Asianet Suvarna News Asianet Suvarna News

ಬೆಂಗಳೂರು ಬಂದ್ ಆಯ್ತು, ನಾಡಿದ್ದು ಕರ್ನಾಟಕ ಬಂದ್! ಡಿಕೆಶಿ ಏನು ಹೇಳಿದ್ರು?

ಬೆಂಗಳೂರು ಬಂದ್‌ ನಂತರ ಇನ್ನೆರಡು ದಿನಗಳಲ್ಲಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯ ಮತ್ತೊಂದು ಬಂದ್‌ ಎದುರಿಸಬೇಕಾದ ಸನ್ನಿವೇಶ ಎದುರಾಗಲಿದೆ. ರಾಜ್ಯದ ರೈತರು ಸಂಕಷ್ಟದಲ್ಲಿರುವಾಗ ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ತಡೆಯಬೇಕೆಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ವಾಟಾಳ್‌ ನಾಗರಾಜ್‌ ನೇತೃತ್ವದ ಕನ್ನಡಪರ ಸಂಘಟನೆಗಳ ಒಕ್ಕೂಟ ಸೆ. 29ರಂದು ರಾಜ್ಯ ಬಂದ್‌ಗೆ ಕರೆ ನೀಡಿವೆ. 

Karnataka bandh by Kannada organizations on September 29 bengaluru rav
Author
First Published Sep 27, 2023, 1:31 AM IST

ಬೆಂಗಳೂರು (ಸೆ.27): ಬೆಂಗಳೂರು ಬಂದ್‌ ನಂತರ ಇನ್ನೆರಡು ದಿನಗಳಲ್ಲಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯ ಮತ್ತೊಂದು ಬಂದ್‌ ಎದುರಿಸಬೇಕಾದ ಸನ್ನಿವೇಶ ಎದುರಾಗಲಿದೆ.

ರಾಜ್ಯದ ರೈತರು ಸಂಕಷ್ಟದಲ್ಲಿರುವಾಗ ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ತಡೆಯಬೇಕೆಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ವಾಟಾಳ್‌ ನಾಗರಾಜ್‌ ನೇತೃತ್ವದ ಕನ್ನಡಪರ ಸಂಘಟನೆಗಳ ಒಕ್ಕೂಟ ಸೆ. 29ರಂದು ರಾಜ್ಯ ಬಂದ್‌ಗೆ ಕರೆ ನೀಡಿವೆ. 

ಒಂದು ದಿನದ ಬೆಂಗಳೂರು ಬಂದ್‌ಗೆ 1500 ಕೋಟಿ ರು. ವಹಿವಾಟು ನಷ್ಟ!

ಮಂಗಳವಾರ ಬೆಂಗಳೂರು ಬಂದ್‌ ಯಶಸ್ವಿಯಾದ ಮಾದರಿಯಲ್ಲಿಯೇ ಶುಕ್ರವಾರ ರಾಜ್ಯ ಬಂದ್‌ ಯಶಸ್ವಿಗೊಳಿಸುವಂತೆ ಕನ್ನಡಪರ ಸಂಘಟನೆಗಳ ಒಕ್ಕೂಟ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು ಬಂದ್‌ಗೆ ಬೆಂಬಲ ನೀಡದ ಬಹುತೇಕ ಸಂಘಟನೆಗಳು ಶುಕ್ರವಾರದ ರಾಜ್ಯ ಬಂದ್‌ಗೆ ಬೆಂಬಲ ನೀಡಿವೆ. ಅದರ ಜತೆಗೆ ಜಿಲ್ಲಾ ಮಟ್ಟದ 500ಕ್ಕೂ ಹೆಚ್ಚಿನ ಸಂಘಟನೆಗಳೂ ಬಂದ್‌ ಬೆಂಬಲಿಸಿದ್ದು, ಒಟ್ಟಾರೆ 700ಕ್ಕೂ ಹೆಚ್ಚಿನ ಸಂಘಟನೆಗಳು ಬಂದ್‌ನ್ನು ಬೆಂಬಲಿಸುತ್ತಿವೆ. ಹೀಗಾಗಿ ಶುಕ್ರವಾರದ ಬಂದ್‌ ವೇಳೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹಲವು ಸೇವೆಗಳು ಸ್ಥಗಿತವಾಗುವ ಸಾಧ್ಯತೆಗಳಿವೆ.

ಪ್ರತಿಭಟನಾ ಮೆರವಣಿಗೆ, ಸಿಎಂಗೆ ಮನವಿ

ಸೆ. 29ರಂದು ಬೆಳಗ್ಗೆ 11 ಗಂಟೆಗೆ ಟೌನ್‌ಹಾಲ್‌ನಿಂದ ಸ್ವಾತಂತ್ರ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ. ನಂತರ ಪ್ರತಿಭಟನಾ ಸಭೆ ನಡೆಸಲಾಗುತ್ತದೆ. ಪ್ರತಿಭಟನಾ ಸಭೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾವೇರಿ ನೀರು ತಮಿಳುನಾಡಿಗೆ ಹರಿಸದಂತೆ ಮನವಿ ಸಲ್ಲಿಸಲಾಗುತ್ತದೆ.

ರಾಜ್ಯ ಬಂದ್‌ ವೇಳೆ ಅಗತ್ಯ ವಸ್ತುಗಳ ಸಾಗಣೆ, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನೂ ಸ್ಥಗಿತಗೊಳಿಸಲು ಕನ್ನಡಪರ ಸಂಘಟನೆಗಳ ಒಕ್ಕೂಟ ಮನವಿ ಮಾಡಿದೆ. ಬಂದ್‌ ವೇಳೆ ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡು ಶಾಂತಿಯುತ ಬಂದ್‌ ಮಾಡಲಾಗುತ್ತದೆ ಎಂದು ಒಕ್ಕೂಟ ತಿಳಿಸಿದೆ. ಅದೇ ರೀತಿ ಪ್ರತಿ ಜಿಲ್ಲೆಯಲ್ಲೂ ಆಯಾ ಜಿಲ್ಲಾ ಸಂಘಗಳಿಂದ ಬೆಂಬಲ ಕೋರಲಾಗಿದ್ದು, ಕನ್ನಡಪರ ಸಂಘಟನೆಗಳಷ್ಟೇ ಅಲ್ಲದೆ, ರೈತ ಸಂಘಗಳು, ಸಮುದಾಯಗಳ ಸಂಘಗಳು ಬೆಂಬಲ ನೀಡುತ್ತಿವೆ.

ರೈತರಿಗೆ ತೊಂದರೆ ಆದ್ರೆ ನಾವು ಸುಮ್ಮನೆ ಕೂರಬೇಕಾ? ರೈತಪರ ಹೋರಾಟಕ್ಕೆ ನಾನು ಸಿದ್ಧ: ನಟಿ ರಾಗಿಣಿ ದ್ವಿವೇದಿ

ಬಂದ್‌ ಸಂದರ್ಭದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸುವಂತೆ ಮಾಡಲು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಸ್ಥಗಿತಗೊಳಿಸಲು ಕನ್ನಡಪರ ಸಂಘಟನೆಗಳ ಒಕ್ಕೂಟ ನಿರ್ಧರಿಸಿವೆ. ಅದರ ಜತೆಗೆ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಮುತ್ತಿಗೆ ಹಾಕುವ ಬಗ್ಗೆಯೂ ಚರ್ಚಿಸಲಾಗಿದೆ.

ಮತ್ತೊಂದು ಬಂದ್ ಅಗತ್ಯವಿಲ್ಲ: ಡಿಕೆಶಿ

ವಿವಿಧ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಬೆಂಗಳೂರು ಬಂದ್‌ ವೇಳೆ ರಾಜ್ಯದ ಶಾಂತಿಯುತ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸೆ.29ರಂದು ಮತ್ತೊಂದು ಬಂದ್‌ ಮಾಡುವ ಅಗತ್ಯವಿಲ್ಲ. ನ್ಯಾಯಾಲಯ ಕೂಡ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ಪಕ್ಷಾತೀತವಾಗಿ ಹೋರಾಟ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ‌. ಎಲ್ಲವೂ ಶಾಂತಿಯುತವಾಗಿ ನಡೆದಿದೆ. ಈ ಮಧ್ಯೆ, ಕೆಲ ಸಂಘಟನೆಗಳು ಸೆ.29ಕ್ಕೆ ಮತ್ತೆ ರಾಜ್ಯ ಬಂದ್‌ ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರ ಅಗತ್ಯವಿಲ್ಲ. ನ್ಯಾಯಾಲಯ ಕೂಡ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಭಾವಿಸಿದ್ದೇನೆ. ಹಾಗಾಗಿ ಮುಂದೆ ರಾಜ್ಯದ ಜನರೆಲ್ಲರೂ ಮಳೆಗಾಗಿ ಪ್ರಾರ್ಥನೆ ಮಾಡೋಣ ಎಂದರು.

ಇನ್ನು, ಬಂದ್‌ ವೇಳೆ ಜಯನಗರದ ಹೋಟೆಲ್‌ ವೊಂದರ ಮೇಲೆ ಕಲ್ಲು ತೂರಿ ಕೆಲ ಕಿಡಿಗೇಡಿಗಳು ದಾಂಧಲೆ ನಡೆಸಿರುವ ಪ್ರಕರಣ ಸಂಬಂಧ ಅವರು ಯಾರೇ ಆಗಿದ್ದರು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್‌ ಹೇಳಿದರು.

ಕುಮಾರಸ್ವಾಮಿಗೆ ತಿರುಗೇಟು

ರಾಜ್ಯದಲ್ಲಿ ಕನ್ನಡಿಗರ ಸರ್ಕಾರವಿದೆಯೋ ಸ್ಟಾಲಿನ್‌ಗೆ ಅಡವಿಟ್ಟ ಸರ್ಕಾರವಿದೆಯೋ ಎಂದಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರ ಟೀಕೆಗೆ ಇದೇ ವೇಳೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್‌, ಅವರು ತಮ್ಮ ಅಸ್ತಿತ್ವಕ್ಕೆ ಆರೋಪ ಮಾಡುತ್ತಾರೆ. ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಆಗುವುದಿಲ್ಲ. ಬೇಸರ ಮಾಡಿಕೊಳ್ಳಲೂ ಹೋಗುವುದಿಲ್ಲ. ಹಿಂದೆ ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ದೇವೇಗೌಡರು ಏನು ಪತ್ರ ಬರೆದಿದ್ದರು. ಈಗ ಮೋದಿ ಅವರಿಗೆ ಏನು ಪತ್ರ ಬರೆದಿದ್ದಾರೆ ಎಂದು ಕುಮಾರಸ್ವಾಮಿ ಅವರಿಗೆ ಗೊತ್ತಿದೆಯೇ? ನೀರಿನ ವಿಚಾರದಲ್ಲಿ ರಾಜಕಾರಣ ಬಿಟ್ಟು ಕುಮಾರಸ್ವಾಮಿ ಅವರು ರಾಜ್ಯದ ಜನರ ಹಿತ ಕಾಪಾಡುವ ಕೆಲಸ ಮಾಡಲಿ ಎಂದರು.

Follow Us:
Download App:
  • android
  • ios