ಆರ್ಟಿಕಲ್ 370 ರದ್ದತಿ-ಪಹಲ್ಗಾಮ್ ಉಗ್ರರ ದಾಳಿ ಕುರಿತ ಹೇಳಿಕೆ: ಬೇಷರತ್ ಕ್ಷಮೆಯಾಚಿಸಿದ ಕಾಂಗ್ರೆಸ್ ಶಾಸಕ!

Synopsis
ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ 370ನೇ ವಿಧಿ ರದ್ದತಿಯೇ ಕಾರಣ ಎಂಬ ಹೇಳಿಕೆ ನೀಡಿದ್ದ ಶಾಸಕ ರಮೇಶ್ ಬಂಡಿಸಿದ್ದೇಗೌಡ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ದೇಶದ ಒಗ್ಗಟ್ಟಿಗೆ ಧಕ್ಕೆ ತರುವ ಹೇಳಿಕೆ ನೀಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ಮಂಡ್ಯ (ಏ.25): ನಮ್ಮ ದೇಶದಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ 370 ಆರ್ಟಿಕಲ್ ವಿಧಿಯ ಸ್ಥಾನಮಾನವನ್ನು ರದ್ದುಗೊಳಿಸಿದ್ದರಿಂದಲೇ ಪಾಕ್ ಉಗ್ರರು ಬಂದು ಕಾಶ್ಮೀರಕ್ಕೆ ಹೋಗಿದ್ದ ಹಿಂದೂ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದರು ಎಂದು ಹೇಳುವ ಮೂಲಕ ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಂಡಿಸಿದ್ದೇಗೌಡ ನಾಲಿಗೆ ಹರಿಬಿಟ್ಟಿದ್ದರು. ಇದರ ಬಗ್ಗೆ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲಿಯೇ ತನ್ನ ಮಾತು ದೇಶದ ಒಗ್ಗಟ್ಟಿಗೆ ವಿರೋಧ ಉಂಟಾಗಿದ್ದು ಎಂಬುದನ್ನು ಅರಿತುಕೊಂಡು ಬೇಷರತ್ ಕ್ಷಮೆ ಕೋರಿದ್ದಾರೆ.
ಕಾಶ್ಮೀರ 370 ಆರ್ಟಿಕಲ್ ರದ್ದು ಮಾಡಿದ್ದಕ್ಕೆ ಉಗ್ರರು ದಾಳಿ ಮಾಡಿದ್ದಾರೆಂದು ಮಾತಿಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಕ್ಷಮೆ ಕೇಳಿದ್ದಾರೆ. ತಾವು ಮಾತನಾಡಿದ್ದ ಮಾತಿನಲ್ಲಿ ತಪ್ಪಿನ ಅರಿವಾದ ಬಳಿಕ, ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿ ಕ್ಷಮೆಯಾಚನೆ ಮಾಡಿದ್ದಾರೆ. ಆರ್ಟಿಕಲ್ 370 ರದ್ದು ಮಾಡಿರುವುದೇ ಪಹಲ್ಗಾಮ್ ಘಟನೆಗೆ ಕಾರಣ ಎಂದಿದ್ದರು. ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ತಮ್ಮ ಹೇಳಿಕೆಯಿಂದ ವಿವಾದ ಶುರುವಾಗುತ್ತಿದ್ದಂತೆ ಎಚ್ಚೆತ್ತ ಶಾಸಕ, ತಮ್ಮ ಹೇಳಿಕೆಯನ್ನು ವಾಪಸ್ಸು ಪಡೆದು ಕ್ಷಮೆಯಾಚನೆ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾನು ಹಾಗೆ ಹೇಳಬಾರದಿತ್ತು. ನನ್ನ ಮಾತಿನಿಂದ ಎಲ್ಲರಿಗೂ ನೋವಾಗಿದೆ. ನಾನು ಎಲ್ಲರಲ್ಲೂ ಕ್ಷಮೆಯಾಚನೆ ಮಾಡುತ್ತೇನೆ. ಸರ್ಕಾರಗಳು ಭದ್ರತೆಯನ್ನು ಹೆಚ್ಚಿಸಬೇಕು. ನರಮೇಧ ಮಾಡಿದವರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಬೇಕು. ಮೃತರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ನೀಡಲಿ ಎಂದು ತಮ್ಮ ಹೇಳಿಕೆಯಿಂದ ಉಂಟಾಗಿದ್ದ ಡ್ಯಾಮೇಜ್ ಕಂಟ್ರೋಲ್ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಿಮ್ಸ್ ಹೆರಿಗೆ ಆಸ್ಪತ್ರೆಗೆ ಮತ್ತಷ್ಟು ಮೂಲ ಸೌಲಭ್ಯಕ್ಕೆ ಚಿಂತನೆ: ಸಚಿವ ದಿನೇಶ್ ಗುಂಡೂರಾವ್
ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿಕೆ ಇಲ್ಲಿದೆ ನೋಡಿ:
ಪಹಲ್ಗಾಮ್ನಲ್ಲಿ ಹಿಂದೂ ಪ್ರವಾಸಿಗರ ನರಮೇಧ ನಡೆದ ಬಗ್ಗೆ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಆರ್ಟಿಕಲ್ 370 ರದ್ದತಿಯೇ ಕಾರಣ. ಈ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದು, ಅವರಲ್ಲಿ ಮೂವರು ಕನ್ನಡಿಗರು ಸೇರಿದ್ದಾರೆ. ಆರ್ಟಿಕಲ್ 370 ತೆಗೆಯುವ ಮುನ್ನ ಚೆನ್ನಾಗಿ ಯೋಚಿಸಬೇಕಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅತಿಯಾದ ಆತ್ಮವಿಶ್ವಾಸ ಹಾಗೂ ದುಡುಕಿನ ನಿರ್ಧಾರದಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ದೇವರನ್ನು ಪೂಜಿಸುವವರಿಗೆ ಆಷಾಢಭೂತಿತನ ಇರಬಾರದು: ಸಿಎಂ ಸಿದ್ದರಾಮಯ್ಯ
ಮುಂದುವರೆದು, ಕಾಶ್ಮೀರದ ಜನರ ಭಾವನೆಗಳನ್ನು ಅರ್ಥಮಾಡಿಕೊಂಡು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೆ ಈ ದಾಳಿಯನ್ನು ತಡೆಯಬಹುದಿತ್ತು. ಉಗ್ರರ ದಾಳಿಯಲ್ಲಿ ಮೂವರು ಕನ್ನಡಿಗರು ಸೇರಿದಂತೆ ಸುಮಾರು 26 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಗೆ ಪರೋಕ್ಷವಾಗಿ ಬಿಜೆಪಿಯೇ ಕಾರಣ ಎಂಬ ಹೇಳಿದ್ದರು.
ಆದರೆ, ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅವರ ದೇಹದಲ್ಲಿ ಹಿಂದೂ ವಿರೋಧಿ ಟಿಪ್ಪು ಸುಲ್ತಾನ್ ಆತ್ಮ ಸೇರಿಕೊಂಡಿರಬೇಕು. ಅದಕ್ಕಾಗಿ ತಾವೊಬ್ಬ ಹಿಂದೂ, ಭಾರತಾಂಬೆಯ ಮಡಿಲಲ್ಲಿ ಹುಟ್ಟಿದವನು ಎಂಬುದನ್ನು ಮರೆತು ಹೀಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕನ ಈ ವಿವಾದಾತ್ಮಕ ಹೇಳಿಕೆಯಿಂದ ಕೆರಳಿರುವ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಎರಡು ದಿನಗಳ ಬಳಿಕ ತಮ್ಮ ಹೇಳಿಕೆಯನ್ನೂ ವಾಪಸ್ ಪಡೆದಿದ್ದಾರೆ.