ನೆಲಮಂಗಲ ಬಳಿ ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ರೈತರ ವಿರೋಧ!

Synopsis
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ನೆಲಮಂಗಲ ಸುತ್ತಮುತ್ತ ಗುರುತಿಸಲಾದ ಸ್ಥಳಗಳಿಗೆ ಕೇಂದ್ರ ತಂಡ ಭೇಟಿ ನೀಡಿದ ಬೆನ್ನಲ್ಲೇ ಸ್ಥಳೀಯ ರೈತರಿಂದ ವಿರೋಧ ವ್ಯಕ್ತವಾಗಿದೆ. ನೂರಾರು ರೈತರು ಸಭೆ ಸೇರಿ, ತಮ್ಮ ಮನೆ, ಜಮೀನುಗಳನ್ನು ಉಳಿಸಿಕೊಳ್ಳಲು ಹೋರಾಟ ರೂಪಿಸಲು ತೀರ್ಮಾನಿಸಿದ್ದಾರೆ.
ಬೆಂಗಳೂರು (ಏ.25): ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಬೇಕೆಂಬ ರಾಜ್ಯ ಸರ್ಕಾರದ ಮನವಿ ಮೇರೆಗೆ ನೆಲಮಂಗಲ ಹಾಗೂ ಕನಕಪುರ ರಸ್ತೆಗಳಲ್ಲಿ ಗುರುತಿಸಲಾಗಿದ್ದ 3 ಸ್ಥಳಗಳನ್ನು ಕೇಂದ್ರ ವಿಮಾನ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ. ಇದರ ಬೆನ್ನಲ್ಲಿಯೇ ನೆಲಮಂಗಲದ ಬಳಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಕೆಲವು ಸಂಘಟನೆಗಳು ಹಾಗೂ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ವಿಚಾರವಾಗಿ ಈಗಾಗಲೇ ಕೇಂದ್ರ ವಿಮಾನ ಪ್ರಾಧಿಕಾರದ ಅಧಿಕಾರಿಗಳು ಬೆಂಗಳೂರು ಸುತ್ತಮುತ್ತ ಮೂರು ಸ್ಥಳವನ್ನ ಪರಿಶೀಲನೆ ನಡೆಸಿದ್ದಾರೆ. ಆದರೆ, ಇದೀಗ ಸ್ಥಳೀಯ ಹತ್ತಾರು ಹಳ್ಳಿಗಳ ರೈತರಿಂದ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಬಾರಿ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ, ವಿಮಾನ ನಿಲ್ದಾಣ ನಿರ್ಮಾಣ ಮಾಡುವುದನ್ನು ತಡೆಯುವುದು ಹಾಗೂ ನೆಲಮಂಗಲದ ಬಳಿ ವಿಮಾನ ನಿರ್ಮಾಣವನ್ನು ಮಾಡುವುದರ ವಿರುದ್ಧ ಹೋರಾಟಕ್ಕೆ ರೂಪುರೇಷೆಯನ್ನು ಸಿದ್ಧಪಡಿಸಲು ರೈತರು ಸಭೆಯನ್ನು ನಡೆಸಿದ್ದಾರೆ.
ನೆಲಮಂಗಲ ವಿಧಾನಸಭೆ ಕ್ಷೇತ್ರದ ಪೆಮ್ಮನಹಳ್ಳಿ ಗ್ರಾಮದಲ್ಲಿ ನೂರಾರು ರೈತರ ಸಭೆ ಸೇರಿದ್ದಾರೆ. ನೆಲಮಂಗಲ ಕುಣಿಗಲ್ ರಸ್ತೆಯ ಅಕ್ಕಪಕ್ಕದ ಎರಡು ಕಡೆ ವಿಮಾನ ನಿಲ್ದಾಣದ ಸ್ಥಳ ಗುರುತು ಹಿನ್ನೆಲೆಯಲ್ಲಿ ಈ ಗ್ರಾಮಗಳ ಜನರಿಗೆ ಕರಪತ್ರಗಳ ಮೂಲಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ವಿರೋಧ ಮಾಡುವಂತೆ ರೈತರ ಮನವರಿಕೆ ಮಾಡಲು ಈ ಸಭೆಯಲ್ಲಿ ತೀರ್ಮಾನ ಮಾಡಿದ್ದಾರೆ. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ನೂರಾರು ವರ್ಷಗಳಿಂದ ನಿರ್ಮಿಸಿಕೊಂಡಿರುವ ಮನೆ ಮಠ, ತಾತ-ಮುತ್ತಾತರ ಕಾಲದಿಂದ ಬಳುವಳಿಯಾಗಿ ಬಂದಿರುವ ಆಸ್ತಿ-ಪಾಸ್ತಿ, ಪರಂಪರೆಗಳಿಂದ ಪೂಜಿಸಿಕೊಂಡು ಬಂದಿರುವ ದೇವಾಲಯಗಳು ಹಾಗೂ ಜೀವನದ ಜೊತೆಗೆ ಇರುವ ಜಾನುವಾರುಗಳು, ಜೀವನಾಧಾರ ಆಗಿರುವ ತೋಟಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಆದ್ದರಿಂದ ನಮ್ಮ ಮನೆ ಜಮೀನು ಉಳಿಸಿಕೊಳ್ಳಲು ಹೋರಾಟ ಮಾಡುವುದು ಅಗತ್ಯವೆಂದು ರೈತ ಮುಖಂಡರು ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ.
ಇದನ್ನೂ ಓದಿ: ಆರ್ಟಿಕಲ್ 370 ರದ್ದತಿ-ಪಹಲ್ಗಾಮ್ ಉಗ್ರರ ದಾಳಿ ಕುರಿತ ಹೇಳಿಕೆ: ಬೇಷರತ್ ಕ್ಷಮೆಯಾಚಿಸಿದ ಕಾಂಗ್ರೆಸ್ ಶಾಸಕ!
19 ಹಳ್ಳಿಗಳಲ್ಲಿ ವಿಮಾನ ನಿಲ್ದಾಣ ವಿರೋಧಿಸುವಂತೆ ಕರಪತ್ರ ಹಂಚಿಕೆ: ಹೊನ್ನಯ್ಯನಪಾಳ್ಯ, ಐಸೇನಹಳ್ಳಿ, ಗೆಜ್ಜಗಲ್ ಪಾಳ್ಯ, ಶ್ರೀರಾಮ್ಪುರ ಕಾಲೋನಿ, ಬೆಟ್ಟಯ್ಯನಪಾಳ್ಯ, ಕಾಂಬೇಗೌಡನ ಪಾಳ್ಯ, ಮರಿಕುಪ್ಪೆ, ಮಾಗಡಿ ರಂಗಪ್ಪನ ಪಾಳ್ಯ, ಕೆಂಪಚಿಕ್ಕನಹಳ್ಳಿ, ಕೋಡಿಹಳ್ಳಿ, ತಿರುಮಲಾಪುರ, ನಾಗನಹಳ್ಳಿ, ಹಕ್ಕಿನಾಳು, ಹಕ್ಕಿನಾಳು ಕಾಲೋನಿ, ದಾಸೇಗೌಡನ ಪಾಳ್ಯ, ಶೆಟ್ಟಿಪಾಳ್ಯ, ಗಾರ್ಗೇಶನಪುರ, ಬಾಳಯ್ಯನಪಾಳ್ಯ, ಪೆಮ್ಮನಹಳ್ಳಿ ಸೇರಿ ಒಟ್ಟು 19 ಗ್ರಾಮಗಳ ರೈತರು, ಗ್ರಾಮಸ್ಥರು ಹಾಗೂ ಈ ಗ್ರಾಮಗಳಿಗೆ ಸಂಬಂಧಪಟ್ಟ ಎಲ್ಲ ಸ್ಥಳೀಯ ನಾಯಕರು, ಹಾಲಿ-ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಹಾಲಿ-ಮಾಜಿ ಸದಸ್ಯರು ವಿಮಾನ ನಿಲ್ದಾಣ ನಿರ್ಮಾಣ ವಿರೋಧಿಸಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕರಪತ್ರಗಳನ್ನು ಹಂಚಿಕೆ ಮಾಡಲಾಗುತ್ತಿದೆ.
ಮೇಲ್ಕಂಡ ಗ್ರಾಮಗಳ ಗ್ರಾಮಸ್ಥರುಗಳೂ ಹಾಗೂ ರೈತ ಬಾಂಧವರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, 'ರಾಜ್ಯ ಸರ್ಕಾರವು ನೆಲಮಂಗಲ ಹಾಗೂ ಸುತ್ತಮುತ್ತಲಿನ ಗ್ರಾಮಗಳನ್ನು ಸೇರಿಸಿ, 2ನೇ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಹೊರಟಿದ್ದು, ತೋರಿಕೆಗೆ ಹಾಗೂ ರೈತ ಬಾಂಧವರ ದಿಕ್ಕು ತಪ್ಪಿಸಲೆಂದು ಆ ಕಡೆ ಈ ಕಡೆ ಹಾರೋಹಳ್ಳಿ, ಕನಕಪುರ ರಸ್ತೆ, ಬಿಡದಿ, ಚಿಕ್ಕ ಸೋಲೂರು, ಸೋಲುರು, ನೆಲಮಂಗಲದ ಸೋಲದೇವನ ಹಳ್ಳಿ ಗ್ರಾಮದ ಕಡೆ, ರೈತರ ಕಣ್ಣಿಗೆ ಮಣ್ಣಿಚರಲು ದಿನಕ್ಕೊಂದು ಪತ್ರಿಕಾ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಕಡೆಯದಾಗಿ ಅಂತಿಮ ನಿರ್ಧಾರಕ್ಕೆ ಬಂದಿದ್ದು, ಸದ್ದಿಲ್ಲದೆ, ಮೇಲ್ಕಂಡ ಗ್ರಾಮಗಳನ್ನು ವಶಪಡಿಸಿಕೊಂಡು 2ನೇ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಅಂತಿಮ ನಕಾಶೆಯನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಎಲ್ಲಾ ಪ್ರಕ್ರಿಯಗಳನ್ನು ಮುಗಿಸುತ್ತಲಿದೆ.
ಇದನ್ನೂ ಓದಿ: 17 ವರ್ಷಗಳ ಬಿಬಿಎಂಪಿ ಸೇವೆಗೆ ಅಂತ್ಯ ಹಾಡಿದ ಸರ್ಕಾರ, ಇನ್ನು ಗ್ರೇಟರ್ ಬೆಂಗಳೂರು
ಹೀಗಾಗಿ, ಮೇಲೆ ಹೆಸರಿಸಿದ ಗ್ರಾಮಸ್ಥರುಗಳು ಹಾಗೂ ರೈತರು ಬಂಧುಗಳು ಎಲ್ಲರೂ ಸೇರಿ ಇದನ್ನು ಪ್ರಬಲವಾಗಿ ವಿರೊಧಿಸಿ, ನಮಗೆ ಸೇರಿದ ಒಂದಿಂಚು ಜಾಗವನ್ನು ಬಿಡಬಾರದೆಂದು ಹೋರಾಟ ಮಾಡಬೇಕಿದೆ. ಆದ್ದರಿಂದ ಸರ್ಕಾರದ ಅನುಮತಿ ಪಡೆದು ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಿ, ಸರ್ಕಾರಿ ಗೋಮಾಳ ಜಮೀನು ಹಾಗೂ ಕೃಷಿ ಯೋಗ್ಯವಲ್ಲದ ಭೂಮಿಯನ್ನು ಗುರುತಿಸಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿ. ಇದೀಗ ಗುರುತಿಸಿರುವ ಭೂಮಿ ಫಲವತ್ತಾಗಿದ್ದು, ಇಲ್ಲಿ ಕೃಷಿ ಸಂಬಂಧಿತ ಕಾರ್ಯಗಳನ್ನು ನೂರಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇವೆ. ಒಂದು ವೇಳೆ ಇಲ್ಲಿ ನಿರ್ಮಾಣ ಮಾಡಿದರೆ, ಮನೆ-ಮಠ, ಆಸ್ತಿ-ಪಾಸ್ತಿ ಎಲ್ಲವನ್ನೂ ಕಳೆದುಕೊಂಡು ಕೃಷಿಯೂ ಇಲ್ಲದೆ, ಉದ್ಯೋಗವೂ ಸಿಗದೇ ಬೀದಿಗೆ ಬರಬೇಕಾಗುತ್ತದೆ. ಆದ್ದರಿಂದ ರೈತರು ಎಚ್ಚೆತ್ತುಕೊಂಡು ನಮ್ಮ ಜಮೀನುಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕು ಎಂದು ಕರಪತ್ರದ ಮೂಲಕ ಮನವಿ ಮಾಡಲಾಗಿದೆ.