Karnataka Rains: ಉತ್ತರ ಕನ್ನಡ, ಬೆಳಗಾವಿಯಲ್ಲಿ ಭಾರೀ ಮಳೆ: ಒಬ್ಬ ಸಾವು
ರಾಜ್ಯದ ಅಲ್ಲಲ್ಲಿ ಕಳೆದ ಕೆಲದಿನಗಳಿಂದ ತೀವ್ರವಾಗಿದ್ದ ಮಳೆ ಆರ್ಭಟ ಬಹುತೇಕ ಕಡೆ ಕ್ಷೀಣಗೊಂಡಿದೆ. ಆದರೆ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಸೋಮವಾರ ಭಾರೀ ಮಳೆಯಾಗಿದ್ದು ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರು (ಸೆ.13): ರಾಜ್ಯದ ಅಲ್ಲಲ್ಲಿ ಕಳೆದ ಕೆಲ ದಿನಗಳಿಂದ ತೀವ್ರವಾಗಿದ್ದ ಮಳೆ ಆರ್ಭಟ ಬಹುತೇಕ ಕಡೆ ಕ್ಷೀಣಗೊಂಡಿದೆ. ಆದರೆ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಸೋಮವಾರ ಭಾರೀ ಮಳೆಯಾಗಿದ್ದು ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಏತನ್ಮಧ್ಯೆ ಮನೆ ಕುಸಿದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ವರದಿಯಾಗಿದೆ. ಹಾವೇರಿ, ಗದಗ, ಧಾರವಾಡ, ಕೊಡಗು ಜಿಲ್ಲೆಗಳಲ್ಲೂ ಸಾಧಾರಣ ಮತ್ತು ತುಂತುರು ಮಳೆಯಾಗಿದೆ.
ನೆರೆಯ ಮಹಾರಾಷ್ಟ್ರ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಲಪ್ರಭಾ, ಘಟಪ್ರಭಾ ನದಿಗಳ ಅಬ್ಬರ ಹೆಚ್ಚಳವಾಗಿರುವುದರಿಂದ ಸಹಜವಾಗಿ ಈ ನದಿ ತೀರ ವ್ಯಾಪ್ತಿಯಲ್ಲಿ ಪ್ರವಾಹದ ಪರಿಸ್ಥಿತಿ ತಲೆದೋರಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 17 ಸೇತುವೆಗಳು ಮುಳುಗಡೆಯಾಗಿದ್ದು 35ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಖಾನಾಪುರದ ತಾಲೂಕಿನಲ್ಲಿ ಸತತ ಮಳೆಯ ಕಾರಣ ಭೀಮಗಡ ವನ್ಯಧಾಮದ 7 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಹಳ್ಳಗಳಲ್ಲಿ ಅಪಾಯದಮಟ್ಟಮೀರಿ ನೀರು ಹರಿಯುತ್ತಿವೆ. ಹೀಗಾಗಿ ಈ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
Karnataka Rains: ಮಳೆ ಸಂತ್ರಸ್ತರಿಗೆ ಸಾಂಕ್ರಾಮಿಕ ರೋಗದ ಭೀತಿ..!
ಇನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗುಂಡಬಾಳ ನದಿಗೆ ಪ್ರವಾಹ ಬಂದಿದ್ದರಿಂದ ಹತ್ತಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು 20 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಈ ನಡುವೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 12 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದು, ನದಿ ದಡದಲ್ಲಿ ಪ್ರವಾಹದ ಭೀತಿ ಆರಂಭವಾಗಿದೆ. ಸಿದ್ದಾಪುರದ ಕ್ಯಾದಗಿ ಗ್ರಾಮ ಪಂಚಾಯತಿಯ ನಾರಾಯಣ ಹರಿಜನ ಅವರ ಮನೆಯ ಗೋಡೆ ಭಾನುವಾರ ಕುಸಿದುಬಿದ್ದಿದೆ. ಗೋಡೆಯ ಅಡಿಯಲ್ಲಿ ಸಿಲುಕಿ ತೀವ್ರ ಗಾಯಗೊಂಡಿದ್ದ ಚಂದ್ರಶೇಖರ ನಾರಾಯಣ ಹಸ್ಲರ(21) ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಕೊನೆಯುಸಿರೆಳೆದಿದ್ದಾರೆ.
