ಪಹಣಿ ಬೆಲೆಯನ್ನು ಒಮ್ಮೆಲೆ ಹತ್ತು ರುಪಾಯಿ ಹೆಚ್ಚಳ ಮಾಡುವ ಮೂಲಕ ಗ್ರಾಮೀಣರಿಗೆ ಬಿಗ್‌ ಶಾಕ್‌ ನೀಡಿದ ರಾಜ್ಯ ಸರ್ಕಾರ. 

ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ(ಡಿ.31):  ಪಹಣಿ(ಆರ್‌ಟಿಸಿ-ಟ್‌ ಆ್ಯಂಡ್‌ ಟೆನೆನ್ಸಿ ಸರ್ಟಿಫಿಕೆಟ್‌) ಬೆಲೆಯನ್ನು ಒಮ್ಮೆಲೆ ಹತ್ತು ರುಪಾಯಿ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ಗ್ರಾಮೀಣರಿಗೆ ಬಿಗ್‌ ಶಾಕ್‌ ನೀಡಿದೆ. ಈ ಮೊದಲು ಹದಿನೈದು ರುಪಾಯಿ ಪಾವತಿಸಿ ರೈತರು ಪಹಣಿ ಪಡೆಯುತ್ತಿದ್ದು, ಕಳೆದೆರಡು ದಿನಗಳಿಂದ ಇದರ ಬೆಲೆಯನ್ನು 25ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ಭೂ ಹಿಡುವಳಿ ರೈತ ಸಮುದಾಯ ಸರ್ಕಾರದ ಯಾವುದೇ ಸೌಲಭ್ಯ ಪಡೆಯಬೇಕಾದರೂ ಪಹಣಿ ಕಡ್ಡಾಯಗೊಳಿಸಲಾಗಿದೆ. ಆಸ್ತಿ ಮಾರುವಾಗ, ಸಬ್ಸಿಡಿಗೆ ಅರ್ಜಿ ಸಲ್ಲಿಸಲು, ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದೂ ಸೇರಿ ಒಂದಲ್ಲ ಒಂದು ಕಾರಣಕ್ಕೆ ಪಹಣಿ ಸಲ್ಲಿಸಲೇಬೇಕಾಗಿದೆ. ತಹಸೀಲ್ದಾರ್‌ ಕಚೇರಿ, ಇಲ್ಲವೇ ನಾಡಕಚೇರಿಗೆ ಹೋದರೆ ಪಹಣಿ ಪಡೆಯಲು ಸಾಲುಗಟ್ಟಿದ ರೈತರ ದೊಡ್ಡ ಸರತಿ ಸಾಮಾನ್ಯವಾಗಿ ಕಾಣಸಿಗುತ್ತದೆ.

2 ಸ್ಟ್ಯಾಂಪ್‌ ಅಂಟಿಸುತ್ತಿದ್ದರು: 

ಮೊದಲು ಗ್ರಾಮ ಲೆಕ್ಕಿಗರು ಕೈಯಲ್ಲಿ ಪಹಣಿ ಬರೆದುಕೊಡುವಾಗ .2 ಸ್ಟ್ಯಾಂಪ್‌ ಅಂಟಿಸಲಾಗುತ್ತಿತ್ತು. ನಂತರ ರೆವೆನ್ಯೂ ದಾಖಲೆಗಳು ಕಂಪ್ಯೂಟರೀಕರಣಗೊಂಡಾಗ 1-11-2000ರಿಂದ ಪ್ರತಿ ಪಹಣಿಗೆ ಹತ್ತು ರುಪಾಯಿ ನಿಗದಿಪಡಿಸಿ ವಿತರಿಸುವ ವ್ಯವಸ್ಥೆ ಜಾರಿಗೆ ಬಂದಾಗ ರೈತರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಉಚಿತವಾಗಿ ನೀಡುವಂತೆ ಆಗ್ರಹಿಸಿದ್ದರು. 2017ರಲ್ಲಿ ಮತ್ತೆ .5 ಹೆಚ್ಚಳಗೊಳಿಸಿ .15 ನಿಗದಿಮಾಡಲಾಯಿತು. ಇದೀಗ ಒಮ್ಮೆಲೆ ಮತ್ತೆ .10 ಜಾಸ್ತಿ ಮಾಡಿ ಪಹಣಿದರ .25ಕ್ಕೇರಿಸಲಾಗಿದೆ.

