ಆ.11ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಶುರು: ಸಂಸದ ಬಿ.ವೈ.ರಾಘವೇಂದ್ರ
ಉದ್ಘಾಟನೆಗೊಂಡು ನಾಲ್ಕೈದು ತಿಂಗಳಾದರೂ ಇನ್ನೂ ವಿಮಾನ ಹಾರಾಟ ಶುರುವಾಗದ ಸೋಗಾನೆ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಕ್ಕೆ ಮುಹೂರ್ತ ನಿಗದಿಯಾಗಿದ್ದು, ಆಗಸ್ಟ್ 11ರಿಂದ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಹಾರಾಟ ಆರಂಭಗೊಳ್ಳಲಿದೆ.
![Flight from Shivamogga to start from August 11th Says MP BY Raghavendra gvd Flight from Shivamogga to start from August 11th Says MP BY Raghavendra gvd](https://static-ai.asianetnews.com/images/01gh8arwhewpqvv4tfxmz5vp98/by_363x203xt.jpg)
ಶಿವಮೊಗ್ಗ (ಜೂ.30): ಉದ್ಘಾಟನೆಗೊಂಡು ನಾಲ್ಕೈದು ತಿಂಗಳಾದರೂ ಇನ್ನೂ ವಿಮಾನ ಹಾರಾಟ ಶುರುವಾಗದ ಸೋಗಾನೆ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಕ್ಕೆ ಮುಹೂರ್ತ ನಿಗದಿಯಾಗಿದ್ದು, ಆಗಸ್ಟ್ 11ರಿಂದ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಹಾರಾಟ ಆರಂಭಗೊಳ್ಳಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ವಿಮಾನದಲ್ಲೇ ಆಗಮಿಸಿ, ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ಹಾರಾಟದ ಪರೀಕ್ಷೆಗಳು ಕೂಡ ನಡೆದಿವೆ. ಈಗ ಆಗಸ್ಟ್ 11ರಂದು ವಿಮಾನ ಹಾರಾಟ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಈ ಕುರಿತು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಇಂಡಿಗೊ ಏರ್ಲೈನ್ಸ್ ಈಗಾಗಲೇ ಹಾರಾಟದ ಅನುಮತಿಯನ್ನು ಪಡೆದುಕೊಂಡಿದೆ. ಈಗಿರುವ ಮಾಹಿತಿಯ ಅನ್ವಯ ಆ.11ರಂದು ಅವರು ವಿಮಾನ ಹಾರಾಟ ಆರಂಭಿಸಲಿದ್ದಾರೆ. ಇದು ಮತ್ತಷ್ಟು ಮುಂದಕ್ಕೆ ಹೋಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಬಹುತೇಕವಾಗಿ ಅಂದೇ ಬೆಂಗಳೂರು-ಶಿವಮೊಗ್ಗ ನಡುವೆ ವಿಮಾನ ಹಾರಾಟ ಆರಂಭವಾಗಲಿದೆ. ಅದರೆ, ಟಿಕೆಟ್ ಬುಕಿಂಗ್ ವ್ಯವಸ್ಥೆ ಇನ್ನೂ ಪ್ರಾರಂಭಗೊಂಡಿಲ್ಲ ಎಂದು ತಿಳಿಸಿದರು.
ನಾನು ಗ್ರಾನೈಟ್ ವಿದೇಶಕ್ಕೆ ರಫ್ತು ಮಾಡಲಿಲ್ಲ: ಡಿಕೆಶಿ ವಿರುದ್ಧ ಎಚ್ಡಿಕೆ ಪರೋಕ್ಷ ವಾಗ್ದಾಳಿ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿಮಾನ ಹಾರಾಟದ ಕನಸು ನನಸಾಗಿದೆ. ಅವರ ಹುಟ್ಟಿದ ಹಬ್ಬದ ದಿನವೇ ಪ್ರಧಾನಿ ಮೋದಿಯವರೇ ವಿಮಾನದಲ್ಲಿ ಬಂದು ಉದ್ಘಾಟನೆ ಮಾಡಿದ್ದರು. ಅಂದಿನಿಂದ ಸಾರ್ವಜನಿಕವಾಗಿ ವಿಮಾನ ಹಾರಾಟಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ದೇಶದ ಇತಿಹಾಸದಲ್ಲಿಯೇ ಇಷ್ಟುಬೇಗ ಹಾರಾಟಕ್ಕೆ ಅವಕಾಶವಾಗಿರುವುದು ವಿಮಾನ ಪ್ರಾಧಿಕಾರದಿಂದ ಲೈಸೆನ್ಸ್ ಸಿಕ್ಕಿರುವುದು, ಟೆಂಡರ್ ಪ್ರಕ್ರಿಯೆ ಮುಗಿದಿರುವುದು ಅತ್ಯಂತ ಸಂಭ್ರಮದ ವಿಷಯವಾಗಿದೆ ಎಂದರು.
ಈಗಾಗಲೇ ವಿಮಾನ ಹಾರಾಟದ ನಾಲ್ಕು ಮಾರ್ಗಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದರ ಜೊತೆಗೆ ಉಡಾನ್ ಯೋಜನೆಯ ಆರ್ಸಿಎಸ್ ಲೈನ್ ಯೋಜನೆಯಡಿ ಪ್ರಯಾಣಿಕರ ಒಂದು ಸೀಟಿಗೆ ಸಬ್ಸಿಡಿ ಕೂಡ ದೊರಕುತ್ತದೆ. ವರ್ಷಕ್ಕೆ 2.5 ಕೋಟಿ ಹಣವನ್ನು ಸಬ್ಸಿಡಿ ನೀಡಲಾಗುತ್ತದೆ. ಒಟ್ಟೂನಾಲ್ಕು ಮಾರ್ಗಗಳಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ. ಇದಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದರು.
ವಿಮಾನ ಹಾರಾಟದ ಮಾರ್ಗಗಳು
1. ಹೈದರಾಬಾದ್-ಶಿವಮೊಗ್ಗ-ಗೋವಾ-ಶಿವಮೊಗ್ಗ-ತಿರುಪತಿ-ಶಿವಮೊಗ್ಗ-ಹೈದರಾಬಾದ್ ಮಾರ್ಗ.
2.ಹೈದರಾಬಾದ್-ಶಿವಮೊಗ್ಗ-ದೆಹಲಿ-ಶಿವಮೊಗ್ಗ-ಚೆನ್ನೈ-ಶಿವಮೊಗ್ಗ-ಬೆಂಗಳೂರು-ಹೈದರಾಬಾದ್ಗೆ ಪ್ರಯಾಣ,
3. ಹೈದರಾಬಾದ್-ಶಿವಮೊಗ್ಗ-ಹೈದರಾಬಾದ್.
4. ಬೆಂಗಳೂರು-ಸೇಲಂ-ಕೊಚ್ಚಿನ್- ಸೇಲಂ-ಬೆಂಗಳೂರು-ಶಿವಮೊಗ್ಗ- ಬೆಂಗಳೂರಿಗೆ ವಿಮಾನ ಪ್ರಯಾಣ ಆರಂಭವಾಗಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನಿಂದ ಸಬ್ಸಿಡಿ ಭರಿಸಬೇಕಾಗುತ್ತದೆ. ಇವೆಲ್ಲವೂ ಸರಿಯಾದ ಸಮಯಕ್ಕೆ ಆದರೆ, ಆಗಸ್ಟ್ ಕೊನೆಯ ವಾರದಲ್ಲಿ ಎಲ್ಲಾ ಮಾರ್ಗದ ವಿಮಾನಗಳು ಹಾರಾಟ ಆರಂಭಿಸಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಟಿ.ಡಿ. ಮೇಘರಾಜ್, ಎಸ್.ರುದ್ರೇಗೌಡ, ಡಿ.ಎಸ್. ಅರುಣ್, ಪವಿತ್ರಾ ರಾಮಯ್ಯ, ಎಸ್.ಎಸ್. ಜ್ಯೋತಿಪ್ರಕಾಶ್, ಮಾಲತೇಶ್, ಶಿವರಾಜ್,ಜಗದೀಶ್, ಅಣ್ಣಪ್ಪ, ಡಾ. ಧನಂಜಯ ಸರ್ಜಿ, ಶ್ರೀನಾಥ್ ಮುಂತಾದವರಿದ್ದರು.
ಕಾಂಗ್ರೆಸ್ ಸರ್ಕಾರದಲ್ಲೀಗ ವರ್ಗಾವಣೆ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ: ಎಚ್ಡಿಕೆ
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಗಾರಂಟಿ ಕಾರ್ಡ್ನಲ್ಲಿ 10 ಕೆ.ಜಿ.ಅಕ್ಕಿ ಕೊಡುತ್ತೇವೆ ಎಂದಿದ್ದಾರೆ. ಅವರು ಮಾತು ಕೊಟ್ಟಂತೆ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆ.ಜಿ.ಅಕ್ಕಿ ಬಿಟ್ಟು 10 ಕೆಜಿ ಹೆಚ್ಚು ಅಕ್ಕಿ ಕೊಡಬೇಕು. ಈಗ ಐದು ಕೆಜಿ ಅಕ್ಕಿಯ ಬದಲು ಹಣ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಬಡವರ ಮೊದಲ ತುತ್ತನ್ನೇ ಕಸಿದುಕೊಂಡಂತಾಗಿದೆ. ಗ್ಯಾರಂಟಿ ಕಾರ್ಡ್ ನೀಡಿ ಅಧಿಕಾರಕ್ಕೆ ಬಂದು ಈಗ ಅದು ಇದು ಅಂತ ನೆಪ ಹೇಳಬಾದರು. ಕೊಟ್ಟಮಾತಿನಂತೆ ನಡೆದುಕೊಳ್ಳಬೇಕು.
- ಬಿ.ವೈ.ರಾಘವೇಂದ್ರ, ಸಂಸದ.