ಗದಗ ಜಿಲ್ಲೆಯ ದೋಣಿ ತಾಂಡಾದಲ್ಲಿ, ಮಾನಸಿಕ ಅಸ್ವಸ್ಥನೋರ್ವ ಮನೆಯಿಂದ ಹೊರಗೆ ಮಲಗಿದ್ದ ಆರು ಜನರ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದೋಣಿ ತಾಂಡಾದಲ್ಲಿ ರಕ್ತಸಿಕ್ತ ಬೇಸಿಗೆ ರಾತ್ರಿ

ಗದಗ: ಬೇಸಿಗೆಯ ಸೆಖೆ ಅಂತ ಮನೆಯಿಂದ ಹೊರಗೆ ಮಲಗಿದವರ ಮೇಲೆ ಮಾನಸಿಕ ಅಸ್ವಸ್ಥನೋರ್ವ ಹಲ್ಲೆ ಮಾಡಿದ್ದು, ದೊಣ್ಣೆಯಿಂದ ಹಲವರ ತಲೆ ಒಡೆದಿದ್ದಾನೆ. ಪರಿಣಾಮ ಹಲವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ದೋಣಿ ತಾಂಡಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾನಸಿಕ ಅಸ್ವಸ್ಥನಿಂದ ದೊಣ್ಣೆ ಪ್ರಹಾರ, ಆಸ್ಪತ್ರೆಗೆ ದಾಖಲಾದ ಆರು ಜನ

ಮನೆ ಆಚೆ ಮಲಗಿದ್ದವರ ಮೇಲೆ ಮಾನಸಿಕ ಅಸ್ವಸ್ಥ ಹಲ್ಲೆ ಮಾಡಿದ್ದು, ಹಲ್ಲೆಯ ಬಳಿ ಆತ ಬೀದಿಯಲ್ಲಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದೆ. ಹರ್ಜಪ್ಪ ಲಮಾಣಿ ಎಂಬಾತನೇ ಮನೆ ಹೊರಗೆ ಮಲಗಿದವರ ಮೇಲೆ ಹಲ್ಲೆ ಮಾಡಿದ ಮಾನಸಿಕ ಅಸ್ವಸ್ಥ. ಮಧ್ಯರಾತ್ರಿ ಆರು ಜನರ ಮೇಲೆ ಈತ ಏಕಾಏಕಿ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಈತನ ಹಲ್ಲೆಯಿಂದಾಗಿ ಎಗ್ಗಪ್ಪ ಭಜನೆನಾಯಕ, ಶೇಖಪ್ಪ ನಾಯಕ್, ದೇವಕ್ಕ ನಾಯಕ, ಷಣ್ಮುಖಪ್ಪ ರಾಠೋಡ, ಜಗದೀಶ್ ಲಮಾಣಿ ಹಾಗೂ ಚವಳ್ಳವ್ವ ಲಮಾಣಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಶಾಲೆಗಳಿಗೆ ಲಕ್ಷ ಲಕ್ಷ ವೆಚ್ಚ ಮಾಡಿದರೆ ಏನು ಪ್ರಯೋಜನ: ಪಾಠ ಮಾಡುವ ಟೀಚರ್‌ಗೆ ಗೊತ್ತಿಲ್ಲ ಕನಿಷ್ಟ ಗ್ರ್ಯಾಮರ್

ಸೆಖೆ ತಾಳಲಾರದೆ ಹೊರಗೆ ಮಲಗಿದ್ದವರಿಗೆ ಕಾದಿತ್ತು ಗಂಡಾಂತರ

1 ಗಂಟೆಯ ವೇಳೆ ಮನೆ ಮುಂದೆ ಮಲಗಿದ್ದವರ ಮೇಲೆ ದೊಣ್ಣೆಯಿಂದ ಆರೋಪಿ ಹರ್ಜಪ್ಪ ಲಮಾಣಿ ಹಲ್ಲೆ ಮಾಡಿದ್ದು, ಹಲ್ಲೆಯಿಂದಾಗಿ ಗಂಭೀರ ಗಾಯಗೊಂಡ ಗಾಯಾಳುಗಳು ಏನಾಯಿತು ಎಂಬುದು ತಿಳಿಯದೇ ಜೋರಾಗಿ ಕೂಗಾಡಿ ಬೊಬ್ಬೆ ಹೊಡೆದಿದ್ದಾರೆ. ಇವರ ಬೊಬ್ಬೆ ಕೂಗಾಟ ಕೇಳಿ ತಾಂಡಾದ ಇತರ ಜನರು ಸ್ಥಳಕ್ಕೆ ಧಾವಿಸಿದ ಬಂದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಗಾಯಾಳುಗಳ ತಲೆ, ಕಣ್ಣು ಹಾಗೂ ಮುಖದ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾನಸಿಕ ಅಸ್ವಸ್ಥ ದಾಳಿ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಬಾಗಲಕೋಟೆ: ಯುವ ಪ್ರೇಮಿಗಳು ಸಾವಿಗೆ ಶರಣು: ಗೆಳತಿ ಮೃತಪಟ್ಟ ವಿಚಾರ ತಿಳಿದು ಗೆಳೆಯನೂ ಸಾವು