ಯಾವುದೇ ಸಮುದಾಯಗಳ ಒತ್ತಡಕ್ಕೆ ಸಿಎಂ ಬೊಮ್ಮಾಯಿ ಮಣಿಯುವುದಿಲ್ಲ: ಮಾದಾರ ಚನ್ನಯ್ಯ ಶ್ರೀ

ದರ ಹೆಚ್ಚಳದ ಪ್ರಮಾಣವನ್ನು ಭೂಮಿ ಸಾಫ್‌್ಟವೇರ್‌ಗೆ ದಾಖಲಿಸಲಾಗಿದೆ. ಪಹಣಿ ತೆಗೆದು ರೈತರಿಗೆ ಕೊಡುವಾಗಲೇ .25 ಮೊತ್ತ ಕಂಪ್ಯೂಟರ್‌ನಲ್ಲಿ ಜನರೇಟ್‌ ಆಗುತ್ತಿದೆ. ಕಾಮನ್‌ ಸರ್ವಿಸ್‌ ಸೆಂಟರ್‌(ಖಾಸಗಿಯಲ್ಲಿ)ಪಹಣಿ ಪಡೆಯುವಾಗ ಈ ಮೊದಲು ಅವರು .5 ಸೇವಾ ಶುಲ್ಕ ವಸೂಲು ಮಾಡುತ್ತಿದ್ದರು. ಈಗ ಮೂವತ್ತು ರುಪಾಯಿ ಪಾವತಿಸಿ ಪಹಣಿ ಪಡೆಯಬೇಕಾಗಿದೆ.

ಭೂ ಕಂದಾಯಕ್ಕಿಂತ ದುಬಾರಿ: ಚಿತ್ರದುರ್ಗದಂಥ ಹಿಂದುಳಿದ ಪ್ರದೇಶದಲ್ಲಿ ಬೆದ್ದಲು(ಖುಷ್ಕಿ) ಜಮೀನಿಗೆ ವಾರ್ಷಿಕವಾಗಿ ಎಕರೆಗೆ ಎರಡರಿಂದ ಮೂರು ರುಪಾಯಿ ಹಾಗೂ ನೀರಾವರಿಗೆ(ಕೊಳವೆ ಬಾವಿ) 6 ರಿಂದ 7 ರುಪಾಯಿಷ್ಟುಕಂದಾಯ ನಿಗದಿ ಮಾಡಲಾಗಿದೆ. ಹೀಗಾಗಿ ಭೂ ಕಂದಾಯಕ್ಕಿಂತ ಪಹಣಿ ಬೆಲೆಯೇ ದುಬಾರಿಯಾಗಿದೆ. ಪಹಣಿ ಬೆಲೆ ಹೆಚ್ಚಳಗೊಳಿಸಿದ ಕಂದಾಯ ಇಲಾಖೆ ಕ್ರಮಕ್ಕೆ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ರೈತರು ಭೂಮಿ ನೋಂದಣಿ ಮಾಡುವಾಗ, ಸಾಲ ಪಡೆಯುವ ವೇಳೆ ಮಾರ್ಚ್‌ಗೇಜ್‌ ಹೆಸರಲ್ಲಿ ಸಾವಿರಗಟ್ಟಲೆ ಸ್ಟ್ಯಾಂಪ್‌ ಡ್ಯೂಟಿ(ಮುದ್ರಾಂಕ ಶುಲ್ಕ) ಕಟ್ಟುತ್ತಿದ್ದಾರೆ. ಇದೇ ದುಡ್ಡು ಸರ್ಕಾರಕ್ಕೆ ಸಾಕಾಗಿತ್ತು. ಪಹಣಿ ಪಡೆಯಲು ಹತ್ತು ರುಪಾಯಿ ಹೆಚ್ಚಳ ಮಾಡುವ ಮೂಲಕ ಹರಿದ ರೈತರ ಜೇಬಿಗೆ ಕೈ ಹಾಕಿ ಅವನನ್ನು ಮತ್ತಷ್ಟುಘಾಸಿಗೊಳಿಸುವ ಪ್ರಯತ್ನ ಮಾಡಿದೆ ಅಂತ ರೈತ ಸಂಘದ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.