ಇರಾನ್-ಇಸ್ರೇಲ್ ಯುದ್ಧದ ಕಾರಣದಿಂದಾಗಿ, ಬೆಂಗಳೂರಿನ ಎಂಟು ಮಂದಿ ಹಿರಿಯ ಸ್ನೇಹಿತರು ಕತಾರ್ನ ದೋಹಾ ಬಂದರಿನಲ್ಲಿ ಕ್ರೂಸ್ ಶಿಪ್ನಲ್ಲಿ ಸಿಲುಕಿಕೊಂಡಿದ್ದಾರೆ. ಇತರ ದೇಶಗಳು ತಮ್ಮ ಪ್ರಜೆಗಳನ್ನು ರಕ್ಷಿಸಿದ್ದರೂ, ಭಾರತ ಸರ್ಕಾರದ ವಿಳಂಬ ಮಾಡಿದೆ ಎಂದು ಸಂತ್ರಸ್ತರ ಆರೋಪ.
ಬೆಂಗಳೂರು (ಮಾ.4): ಇರಾನ್-ಇಸ್ರೇಲ್ ನಡುವಿನ ಯುದ್ಧದಿಂದಾಗಿ ಪ್ರವಾಸಕ್ಕೆ ಹೋಗಿದ್ದ ಕನ್ನಡಿಗರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹನುಮಂತನಗರದ ನಿವಾಸಿಗಳಾದ ಎಂಟು ಮಂದಿ ಹಿರಿಯ ಸ್ನೇಹಿತರು ಹೋಗಿ ಈಗ ಕತಾರ್ನ ದೋಹಾ ಬಂದರಿನಲ್ಲಿ ಸಿಲುಕಿಕೊಂಡಿದ್ದಾರೆ.
ಹನುಮಂತನಗರದ 8 ಮಂದಿ ವೃದ್ಧ ಸ್ನೇಹಿತರು ದೋಹಾ ಸಮುದ್ರದಲ್ಲಿ ಲಾಕ್!
ನಿವೃತ್ತಿಯ ನಂತರದ ದಿನಗಳನ್ನು ಸಂಭ್ರಮದಿಂದ ಕಳೆಯಲು ಪ್ಲಾನ್ ಮಾಡಿದ್ದ ಈ ಎಂಟು ಮಂದಿ ಸ್ನೇಹಿತರು ಈಗ ಅಕ್ಷರಶಃ ಸಂಕಷ್ಟದಲ್ಲಿದ್ದಾರೆ. ಬೆಂಗಳೂರಿನ ಬಸವನಗುಡಿ ಮತ್ತು ಹನುಮಂತನಗರದ ನಿವಾಸಿಗಳಾದ ಮುರುಳಿ ಕೃಷ್ಣ, ವಿಜಯ್ ಕುಮಾರ್, ಶ್ರೀಧರ್, ಅಶೋಕ್ ಕುಮಾರ್, ಆದರ್ಶ ಆನಂದ್ ಕುಮಾರ್, ಬಾಲಾಜಿ, ಸುರೇಶ್ ಬಾಬು ಮತ್ತು ಮುರಳಿ ಅವರು ಕತಾರ್ನ ದೋಹಾ ಬಂದರಿನಲ್ಲಿರುವ ಕ್ರೂಸ್ ಶಿಪ್ನಲ್ಲಿ ಕಳೆದ ಐದು ದಿನಗಳಿಂದ ಸಿಲುಕಿದ್ದಾರೆ.