ತುಂಬಿ ಹರಿದ ಹಳ್ಳ-ಕೊಳ್ಳ: ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಭಾನುವಾರ ಭಾರಿ ಮಳೆ ಬಿದ್ದಿದೆ. ಜೋಯಿಡಾ ಹಾಗೂ ಸಿದ್ದಾಪುರಗಳಲ್ಲಿ ಭಾನುವಾರ ಇಡೀ ದಿನ ಭಾರಿ ಮಳೆಯಾಗಿದೆ. ಮಳೆಯಿಂದ ಜನಜೀವನ ವ್ಯತ್ಯಯವಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳಗಳಲ್ಲೂ ಸಾಧಾರಣ ಮಳೆಯಾಗಿದೆ. ದಿನವಿಡೀ ಮೋಡ ಕವಿದ ವಾತಾವರಣ ಉಂಟಾಗಿತ್ತು. ಶಿರಸಿ, ಯಲ್ಲಾಪುರ ತಾಲೂಕುಗಳ ವಿವಿಧೆಡೆ ಉತ್ತಮ ಮಳೆಯಾಗಿದೆ.
ಭಾರಿ ಮಳೆಗೆ ಒಬ್ಬರು ಬಲಿ, ಮನೆ ಕುಸಿತ: ಉತ್ತರ ಕನ್ನಡದ ಸಿದ್ಧಾಪುರ ಹಾಗೂ ಹೊನ್ನಾವರ ಸೇರಿದಂತೆ ವಿವಿಧೆಡೆ ಭಾರಿ ಮಳೆಯಾಗಿದ್ದು, ಸಿದ್ಧಾಪುರದಲ್ಲಿ ಮನೆ ಕುಸಿದು ಒಬ್ಬರು ಮೃತಪಟ್ಟಿದ್ದಾರೆ. ಹೊನ್ನಾವರದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು 20 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ನಾಲ್ಕು ಮನೆಗಳು ಕುಸಿದಿವೆ. ಸಿದ್ದಾಪುರ, ಜೋಯಿಡಾ, ಕಾರವಾರ, ಹೊನ್ನಾವರ, ಅಂಕೋಲಾ, ಕುಮಟಾಗಳಲ್ಲಿ ಸೋಮವಾರ ಭಾರಿ ಮಳೆಯಾಗಿದೆ.
ಕರ್ನಾಟಕದಲ್ಲಿ ಮಳೆ ಹಾನಿ: 10 ದಿನದೊಳಗೆ ಕೇಂದ್ರ ಸರ್ಕಾರಕ್ಕೆ ವರದಿ
ಸಿದ್ದಾಪುರದ ಕ್ಯಾದಗಿ ಗ್ರಾಮ ಪಂಚಾಯತಿಯ ನಾರಾಯಣ ಹರಿಜನ ಅವರ ಮನೆಯ ಗೋಡೆ ಭಾನುವಾರ ಕುಸಿದುಬಿದ್ದಿದೆ. ಗೋಡೆಯ ಅಡಿಯಲ್ಲಿ ಸಿಲುಕಿ ತೀವ್ರ ಗಾಯಗೊಂಡಿದ್ದ ಚಂದ್ರಶೇಖರ ನಾರಾಯಣ ಹಸ್ಲರ ಆಸ್ಪತ್ರೆಗೆ ಕರೆದೊಯ್ಯುವಾಗಿ ಕೊನೆಯುಸಿರೆಳೆದರು. ಹೊನ್ನಾವರದಲ್ಲಿ ಗುಂಡಬಾಳ ನದಿಗೆ ಭಾನುವಾರ ತಡರಾತ್ರಿ ಭಾರಿ ಪ್ರವಾಹ ಬಂದಿದ್ದರಿಂದ 10ಕ್ಕೂ ಹೆಚ್ಚು ಮನೆಗಳು ಜಲಾವೃತವಾದವು. ಚಿಕ್ಕನಕೋಡ ಗ್ರಾಪಂ ವ್ಯಾಪ್ತಿಯ ಚಿಕ್ಕನಕೋಡ, ಗುಂಡಿಬೈಲ…, ಗುಂಡಬಾಳ, ನಾಥಗೇರಿ, ಕಡಗೇರಿ, ಕೂಡ್ಲ ಹಡಿನಬಾಳ, ಖರ್ವಾಗಳಲ್ಲಿ ಪ್ರವಾಹ ತಲೆದೋರಿದೆ.