Asianet Suvarna News Asianet Suvarna News

ವಿದ್ಯುತ್‌ ಅಪಘಾತ ತಡೆಗೆ ಮಾರ್ಗಸೂಚಿಗೆ ಸಮಿತಿ; ಇಂಧನ ಇಲಾಖೆ ಆದೇಶ

  ವಿದ್ಯುತ್‌ ಅವಘಡ ತಡೆ ಸೇರಿದಂತೆ ಸುರಕ್ಷತಾ ಕ್ರಮ ಕೈಗೊಳ್ಳಲು ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳಲ್ಲೂ (ಎಸ್ಕಾಂ) ಅಗತ್ಯ ಮಾರ್ಗಸೂಚಿ ರೂಪಿಸಲು ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಿ ಇಂಧನ ಇಲಾಖೆ ಆದೇಶಿಸಿದೆ.

Guidelines for Electrical Accident Prevention by energy department at bengaluru rav
Author
First Published Nov 22, 2023, 6:16 AM IST

ಬೆಂಗಳೂರು (ನ.22) :  ವಿದ್ಯುತ್‌ ಅವಘಡ ತಡೆ ಸೇರಿದಂತೆ ಸುರಕ್ಷತಾ ಕ್ರಮ ಕೈಗೊಳ್ಳಲು ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳಲ್ಲೂ (ಎಸ್ಕಾಂ) ಅಗತ್ಯ ಮಾರ್ಗಸೂಚಿ ರೂಪಿಸಲು ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಿ ಇಂಧನ ಇಲಾಖೆ ಆದೇಶಿಸಿದೆ.

ಬೆಂಗಳೂರಿನ ಕಾಡುಗೋಡಿಯಲ್ಲಿ ತುಂಡರಿಸಿದ ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವನ್ನಪ್ಪಿದ ಪ್ರಕರಣದ ನಂತರ, ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚಿನ ಒತ್ತು ನೀಡಲು ಇಂಧನ ಇಲಾಖೆ ನಿರ್ಧರಿಸಿದೆ. ಅದಕ್ಕಾಗಿ ಎಸ್ಕಾಂಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಏಕರೂಪ ಕಾರ್ಯಾಚರಣೆ ವಿಧಾನ ಅಳವಡಿಸಲು ಸೂಕ್ತ ಮಾರ್ಗಸೂಚಿ ರೂಪಿಸಬೇಕಿದ್ದು, ಸಮನ್ವಯ ಸಮಿತಿ ರಚಿಸಿ ಅದಕ್ಕೆ ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷರನ್ನಾಗಿಸಲಾಗಿದೆ. ಈ ಸಮಿತಿ ಕೂಲಂಕುಷವಾಗಿ ಚರ್ಚಿಸಿ ಅಗತ್ಯ ಮಾರ್ಗಸೂಚಿ ರೂಪಿಸಿ, ಎಸ್ಕಾಂಗಳಲ್ಲಿ ಅದರ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

ಕರ್ನಾಟಕದ ಶಾಸಕನ ಸೋಗಿನಲ್ಲಿ ತಿರುಪತಿ ಟಿಕೆಟ್ ವಂಚನೆ: ಒಬ್ಬನ ಬಂಧನ!

ಜತೆಗೆ ವಿದ್ಯುತ್‌ ಅಪಘಾತ ತಡೆಯುವ ಕುರಿತು ಎಲ್ಲ ಹಂತದ ಅಧಿಕಾರಿ ಮತ್ತು ನೌಕರರಿಗೆ ತರಬೇತಿ ನೀಡಬೇಕು. ವಿದ್ಯುತ್‌ ಅಪಘಾತಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ವಿದ್ಯುತ್‌ ಪರಿವೀಕ್ಷಣಾ ಇಲಾಖೆ ಅಧಿಕಾರಿಗಳು ಸುರಕ್ಷತಾ ನಿಯಮದಂತೆ ಕಾಲಕಾಲಕ್ಕೆ ಪರಿಶೀಲನೆಯನ್ನು ಪರಿಣಾಮಕಾರಿಯಾಗಿ ಮಾಡಬೇಕು ಹಾಗೂ ಆ ಕುರಿತ ಸಮಗ್ರ ವರದಿಯನ್ನು ಇಂಧನ ಇಲಾಖೆಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಉಪಕೇಂದ್ರದ ನಿರ್ವಾಹಕರು ಯಾವುದೇ 11 ಕೆವಿ ಮಾರ್ಗಗಳು ಟ್ರಿಪ್‌ ಆದಾಗ ಸಂಬಂಧಪಟ್ಟ ಶಾಖಾಧಿಕಾರಿ-ಉಪವಿಭಾಗಾಧಿಕಾರಿಗಳನ್ನು ಸಂಪರ್ಕಿಸಿ ಮಾರ್ಗವನ್ನು ಪರೀಕ್ಷಿಸಬೇಕು. ಪ್ರತಿ ಎಸ್ಕಾಂಗಳ ಮಟ್ಟದಲ್ಲಿ ಪ್ರತಿ ತಿಂಗಳು ಸುರಕ್ಷತಾ ದಿನ ಆಯೋಜಿಸಬೇಕು ಎಂದು ಸೂಚಿಸಲಾಗಿದೆ.

ವಿದ್ಯುತ್‌ ಅವಘಡ ತನಿಖೆಗೆ ಸಮಿತಿ ರಚನೆ

ಕಾಡುಗೋಡಿಯಲ್ಲಿ ನಡೆದ ವಿದ್ಯುತ್ ಅವಘಡಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಇಂಧನ ಇಲಾಖೆ ತಜ್ಞರ ಸಮಿತಿ ರಚಿಸಿದೆ. ಕೆಪಿಟಿಸಿಎಲ್‌ನ ನಿವೃತ್ತ ನಿರ್ದೇಶಕ ಎಸ್‌. ಸುಮಂತ್‌, ಆರ್‌ಟಿ ಮತ್ತು ಆರ್‌-ಡಿ ಮುಖ್ಯ ಎಂಜಿನಿಯರ್‌ ಬಿ.ವಿ.ಗಿರೀಶ್‌, ಸಿಪಿಆರ್‌ಐನ ಜಂಟಿ ನಿರ್ದೇಶಕ ಪ್ರಭಾಕರ್‌, ಉಪಮುಖ್ಯ ವಿದ್ಯುತ್‌ ಪರಿವೀಕ್ಷಕರು ಜಿ.ರವಿಕುಮಾರ್‌ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, ಎರಡು ವಾರಗಳೊಳಗೆ ತನಿಖಾ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.

ಕನ್ನಡದ ಬಗ್ಗೆ ಅಭಿಮಾನ ಇರಲಿ ದುರಭಿಮಾನ ಬೇಡ: ಸಿಎಂ ಸಿದ್ದರಾಮಯ್ಯ

ಸಮಿತಿಯು ವಿದ್ಯುತ್ ಅಪಘಾತದ ಕುರಿತು ಕೂಲಂಕಶವಾಗಿ ತನಿಖೆ ನಡೆಸಿ, ಘಟನೆಗೆ ನಿಖರ ಕಾರಣ ಕಂಡು ಹಿಡಿಯಬೇಕು. ಆ ರೀತಿಯ ಘಟನೆಗಳು ಮರುಕಳಿಸದ ರೀತಿಯಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ವರದಿ ನೀಡಬೇಕು ಎಂದು ಇಂಧನ ಇಲಾಖೆ ಆದೇಶದಲ್ಲಿ ಹೇಳಲಾಗಿದೆ.

Follow Us:
Download App:
  • android
  • ios