ಬೆಂಗಳೂರಿನ ಕೋಗಿಲು ಬಡಾವಣೆಯ ಅಕ್ರಮ ಮನೆ ತೆರವು ಪ್ರಕರಣದಲ್ಲಿ, ಸಂತ್ರಸ್ತರಿಗೆ ಸರ್ಕಾರ ಪುನರ್ವಸತಿ ಕಲ್ಪಿಸಿದರೂ ಅವರು ಸ್ಥಳಾಂತರಗೊಳ್ಳಲು ನಿರಾಕರಿಸುತ್ತಿದ್ದಾರೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಬೆಂಗಳೂರು (ಜೂ.11) : ಬೆಂಗಳೂರಿನ ಕೋಗಿಲು ಬಡಾವಣೆ(Kogilu layout)ಯಲ್ಲಿನ ಅಕ್ರಮ ಮನೆಗಳ ತೆರವು ‌ಪ್ರಕರಣದ‌ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದ್ದರೂ ಅವರು ಸ್ಥಳವನ್ನು ಬಿಟ್ಟು ಬೇರಡೆ ಹೋಗಲು ಸಿದ್ಧರಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ

ಮನೆಗಳ ತೆರವು ಕಾರ್ಯಾಚರಣೆಯನ್ನು ಅಸಾಂವಿಧಾನಿಕ ಎಂಬುದಾಗಿ ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹನಾ ಮತ್ತು ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ,ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

100 ಮಂದಿಯನ್ನು ಇಡಲು ಅವಕಾಶವಿಲ್ಲ

ಈ ವೇಳೆ ಅರ್ಜಿದಾರರ ಪರ ವಕೀಲರು, ಸರ್ಕಾರದ ಪುನರ್ವಸತಿ ಕೇಂದ್ರದಲ್ಲಿ 100 ಮಂದಿಯನ್ನು ಇಡಲು ಅವಕಾಶವಿಲ್ಲ. ಕೇಂದ್ರ ಕೋಗಿಲು ಲೇಔಟ್‌ ಸಮೀಪದಲ್ಲಿ ಇಲ್ಲ. ಅಲ್ಲಿ ಅಗತ್ಯವಾದಷ್ಟು ಶೌಚಾಲಯ ಮತ್ತು ಸೂಕ್ತ ಉಪಚಾರದ ವ್ಯವಸ್ಥೆಯಿಲ್ಲ‌ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಅದಕ್ಕೆ ಒಪ್ಪದ ನ್ಯಾಯಪೀಠ, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿದ್ದರೂ ಅದನ್ನು ಅವರು ಬಳಕೆ ಮಾಡುತ್ತಿಲ್ಲ ಎಂಬುದು‌ ಸರ್ಕಾರ ಸಲ್ಲಿಸಿರುವ ಫೋಟೋಗಳಿಂದ ತಿಳಿಯಲಿದೆ. ಸಂತ್ರಸ್ತರಿಗೆ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ನ್ಯಾಯಾಲಯ ನೇಮ‌ಕ‌ ಮಾಡಿರುವ ಅಮಿಕಸ್‌ ಕ್ಯೂರಿ (ಕೋರ್ಟಗ ಸಹಾಯಕರು) ಅವರ ಗಮನಕ್ಕೆ ತರಬಹುದು. ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು.

ಆಗ ರಾಜ್ಯ ಸರ್ಕಾರ ಪರ ವಕೀಲರು, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಆದರೆ, ಅವರು ಸ್ಥಳವನ್ನು ಬಿಟ್ಟು ಕದಲು ಸಿದ್ಧರಿಲ್ಲ. ಪುನರ್ವಸತಿ ಕೇಂದ್ರಕ್ಕೆ ಹೋದರೆ ಕೋಗಿಲು ಬಡಾವಣೆಯಲ್ಲಿ ನಿವೇಶನಗಳು ಇಲ್ಲದಾಗುತ್ತವೆ ಎಂಬ ಆತಂಕ ಅವರದ್ದಾಗಿದೆ ಎಂದರು. ಅರ್ಜಿದಾರರ ಪರ ವಕೀಲರು, ಸಂತ್ರಸ್ತರಿಗೆ ಕರ್ನಾಟಕ ಭೂಕಂದಾಯ ಕಾಯ್ದೆಯಡಿ ನಿವೇಶನ ಹಂಚಿಕೆ ಮಾಡಲಾಗಿದೆ. ಅದಕ್ಕೆ ದಾಖಲೆ ಇದೆ ಎಂದು ತಿಳಿಸಿದರು. ಅಂತಿಮವಾಗಿ ಪೀಠ, ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿತು.