Asianet Suvarna News Asianet Suvarna News

ಯಾವುದೇ ಸಮುದಾಯಗಳ ಒತ್ತಡಕ್ಕೆ ಸಿಎಂ ಬೊಮ್ಮಾಯಿ ಮಣಿಯುವುದಿಲ್ಲ: ಮಾದಾರ ಚನ್ನಯ್ಯ ಶ್ರೀ

ಮಾದಾರ ಚನ್ನಯ್ಯ ಶ್ರೀ ನೇತೃತ್ವದಲ್ಲಿ ಮಾದಿಗ ಸಮುದಾಯ ಜಾಗೃತಿ ಸಭೆ, ಸದಾಶಿವ ಆಯೋಗ ವರದಿ ಜಾರಿ, ವರ್ಗೀಕರಣಕ್ಕೆ ಸಂಬಂಧಿಸಿದಂತೆ ಸಮುದಾಯದ ಮುಖಂಡರೊಟ್ಟಿಗೆ ಚರ್ಚೆ. ಜನವರಿ 30ರೊಳಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ‌ ಶಿಫಾರಸ್ಸು ಸಲ್ಲಿಸಲು ಒತ್ತಾಯ. 

Madara Channaiah Talks over CM Basavaraj Bommai grg
Author
First Published Dec 31, 2022, 9:50 AM IST

ವರದಿ:‌ ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಡಿ.31):  ಚುನಾವಣೆ ಸಮೀಪಿಸುತ್ತಿದ್ದಂತೆ ಮೀಸಲಾತಿ ವಿಚಾರಗಳು ಮುನ್ನೆಲೆಗೆ ಬರ್ತಿವೆ.‌ ಸರ್ಕಾರ ಮೊನ್ನೆ ತಾನೇ ಪಂಚಮಸಾಲಿ ಸಮುದಾಯ, ವಾಲ್ಮೀಕಿ ಸಮುದಾಯ, ಪರಿಶಿಷ್ಟ ಜಾತಿ, ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದ ಬೆನ್ನಲ್ಲೇ ಮಾದಿಗ‌ ಸಮುದಾಯದ ಸದಾಶಿಗ ಆಯೋಗ ಜಾರಿಗೆ ಸಂಬಂಧಿಸಿದಂತೆ ಚರ್ಚೆ ಶುರುವಾಗಿದೆ. ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳ‌ ನೇತೃತ್ವದಲ್ಲಿ ನಡೆದ ಸಮುದಾಯದ ಮುಖಂಡರ ಸಭೆಯಲ್ಲಿ ಸಾಕಷ್ಟು ವಿಷಯಗಳು ಚರ್ಚೆಯಾಗಿವೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಮುಖಂಡರು ಹಾಗೂ ಸಮುದಾಯದ ವಿವಿಧ ಮಠಾಧೀಶರು ಸೇರಿ ಒಳ ಮೀಸಲಾತಿಗೆ ಜಾರಿಗಾಗಿ ಸರ್ಕಾರಕ್ಕೆ ಯಾವ ರೀತಿ ಒತ್ತಾಯ ತರಬೇಕು ಎನ್ನುವ ಕುರಿತು ಚರ್ಚಿಸಲಾಗಿದೆ.‌

