ವೈದ್ಯಕೀಯ, ಶೈಕ್ಷಣಿಕ ಸೇರಿ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಮಗ್ರ ಸೌಲಭ್ಯ ಕಲ್ಪಿಸಿ ರಾಜ್ಯದಲ್ಲೆ ಮಾದರಿಯಾಗಿಸಲು ದಿಟ್ಟಹೆಜ್ಜೆ ಇಟ್ಟಿದ್ದೇವೆ ಎಂದು ಸ್ಥಳೀಯ ಶಾಸಕರೂ ಆಗಿರುವ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಬೆಂಗಳೂರು (ಅ.17) : ವೈದ್ಯಕೀಯ, ಶೈಕ್ಷಣಿಕ ಸೇರಿ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಮಗ್ರ ಸೌಲಭ್ಯ ಕಲ್ಪಿಸಿ ರಾಜ್ಯದಲ್ಲೆ ಮಾದರಿಯಾಗಿಸಲು ದಿಟ್ಟಹೆಜ್ಜೆ ಇಟ್ಟಿದ್ದೇವೆ ಎಂದು ಸ್ಥಳೀಯ ಶಾಸಕರೂ ಆಗಿರುವ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಲು ಸರ್ಕಾರದ ಸಚಿವರಿಂದಲೇ ವಿರೋಧ!

ಭಾನುವಾರ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ವಿವಿಧ ಸೌಲಭ್ಯ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ತಿಂಗಳು 305 ಹಾಸಿಗೆಗಳ ಹೈಟೆಕ್‌ ಆಸ್ಪತ್ರೆ ಉದ್ಘಾಟನೆ ಮಾಡಲಾಗುತ್ತಿದೆ. ಡಿಸೆಂಬರ್‌ ಒಳಗಾಗಿ ವಸತಿ ಯೋಜನೆಗಳಡಿ 25 ಸಾವಿರ ಮನೆ ವಿತರಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಕ್ಷೇತ್ರದಲ್ಲಿ 23 ಸಾವಿರ ಎಲ್‌ಇಡಿ ಬೀದಿದೀಪ ಬೆಳಗಲಿದೆ. ಅ.21ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ವಿವಿಧ ಯೋಜನೆಯಡಿ 2500 ಮಹಿಳೆಯರಿಗೆ ಕೋಟ್ಯಂತರ ರುಪಾಯಿ ಸೌಲಭ್ಯ ಒದಗಿಸಲಾಗುತ್ತಿದೆ. ಹೀಗೆ ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತಿದ್ದು, ರಾಜ್ಯದಲ್ಲೆ ಮಾದರಿ ಕ್ಷೇತ್ರವಾಗಲಿದೆ ಎಂದರು.

ಕಟ್ಟಡ ಕಾರ್ಮಿಕರ ಸ್ನಾತಕೋತ್ತರ ತರಗತಿಯ ಮಕ್ಕಳಿಗೆ .5075 ಸ್ಕಾಲರ್‌ಶಿಪ್‌, ಕಾರ್ಮಿಕರಿಗೆ ಅಪಘಾತವಾದರೆ .2 ಲಕ್ಷ ವೈದ್ಯಕೀಯ ಸೌಲಭ್ಯ ಸಿಗಲಿದೆ. ವಿವಾಹ ಆದವರಿಗೆ .50 ಸಾವಿರ ಧನ ಸಹಾಯ, ಹೆರಿಗೆ ಸೌಲಭ್ಯವೆಂದು ಗಂಡು ಮಗುವಾದರೆ 20, ಹೆಣ್ಣು ಮಗುವಾದರೆ 30 ಸಾವಿರವನ್ನು ಕಾರ್ಮಿಕ ಮಂಡಳಿಯಿಂದ ನೀಡಲಾಗುವುದು ಎಂದು ತಿಳಿಸಿದರು.

ಸರ್ಕಾರ ಏನೂ ಮಾಡಿಲ್ಲ ಎಂದು ಟೀಕೆ ಮಾಡುವವರಿಗೆ ಬಿಜೆಪಿಯ ಜನಪ್ರಿಯ ಕಾರ್ಯಕ್ರಮಗಳೇ ಸಾಕ್ಷಿ. ಆದರೆ, ವಸತಿ ಸೌಲಭ್ಯ ಸೇರಿ ಹಲವು ಅವಶ್ಯಕತೆಗಳಿಂದ ಜನತೆ ವಂಚಿತರಾಗಿದ್ದಾರೆ. ಮೋದಿ ಪ್ರಧಾನಿಯಾದ ಬಳಿಕವೇ ಈ ಸಮಸ್ಯೆಗಳು ಬಗೆಹರಿಯುತ್ತಿವೆ. 25-30 ವರ್ಷಗಳ ಹಿಂದೆ ಸಮಸ್ಯೆಗಳು ಬಗೆಹರಿದಿದ್ದರೆ ಜನತೆ ಪುನಃ ಜನಪ್ರತಿನಿಧಿಗಳ ಬಳಿ ಸಹಾಯ ಕೋರಿ ಬರುವ ಅಗತ್ಯ ಇರುತ್ತಿರಲಿಲ್ಲ ಎಂದು ಹೇಳಿದರು.

ಈ ವೇಳೆ ಸಚಿವರು ಸಾಂಕೇತಿಕವಾಗಿ ಕಟ್ಟಡ ಕಾರ್ಮಿಕರಿಗೆ ಪರಿಕರ ವಿತರಣೆ ಸೇರಿ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಚೆಕ್‌ ವಿತರಣೆ ಮಾಡಿದರು. ಕೊಳ್ಳೆಗಾಲ ಶಾಸಕ ಎನ್‌.ಮಹೇಶ್‌, ಕಾರ್ಮಿಕ ನಿರೀಕ್ಷಕ ಚೇತನ್‌, ಬಿಬಿಎಂಪಿ ಮಾಜಿ ಸದಸ್ಯರಾದ ವಿಶ್ವನಾಥದೌಡ, ರಾಮಪ್ಪ, ದಾಸೇಗೌಡ ಇತರರಿದ್ದರು.

ಅ.20ಕ್ಕೆ ಸೋಮಣ್ಣ ಅಭಿನಂದನೆ ಗ್ರಂಥ ‘ವಿಜಯ ಪಥ’ ಬಿಡುಗಡೆ

ವಿ.ಸೋಮಣ್ಣ ಅಭಿನಂದನಾ ಸಮಿತಿಯು ಹೊರತಂದಿರುವ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರ ಅಭಿನಂದನಾ ಗ್ರಂಥ ‘ವಿಜಯ ಪಥ’ ಲೋಕಾರ್ಪಣೆ ಕಾರ್ಯಕ್ರಮವು ಅ.20ರಂದು ಗುರುವಾರ ನಗರದಲ್ಲಿ ನಡೆಯಲಿದೆ.

ಬೆಂಗಳೂರು ಸಬ್‌ ಅರ್ಬನ್‌ ರೈಲಿಗೆ ಅನಂತಕುಮಾರ್‌ ಹೆಸರು: ಸಚಿವ ಸೋಮಣ್ಣ

ಅಂದು ಸಂಜೆ 4.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಗಣಿ ಸಚಿವ ಪ್ರಹ್ಲಾದ್‌ ಜೋಶಿ ಉದ್ಘಾಟಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ವಿಜಯ ಪಥ’ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಕಂದಾಯ ಸಚಿವ ಆರ್‌.ಅಶೋಕ್‌, ಸಚಿವ ಸೋಮಣ್ಣ, ಪತ್ನಿ ಶೈಲಜಾ ಸೋಮಣ್ಣ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌, ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.