ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೊಸ ಜೀವನ ಆರಂಭಿಸಿದ್ದಾರೆ. ಖೈದಿ ಸಂಖ್ಯೆ 15528 ಪಡೆದಿರುವ ಅವರು, ಜೈಲಿನ ನಿಯಮಗಳಿಗೆ ಒಳಪಟ್ಟು 8 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ.

ಬೆಂಗಳೂರು: ಹಾಸನದ ಮಾಜಿ ಸಂಸದ ಮತ್ತು ಅತ್ಯಾ1ಚಾರ ಪ್ರಕರಣದ ಅಪರಾಧಿಯಾಗಿರುವ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ ನಂತರ, ಅವರ ಜೀವನಶೈಲಿ ಸಂಪೂರ್ಣವಾಗಿ ಬದಲಾಗಲಿದೆ. ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಆಗಸ್ಟ್ 2 ರಿಂದ ಪ್ರಜ್ವಲ್ ರೇವಣ್ಣ ಅಧಿಕೃತವಾಗಿ ಸಜಾಬಂಧಿ ಖೈದಿಯಾಗಿದ್ದಾರೆ. ಜೈಲು ಅಧಿಕಾರಿಗಳು ಪ್ರಜ್ವಲ್‌ಗೆ CTP ಖೈದಿ ಸಂಖ್ಯೆ 15528 ಅನ್ನು ನಿಗದಿ ಮಾಡಿದ್ದಾರೆ.

ಇಂದಿನಿಂದ ಪ್ರಜ್ವಲ್ ರೇವಣ್ಣಪರಪ್ಪನ ಅಗ್ರಹಾರ ಜೈಲಿನ ಸಜಾಬಂಧಿ ಖೈದಿಗಳ ನಿಯಮಾವಳಿಗೆ ಕಟ್ಟುನಿಟ್ಟಾಗಿ ಒಳಪಟ್ಟಿದ್ದಾರೆ. ಖೈದಿಗಳ ನಿಯಮಾನುಸಾರ ಅವರು ಈಗಿನಿಂದ ಬಿಳಿ ಬಟ್ಟೆ ಧರಿಸಬೇಕಾಗುತ್ತದೆ. ಜೈಲು ಸಿಬ್ಬಂದಿ ಇಂದು ಅವರಿಗೆ ಬಿಳಿ ಬಣ್ಣದ ದೈನಂದಿನ ವಸ್ತ್ರಗಳನ್ನು ವಿತರಿಸಲಿದ್ದಾರೆ.

ಇಷ್ಟು ದಿನ ವಿಚಾರಣಾಧೀನ ಬಂಧಿಯಾಗಿ ಜೈಲಿನಲ್ಲಿದ್ದ ಪ್ರಜ್ವಲ್, ನಿನ್ನೆಯಿಂದ ಅಪರಾಧಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸದಲ್ಲಿದ್ದಾರೆ. ಸಜಾಬಂಧಿ ಖೈದಿಯಾಗಿ ಹೊಸ ಜೀವನ ಆರಂಭಿಸಿರುವ ಪ್ರಜ್ವಲ್, ನ್ಯಾಯಾಲಯದಿಂದ ಬಂದ ತೀರ್ಪಿನಿಂದ ಆಘಾತಗೊಂಡಿದ್ದಾರೆ.

ಜೀವಾವಧಿ ಶಿಕ್ಷೆ ನಿರೀಕ್ಷೆ ಇಲ್ಲದೆ, ತಮ್ಮ ಕುಟುಂಬ ಹಾಗೂ ರಾಜಕೀಯ ಹಿನ್ನೆಲೆಯಿಂದ ಕಡಿಮೆ ಶಿಕ್ಷೆ ಭಾವಿಸಿದ್ದ ಪ್ರಜ್ವಲ್‌ರಿಗೆ, ನ್ಯಾಯಾಧೀಶರು ನೀಡಿದ ತೀರ್ಪು ನಿದ್ದೆಗೆಡಿಸುವಂತಾಯಿತು. ತಡರಾತ್ರಿವರೆಗೂ ಪುರುಷ ಖೈದಿಗಳ ಬ್ಯಾರಕ್‌ನಲ್ಲಿ ಚಿಂತೆಯಲ್ಲಿ ಮುಳುಗಿದ್ದ ಅವರು, ರಾತ್ರಿ ಊಟವನ್ನೂ ಸೇವಿಸದೇ ಮೌನದಲ್ಲೇ ಕಳೆಯುವಂತಾಯಿತು. ಬೆಳಿಗ್ಗೆ 6:30 ರ ಸುಮಾರಿಗೆ ಎಚ್ಚರಗೊಂಡ ಅವರು, ನಿತ್ಯಕರ್ಮ ಮುಗಿಸಿ, ಬೇರೇನೂ ಮಾತನಾಡದೇ ಒಬ್ಬಂಟಿಯಾಗಿ ಕುಳಿತು ಇದ್ದರು ಎನ್ನಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನ ನಿಯಮಾನುಸಾರ, ಪ್ರಜ್ವಲ್ ರೇವಣ್ಣ ಈಗ ದಿನಕ್ಕೆ 8 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಅವರಿಗೆ ನೀಡಲಾದ ಕೆಲಸದ ಪ್ರಕಾರ ಪ್ರಾರಂಭದಲ್ಲಿ ರೂ.524 ಸಂಬಳ ನೀಡಲಾಗುವುದು. ನಂತರ ಅನುಭವದ ಮೇಲೆ ಅವರ ವರ್ಗವನ್ನೂ ನಿಗದಿಪಡಿಸಲಾಗುತ್ತದೆ.

