ಬೆಂಗಳೂರು ವಿಮಾನ ನಿಲ್ದಾಣದಲ್ಲಿ, ದುಬೈ ಮೂಲಕ ಅಮೆರಿಕಾಗೆ ತೆರಳುತ್ತಿದ್ದ ಹುಬ್ಬಳ್ಳಿ ಮೂಲದ ಮಹಿಳೆಯ ಲಗೇಜ್ ಬ್ಯಾಗ್‌ನಿಂದ ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣ ಕಳ್ಳತನವಾಗಿದೆ. ಚೆಕ್-ಇನ್ ನಂತರ ಈ ಘಟನೆ ನಡೆದಿದ್ದು, ವಿಮಾನ ನಿಲ್ದಾಣದ ಸಿಬ್ಬಂದಿಯ ಮೇಲೆ ಶಂಕೆ ವ್ಯಕ್ತವಾಗಿದೆ.

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್)ದಲ್ಲಿ ಕೋಟಿ ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣ ಕಳ್ಳತನ ನಡೆದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನಿಂದ ದುಬೈಗೆ ತೆರಳುತ್ತಿದ್ದ ಮಹಿಳೆಯೊಬ್ಬರ ಪ್ರಯಾಣಿಕರ ಲಗೇಜ್ ಬ್ಯಾಗ್‌ನಲ್ಲಿದ್ದ ಅಮೂಲ್ಯ ಚಿನ್ನ ಮತ್ತು ವಜ್ರಾಭರಣಗಳು ನಾಪತ್ತೆಯಾಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ಹುಬ್ಬಳ್ಳಿ ಮೂಲದ ಮಹಿಳೆ ಅಮೆರಿಕಾಕ್ಕೆ ತೆರಳುತ್ತಿದ್ದರು

ಹುಬ್ಬಳ್ಳಿ ಮೂಲದ ಈ ಮಹಿಳೆ ಕಳೆದ ನವೆಂಬರ್ ತಿಂಗಳಲ್ಲಿ ದುಬೈ ಮೂಲಕ ಅಮೆರಿಕಾಗೆ ತೆರಳಿದ್ದರು. ಅಮೆರಿಕಾದಲ್ಲಿ ತನ್ನ ಮಗನೊಂದಿಗೆ ವಾಸವಾಗಿದ್ದ ಅವರು, ಇತ್ತೀಚೆಗೆ ರಾಜ್ಯಕ್ಕೆ ವಾಪಸ್ ಆಗಿದ್ದು, ಇದೀಗ ಕಳ್ಳತನದ ಬಗ್ಗೆ ದೂರು ದಾಖಲಿಸಿದ್ದಾರೆ. ಮಹಿಳೆ ಚೆಕ್-ಇನ್ ಪ್ರಕ್ರಿಯೆಯ ವೇಳೆ ಲಗೇಜ್ ಬ್ಯಾಗ್‌ನೊಳಗೆ ಚಿನ್ನಾಭರಣ ಇರುವುದನ್ನು ವಿಮಾನ ನಿಲ್ದಾಣದ ಸಿಬ್ಬಂದಿಗೆ ತೋರಿಸಿ, ನಿಯಮಾನುಸಾರ ಬ್ಯಾಗ್‌ಗೆ ಟ್ಯಾಗ್ ಮಾಡಿಸಿದ್ದರು. ನಂತರ ಆ ಬ್ಯಾಗ್ ಅನ್ನು ವಿಮಾನದ ಲಗೇಜ್ ವಿಭಾಗಕ್ಕೆ ಕಳುಹಿಸಲಾಗಿತ್ತು. ಆದರೆ ದುಬೈ ತಲುಪಿದ ಬಳಿಕ ಬ್ಯಾಗ್ ಪರಿಶೀಲನೆ ನಡೆಸಿದಾಗ ಅದರೊಳಗೆ ಇರಿಸಿದ್ದ ಚಿನ್ನ ಮತ್ತು ವಜ್ರಾಭರಣಗಳು ಸಂಪೂರ್ಣವಾಗಿ ಮಾಯವಾಗಿರುವುದು ಗೊತ್ತಾಗಿದೆ.

1 ಕೋಟಿ ಮೌಲ್ಯದ ಚಿನ್ನ, ವಜ್ರಾಭರಣ

ಕಳ್ಳತನಗೊಂಡ ವಸ್ತುಗಳಲ್ಲಿ ಸುಮಾರು 790 ಗ್ರಾಂ ಚಿನ್ನಾಭರಣ ಹಾಗೂ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ವಜ್ರಾಭರಣ ಸೇರಿವೆ. ಒಟ್ಟಾರೆ ಈ ಕಳ್ಳತನದ ಮೌಲ್ಯ ಕೋಟಿ ರೂಪಾಯಿಗೆ ಸಮೀಪದಲ್ಲಿದೆ ಎಂದು ಅಂದಾಜಿಸಲಾಗಿದೆ. ಚೆಕ್-ಇನ್ ನಂತರ ಲಗೇಜ್ ವಿಮಾನಕ್ಕೆ ಸೇರಿಸುವ ಪ್ರಕ್ರಿಯೆಯ ಮಧ್ಯೆ ಈ ಕಳ್ಳತನ ನಡೆದಿರುವ ಸಾಧ್ಯತೆ ಹೆಚ್ಚಿರುವುದರಿಂದ, ವಿಮಾನ ನಿಲ್ದಾಣದ ಸಿಬ್ಬಂದಿಯಿಂದಲೇ ಚಿನ್ನಾಭರಣ ಕಳ್ಳತನವಾಗಿರಬಹುದೆಂಬ ಗಂಭೀರ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಬೆಂಗಳೂರಿನ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ದೂರು

ಮಹಿಳೆ ಬೆಂಗಳೂರಿನ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಲಗೇಜ್ ಹ್ಯಾಂಡ್ಲಿಂಗ್ ಸಿಬ್ಬಂದಿ, ಸಿಸಿಟಿವಿ ದೃಶ್ಯಾವಳಿ ಹಾಗೂ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ದೊಡ್ಡ ಪ್ರಮಾಣದ ಕಳ್ಳತನ ನಡೆದಿರುವುದು ಪ್ರಯಾಣಿಕರ ಭದ್ರತೆ ಮತ್ತು ಲಗೇಜ್ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣದ ತನಿಖೆಯಿಂದ ಇನ್ನಷ್ಟು ಸತ್ಯಾಂಶಗಳು ಹೊರಬೀಳುವ ನಿರೀಕ್ಷೆ ಇದೆ.