ಸುಮಾರು 5-6 ತಾಸುಗಳ ಕಾಲ‌ ನಡೆದ ಸಮುದಾಯದ ಮುಖಂಡರ ಜಾಗೃತಿ ಸಭೆಯಲ್ಲಿ ಏನೆಲ್ಲಾ ಚರ್ಚೆಗಳು ಆಯ್ತು ಎಂದು ಸ್ವತಃ ಮಾದಾರ ಚನ್ನಯ್ಯ ಶ್ರೀಗಳನ್ನೇ‌ ವಿಚಾರಿಸಿದಾಗ, ಮುಖ್ಯಮಂತ್ರಿ ಹಾಗೂ ಸಚಿವರು ಮುಂದಿನ ಜನವರಿ ಅಂತ್ಯದೊಳಗೆ ಒಳ ಮೀಸಲಾತಿ ವರ್ಗೀಕರಣ ಶಿಫಾರಸ್ಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಸದಾಶಿವ ಆಯೋಗ‌ ವರದಿ ಯಥಾವತ್ತು ಜಾರಿಯಾಗುವ ವಿಶ್ವಾಸ ಹೆಚ್ಚಾಗಿದೆ ಎಂದು ತಿಳಿಸಿದರು. ಇನ್ನು ಸದಾಶಿವ ವರದಿ ಆಯೋಗ‌ ಜಾರಿ ಆಗಬಾರದು ಎಂದು ಅನೇಕ‌ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಆದರೆ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಮಠಾಧೀಶರು ಈ ಸಭೆಯ ಮೂಲಕ ಬೆಂಬಲ ನೀಡಿದ್ದೇವೆ.  ಸಿಎಂ ಬಸವರಾಜ ಬೊಮ್ಮಾಯಿ ಅವರು ಯಾವುದೇ ಸಮುದಾಯಗಳ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಈಗಾಗಲೇ ಅನೇಕ ಸಂದರ್ಭಗಳಲ್ಲಿ ನಿರೂಪಿಸಿದ್ದಾರೆ. ಸಾಮಾಜಿಕ ನ್ಯಾಯದ ಪರವಾಗಿ ಸಿಎಂ ಇದ್ದಾರೆ, ಆದಷ್ಟು ಬೇಗ ಈ ಸಮುದಾಯ ಮುಖ್ಯ ವಾಹಿನಿಗೆ ತರಲು ಮುಂದಾಗುತ್ತಾರೆ ಎಂಬ ನಂಬಿಕೆ ಹಿನ್ನೆಲೆ, ಯಾವುದೇ ಸಂದರ್ಭದಲ್ಲಿ  ಆದ್ರು ಸಿಎಂ ಬೆನ್ನಿಗೆ ನಮ್ಮ ಸಮುದಾಯ ಹಾಗೂ ಮಠಾಧೀಶರು ಇರುತ್ತದೆ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು ಎಂದರು.

NEW YEAR 2023: ಸಂತೋಷ ಕೂಟಗಳ ಮೇಲೆ ಕಣ್ಗಾವಲು: ಬಿ.ಸಿ.ಪಾಟೀಲ್ ಸೂಚನೆ

ಇನ್ನೂ ಈ ಜಾಗೃತಿ ಸಭೆ ಕುರಿತು ಹಿರಿಯೂರಿನ ಆದಿಜಾಂಬವ ಬೃಹನ್ಮಠದ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿಗಳನ್ನು ಕೇಳಿದಾಗ, ಸಂಕ್ರಾಂತಿ ಹಬ್ಬದೊಳಗೆ ಒಳ ಮೀಸಲಾತಿ ವರ್ಗೀಕರಣ ವಿಚಾರವಾಗಿ ಮಾದಿಗ ಸಮುದಾಯಕ್ಕೆ ಸರ್ಕಾರ ಸಿಹಿ ಸುದ್ದಿ ನೀಡಲಿದೆ. ನಮ್ಮ ಸಮುದಾಯದ ಬಹು ವರ್ಷಗಳ ಹೋರಾಟಕ್ಕೆ ಜಯ ಸಿಗಲಿದೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.

ಒಟ್ಟಾರೆಯಾಗಿ ರಾಜ್ಯದ ‌ಮೂಲೆ ಮೂಲೆಗಳಿಂದ ಆಗಮಿಸಿದ್ದ ಮಾದಿಗ ಸಮುದಾಯದ ಮುಖಂಡರ ಜಾಗೃತಿ ಸಭೆಯಲ್ಲಿ ಅನೇಕರ ಒಕ್ಕೋರಲ ತೀರ್ಮಾನ ಸರ್ಕಾರ ಹಾಗೂ ಸಿಎಂ ಅವರ ಬೆನ್ನಿಗೆ ನಮ್ಮ ಸಮುದಾಯ ಸದಾ ಇರಲಿದೆ. ಸದಾಶಿವ ಆಯೋಗ ವರದಿ ಜಾರಿಗೆ ಹಲವು ಸಮುದಾಯಗಳು ವಿರೋಧ ಮಾಡ್ತಿರೋದಕ್ಕೆ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯಬಾರದು ನಿಮ್ಮೊಟ್ಟಿಗೆ ನಾವಿದ್ದೇವೆ ಎಂದು ಚರ್ಚಿಸಿದರು.

Follow Us:
Download App:
  • android
  • ios