಾಕ್‌ ಕಾಂಗ್ರಸ್‌ ಅಧ್ಯಕ್ಷರಾದ ಪ್ರಸನ್ನಕುಮಾರ್‌, ರಂಗಪ್ಪ , ಶಾಂತಕುಮಾರ್‌, ಕೆ.ಸಿ.ಮಂಜುನಾಥ್‌, ಮಾಜಿ ಪುರಸಭಾಧ್ಯಕ್ಷ ಎಂ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯೆ ಸವಿತಾ ವೆಂಕಟಸ್ವಾಮಿ, ಅನಂತಕುಮಾರಿ ಚಿನ್ನಪ್ಪ ಉಪಸ್ಥಿತರಿದ್ದರು. ಉಚಿತ ಪ್ರಯಾಣದ ಯೋಜನೆ ಬಗ್ಗೆ ಆವತಿಯ ರಾಧಾಮಣಿ ಹಾಗು ಮಾಣಿಕ್ಯಮ್ಮ ಮಾತನಾಡಿದರು. ಸಾರಿಗೆ ಇಲಾಖೆಯ ಮಂಜುನಾಥ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

Follow Us:
Download App:
  • android
  • ios