ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ಗೃಹ ಆರೋಗ್ಯ’ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಔಷಧಿ, ಉಪಕರಣಗಳಿಗಾಗಿ 185 ಕೋಟಿ ರು. ಅನುದಾನ ಬಳಕೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಬೆಂಗಳೂರು (ಜೂ.14): ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ಗೃಹ ಆರೋಗ್ಯ’ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಔಷಧಿ, ಉಪಕರಣಗಳಿಗಾಗಿ 185 ಕೋಟಿ ರು. ಅನುದಾನ ಬಳಕೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಕೋಲಾರ ಜಿಲ್ಲೆಯಲ್ಲಿ ಯೋಜನೆ ಯಶಸ್ವಿಯಾದ ಬೆನ್ನಲ್ಲೇ ‘ಗೃಹ ಆರೋಗ್ಯ’ ಯೋಜನೆ ರಾಜ್ಯಾದ್ಯಂತ ವಿಸ್ತರಣೆಯಾಗಿದ್ದು, ಜೂನ್‌ ತಿಂಗಳ ಅಂತ್ಯದೊಳಗೆ ಜಿಲ್ಲೆಗಳಲ್ಲಿ ತಪಾಸಣಾ ಕಾರ್ಯ ಆರಂಭವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಆಶಾ ಕಾರ್ಯಕರ್ತೆಯರು ಮನೆ, ಮನೆಗೆ ತೆರಳಿ ಅಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ 30 ವರ್ಷ ಮೇಲ್ಪಟ್ಟವರನ್ನು ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ತಪಾಸಣೆಗೆ ಒಳಪಡಲು ನೆರವಾಗಲಿದ್ದಾರೆ ಎಂದು ಹೇಳಿದ್ದಾರೆ. ರಕ್ತದೊತ್ತಡ, ಡಯಾಬಿಟಿಸ್, ಕ್ಯಾನ್ಸರ್ ಸೇರಿ 14 ಅಸಾಂಕ್ರಾಮಿಕ ರೋಗಗಳ ತಪಾಸಣೆ ನಡೆಸಲಿದ್ದಾರೆ. ರೋಗಿಗಳಿಗೆ ಅವರ ಮನೆಗೆ ಉಚಿತವಾಗಿ ಔಷಧಗಳನ್ನು ಒದಗಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಆರೋಗ್ಯ ತಪಾಸಣೆಯಿಂದ ಶೀಘ್ರವಾಗಿ ರೋಗ ಪತ್ತೆ ಜತೆಗೆ ರೋಗ ಉಲ್ಬಣಿಸಿ ಮಾರಣಾಂತಿಕ ಆಗುವುದನ್ನು ತಡೆಯಲು ಸಾಧ್ಯವಿದೆ. ಮುಂಬರುವ ವರ್ಷಗಳಲ್ಲಿ ಹಲವರ ಜೀವ ಉಳಿಸುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಎಸ್‌ಎಂಎಸ್‌ಸಿಎಲ್‌ ಅನುದಾನದಿಂದ 115.08 ಕೋಟಿ ರು., 15ನೇ ಹಣಕಾಸು ಆಯೋಗದ ಅನುದಾನದಿಂದ 40.70 ಕೋಟಿ ರು., ಕೆಎಸ್‌ಎಂಎಸ್‌ಸಿಎಲ್‌ ಉಳಿತಾಯದಿಂದ 29.95 ಕೋಟಿ ರು. ಸೇರಿ 185.74 ಕೋಟಿ ರು. ಬಳಕೆಗೆ ಅನುಮೋದನೆ ನೀಡಲಾಗಿದೆ.

ಈ ಹಣವನ್ನು ಪ್ರೊಟೊಕಾಲ್‌ ಡ್ರಗ್ಸ್‌, ಡಯಾಬಿಟಿಕ್‌ ರೆಟಿನೋಪತಿ, ಮಧುಮೇಹ ಸ್ಕ್ರೀನಿಂಗ್‌ಗಾಗಿ ಸ್ಟ್ರಿಪ್‌ಗಳು ಮತ್ತು ಲ್ಯಾನ್ಸೆಟ್‌ಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ಮಧುಮೇಹ ನರರೋಗ ತಪಾಸಣೆ, ಗರ್ಭಕಂಠದ ಕ್ಯಾನ್ಸರ್‌ಗೆ ಪ್ಯಾಪ್‌ ಸ್ಮೀಯರ್‌ಗಳು, ಜಿಲ್ಲಾ ಆಸ್ಪತ್ರೆ ಮಟ್ಟದಲ್ಲಿ ಮಧುಮೇಹ ನರರೋಗ ತಪಾಸಣೆ, ಕೊಲೊಸ್ಕೋಪಿ ಉಪಕರಣಗಳಿಗೆ, ಸ್ಲೀಪ್‌ ಅಪ್ನಿಯಾ ಚಿಕಿತ್ಸೆಗಾಗಿ ಪ್ರತ್ಯೇಕವಾಗಿ ಹಂಚಿಕೆ ಮಾಡಲಾಗಿದೆ.