ನಿರಂತರ ಕ್ಷಿಪಣಿ ದಾಳಿ: ನಿಂತಲ್ಲೇ ನಿಂತ ಕ್ರೂಸ್ ಶಿಪ್
ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದಿಂದಾಗಿ ಸಮುದ್ರ ಮಾರ್ಗಗಳು ಅಸ್ತವ್ಯಸ್ತಗೊಂಡಿವೆ. ಕತಾರ್, ಬಹರೈನ್ ಮತ್ತು ಯುಎಇ ಸುತ್ತಾಡಲು ತೆರಳಿದ್ದ ಇವರ ಕ್ರೂಸ್ ಶಿಪ್, ಯುದ್ಧದ ಭೀತಿಯಿಂದಾಗಿ ಕಳೆದ ಫೆಬ್ರವರಿ 28 ರಿಂದ ದೋಹಾ ಬಂದರಿನಲ್ಲಿಯೇ ಲಂಗರು ಹಾಕಿದೆ. ಸಮುದ್ರದ ನಡುವೆ ಸುರಕ್ಷಿತವಾಗಿರಲು ಹಡಗು ನಿಂತಲ್ಲೇ ನಿಂತಿದ್ದು, ಪ್ರವಾಸಿಗರು ಹಡಗಿನಿಂದ ಹೊರಬರಲಾರದೆ ಕಂಗಾಲಾಗಿದ್ದಾರೆ.
ಬೇರೆ ದೇಶಗಳ ರಕ್ಷಣಾ ಕಾರ್ಯ ಚುರುಕು: ಭಾರತದ ವಿಳಂಬಕ್ಕೆ ಆಕ್ರೋಶ
ಅಚ್ಚರಿಯ ವಿಷಯವೆಂದರೆ, ಅದೇ ಶಿಪ್ನಲ್ಲಿದ್ದ ಖಜಾಕಿಸ್ತಾನ್ನ 100ಕ್ಕೂ ಹೆಚ್ಚು ಪ್ರವಾಸಿಗರನ್ನು ಅವರ ದೇಶವು ತಕ್ಷಣವೇ ರಕ್ಷಿಸಿ ಸುರಕ್ಷಿತವಾಗಿ ಕರೆಸಿಕೊಂಡಿದೆ. ಆದರೆ ಭಾರತದ ಕೇವಲ ಎಂಟು ಮಂದಿಯನ್ನು ರಕ್ಷಿಸಲು ಸರ್ಕಾರ ವಿಳಂಬ ಮಾಡುತ್ತಿರುವುದು ಅಲ್ಲಿರುವ ಕನ್ನಡಿಗರ ಆತಂಕವನ್ನು ಹೆಚ್ಚಿಸಿದೆ. 'ಬೇರೆ ದೇಶಗಳು ತಮ್ಮ ಜನರನ್ನು ಕರೆದೊಯ್ಯುತ್ತಿವೆ, ನಮಗೆ ಯಾಕೆ ಈ ವಿಳಂಬ?' ಎಂಬ ಪ್ರಶ್ನೆ ಪ್ರವಾಸಿಗರನ್ನು ಕಾಡುತ್ತಿದೆ.
ಸದ್ಯಕ್ಕೆ ಎಲ್ಲರೂ ಸುರಕ್ಷಿತ: ಮನೆಮಂದಿಯ ಆತಂಕ
ಕ್ರೂಸ್ನಲ್ಲಿ ಸಿಲುಕಿರುವ ಎಂಟು ಮಂದಿಗೂ ಸದ್ಯಕ್ಕೆ ಯಾವುದೇ ಪ್ರಾಣಾಪಾಯವಿಲ್ಲ ಮತ್ತು ಅಗತ್ಯ ಸೌಲಭ್ಯಗಳು ದೊರೆಯುತ್ತಿವೆ. ಆದರೂ, ಯುದ್ಧದ ವಾತಾವರಣ ಮತ್ತು ಐದು ದಿನಗಳಿಂದ ಒಂದೇ ಕಡೆ ಇರುವುದು ಅವರನ್ನು ಮಾನಸಿಕವಾಗಿ ದಣಿಸಿದೆ. ಹನುಮಂತನಗರದಲ್ಲಿರುವ ಅವರ ಕುಟುಂಬಸ್ಥರು ಪ್ರಧಾನಿ ಕಚೇರಿ ಹಾಗೂ ವಿದೇಶಾಂಗ ಇಲಾಖೆಗೆ ಮನವಿ ಮಾಡಿದ್ದು, ಕೂಡಲೇ ಅವರನ್ನು ಏರ್ ಲಿಫ್ಟ್ ಅಥವಾ ರಸ್ತೆ ಮಾರ್ಗದ ಮೂಲಕ ರಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ.

