ಉಪಚುನಾವಣೆಗೆ ಕುಟುಂಬದ ಕುಡಿಗಳಿಗೆ ಟಿಕೆಟ್ ಘೋಷಿಸಿದ ಕಾಂಗ್ರೆಸ್, ಮುಸ್ಲಿಂ ನಾಯಕರಿಗೆ ಹಿನ್ನಡೆ, ಬಾಗಲಕೋಟೆಯಲ್ಲಿ ಉಮೇಶಿ ಮೇಟಿಗೆ ಟಿಕೆಟ್ ನೀಡಿದ್ದರೆ, ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಮಲ್ಲಿಕಾರ್ಜುನಗೆ ಟಿಕೆಟ್ ಘೋಷಣೆ ಮಾಡಲಾಗಿದೆ. 

ಬೆಂಗಳೂರು (ಮಾ.22) ಕರ್ನಾಟಕ ಉಪ ಚುನಾವಣೆ ಕದನ ಆರಭಂದಲ್ಲೇ ಕಾವೇರಿದೆ. ಅದರಲ್ಲೂ ಕರ್ನಾಟಕ ಕಾಂಗ್ರೆಸ್ ಟಿಕೆಟ್ ಗೊಂದಲ, ಹಗ್ಗಜಗ್ಗಾಟ ತೀವ್ರಗೊಂಡಿತ್ತು. ಹಲವು ಸುತ್ತಿನ ಮಾತುಕತೆ, ಅಲ್ಪ ಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂಬ ಮುಸ್ಲಿಂ ನಾಯಕರ ಒತ್ತಾಯದ ನಡುವೆ ಎರಡು ಕ್ಷೇತ್ರದಲ್ಲಿ ಕುಟುಂಬದ ಕುಡಿಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. ಬಾಗಲಕೋಟೆಯಲ್ಲಿ ಉಮೇಶ್ ಮೇಟಿಗೆ ಟಿಕೆಟ್ ನೀಡಿದ್ದರೆ, ದಾವಣಗೆರೆ ದಕ್ಷಿಣ ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ್ ಮಲ್ಲಿಕಾರ್ಜುನ ಟಿಕೆಟ್ ನೀಡಲಾಗಿದೆ. ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ಮೇರೆಗೆ ಕೆ ಸಿ ವೇಣುಗೋಪಾಲ ಅಧಿಕೃತ ಘೋಷಣೆ ಮಾಡಿದ್ದಾರೆ.

ಹೆಚ್‌ವೈ ಮೇಟಿ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಮೇಟಿಯ ನಾಲ್ಕು ಪುತ್ರರಲ್ಲಿ ಟಿಕೆಟ್‌ಗಾಗಿ ತೀವ್ರ ಸ್ಪರ್ಧೆ ಎರ್ಪಟ್ಟಿತ್ತು. ಈ ಪೈಕಿ ಮೇಟಿಯ ಕಿರಿಯ ಪುತ್ರ ಉಮೇಶ್ ಮೇಟಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಇತ್ತ ದಾವಣೆಗೆರೆಯಲ್ಲಿ ಟಿಕೆಟ್ ಘೋಷಣೆಗೂ ಮೊದಲೇ ಶಾಮನೂರು ಶಿವಶಂಕಪ್ಪ ಅವರ ಮೊಮ್ಮದ ಸಮರ್ಥ ಮಲ್ಲಿಕಾರ್ಜುನ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದು ಸ್ಥಳೀಯ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು. ತೀವ್ರಗೊಂಡ ಸಮಸ್ಯೆಯನ್ನು ಕಾಂಗ್ರೆಸ್ ಹೈಕಮಾಂಡ್ ಬಗೆಹರಿಸಿ ಟಿಕೆಟ್ ಘೋಷಣೆ ಮಾಡಿದೆ.

ಟಿಕೆಟ್‌ಗಾಗಿ ಬಿಗಿ ಪಟ್ಟು ಹಿಡಿದಿದ್ದ ಮುಸ್ಲಿಂ ನಾಯಕರು

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡಬೇಕು ಎಂದು ಮುಸ್ಲಿಂ ಮುಖಂಡರು ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿ ಚರ್ಚಿಸಿದ್ದರು. ದಾವಣಗರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳು ಹೆಚ್ಚಿದೆ. ಹೀಗಾಗಿ ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡಬೇಕು ಎಂದು ಬಿಗಿ ಪಟ್ಟು ಹಿಡಿದಿದ್ದರು. ಇತ್ತ ಸಟಿವ ಜಮೀರ್ ಅಹಮ್ಮದ್, ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡದಿದ್ದರೆ ರಾಜೀನಾಮೆ ನೀಡುವುದಾಗಿ ಬಾಂಬ್ ಹಾಕಿದ್ದರು. ಆದರೆ ಮುಸ್ಲಿಂ ನಾಯಕರ ಬೇಡಿಕೆಗೆ ಸೊಪ್ಪು ಹಾಕದ ಕಾಂಗ್ರೆಸ್ ಹೈಕಮಾಂಡ್ ಸಮರ್ಥ ಮಲ್ಲಿಕಾರ್ಜುನಗೆ ಟಿಕೆಟ್ ನೀಡಿದೆ.

ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

ಕರ್ನಾಟಕ ಉಪಚುನಾವಣೆ ಕದನದಲ್ಲಿ ನಾಳೆ ನಾಮಪತ್ರ ಸಲ್ಲಿಕೆ ಮಾಡಲು ಕೊನಯೆ ದಿನವಾಗಿದೆ. ದಾವಣೆಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ ಮಲ್ಲಿಕಾರ್ಜುನ ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇತ್ತ ಬಾಗಲಕೋಟೆಯಲ್ಲಿ ಉಮೇಶ್ ಮೇಟಿ ನಾಳೆ ನಾಪಮತ್ರ ಸಲ್ಲಿಕೆ ಮಾಡಲಿದ್ದಾರೆ.