ಜೈಲು ನಿಯಮಗಳಂತೆ, ಪ್ರತಿದಿನವೂ ಖೈದಿಗಳು 8 ಗಂಟೆಗಳ ಕಾಲ ಕೆಲಸ ಮಾಡುವುದು ಕಡ್ಡಾಯವಾಗಿದೆ. ಪ್ರಜ್ವಲ್ ರೇವಣ್ಣರನ್ನು ಸಜಾಬಂಧಿ ಖೈದಿಗಳ ಬ್ಯಾರಕ್‌ಗೆ ಶಿಫ್ಟ್ ಮಾಡಲಾಗಿದ್ದು, ಅವರಿಗೆ ವಿವಿಧ ಕೆಲಸಗಳ ಆಯ್ಕೆ ನೀಡಲಾಗುತ್ತದೆ — ಉದಾಹರಣೆಗೆ:

  • ಬೇಕರಿ
  • ಹೈನುಗಾರಿಕೆ
  • ತರಕಾರಿ ಬೆಳೆಸುವುದು
  • ಗಾರ್ಡನ್ ಕೆಲಸ
  • ಮರಕೆಲಸ
  • ಕರಕುಶಲ ವಸ್ತು ತಯಾರಿ

ಈ ಕಾರ್ಯಗಳಲ್ಲಿ ಯಾವುದನ್ನಾದರೂ ಪ್ರಜ್ವಲ್ ಆಯ್ಕೆ ಮಾಡಬೇಕಾಗುತ್ತದೆ. ತಾವು ಆಯ್ಕೆ ಮಾಡಿದ ಕೆಲಸದ ಆಧಾರದ ಮೇಲೆ ಪ್ರಜ್ವಲ್ ಅವರಿಗೆ ಜೈಲು ಇಲಾಖೆಯು ಸಂಬಳ ನೀಡುತ್ತದೆ.

ಮೊದಲ ವರ್ಷ ಅವರು ಕೌಶಲ್ಯ ರಹಿತ ವರ್ಗಕ್ಕೆ ಸೇರಿದ್ದು, ಇದಕ್ಕಾಗಿ ಪ್ರತಿ ತಿಂಗಳು ₹524 ರಷ್ಟು ವೇತನ ನಿಗದಿಯಾಗಿದೆ. ನಂತರ ಅವರು ಅನುಭವವನ್ನು ಪಡೆದುಕೊಂಡಂತೆ ಅರೆ-ಕೌಶಲ್ಯ ಹಾಗೂ ನುರಿತ ವರ್ಗದ ವೇತನ ವರ್ಗಗಳಿಗೆ ಬಡ್ತಿ ಪಡೆಯಬಹುದು.

ಈ ಮೂಲಕ, ನ್ಯಾಯಾಲಯದ ತೀರ್ಪಿನ ಜೊತೆಗೆ, ಪ್ರಜ್ವಲ್ ರೇವಣ್ಣ ಅವರ ರಾಜಕೀಯದಿಂದ ಬದಲಾಗಿದ ಜೀವನ ಈಗ ಜೈಲಿನ ನಿಯಮ ಮತ್ತು ಶಿಸ್ತು ಪಾಲನೆಯೊಂದಿಗೇ ಮುಂದುವರಿಯಲಿದೆ.

ಕಳೆದ ರಾತ್ರಿ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಮಾನಸಿಕವಾಗಿ ತೀವ್ರ ವೇದನೆಯಲ್ಲಿದ್ದರು. ವೈದ್ಯರು ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದ ಸಂದರ್ಭದಲ್ಲೂ ಅವರು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಜೈಲು ಸಿಬ್ಬಂದಿಯೊಂದಿಗೆ ಮಾತನಾಡುವ ವೇಳೆ ಕೂಡ ತಮ್ಮ ನೋವನ್ನು ವ್ಯಕ್ತಪಡಿಸಿದ ಪ್ರಜ್ವಲ್, "ಈ ತೀರ್ಪು ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರುತ್ತೇನೆ" ಎಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಜೈಲಿನ ವಿಶೇಷ ಭದ್ರತಾ ಕೊಠಡಿಯಲ್ಲಿ ಪ್ರಜ್ವಲ್ ರೇವಣ್ಣ ವಾಸಿಸುತ್ತಿದ್ದಾರೆ. ಈ ಕೊಠಡಿಯಲ್ಲಿ ಇನ್ನೂ ಕೆಲವು ದಿನಗಳು ಇರಿಸಲಾಗುವುದು. ಜೈಲಿನ ನಿಯಮಾನುಸಾರ, ಸಜಾಬಂಧಿ ಖೈದಿಗಳಿಗೆ ಅನ್ವಯವಾಗುವ ಡ್ರೆಸ್ ಕೋಡ್ ಅನ್ನು ಪ್ರಜ್ವಲ್‌ಗೂ ಅನ್ವಯಿಸಲಾಗಿದ್ದು, ಅವರು ಬಿಳಿ ಬಣ್ಣದ ಸಜಾ ಖೈದಿ ಬಟ್ಟೆ ಧರಿಸಬೇಕು. ಪ್ರಜ್ವಲ್ ರೇವಣ್ಣನನ್ನು ಸಾರ್ವಜನಿಕರಿಂದ ದೂರವಿರುವ ಭದ್ರತಾ ಪ್ರದೇಶದಲ್ಲಿ ಇರಿಸಲಾಗಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಂಗದ ಮುಂದಿನ ಕ್ರಮದ ನಿರೀಕ್ಷೆಯಲ್ಲಿದ್ದಾರೆ.