ಗಂಡ ಹೆಂಡತಿ ಜಗಳಲ್ಲಿ ಮಕ್ಕಳಿಬ್ಬರು ಬಲಿ, ವಿಷವುಣಿಸಿ ತಾನೂ ಕುಡಿದ ಪವಿತ್ರಾ ಸ್ಥಿತಿ ಗಂಭೀರ, ಇಬ್ಬರು ಮಕ್ಕಳನ್ನು ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೆಂಗಳೂರು (ಮೇ.03) ಗಂಡ ಹೆಂಡತಿ ಜಗಳದಲ್ಲಿ ಇಬ್ಬರು ಪುಟ್ಟ ಮಕಳು ಬಲಿಯಾದ ದುರಂತ ಘಟನೆ ಬೆಂಗಳೂರಿನ ಯಶವಂತಪುರದ ಗೋಕುಲ ಮೊದಲ ಹಂತದ 10ನೇ ಕ್ರಾಸ್‌ನಲ್ಲಿ ನಡೆದಿದೆ. ಪತಿ ಜೊತೆ ತೀವ್ರ ವಾಗ್ವಾದ ನಡೆದಿದೆ. ಪತಿ ಮಾತುಗಳಿಂದ ಮಾನಸಿಕವಾಗಿ ನೊಂದ ಪತ್ನಿ ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ವಿಷವುಣಿಸಿ ತಾನು ಸೇವಿಸಿದ್ದಾಳೆ. ಬೆಳಗ್ಗೆ ಮೂವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಸ್ಥಳೀಯರ ನೆರವಿನಿಂದ ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಮಕ್ಕಳು ಬದುಕಿ ಉಳಿಯಲಿಲ್ಲ. ಇತ್ತ ಪತ್ನಿ ಸ್ಥಿತಿ ಗಂಭೀರವಾಗಿದೆ.

ಏನಿದು ಘಟನೆ?

ಪತ್ನಿ ಪವಿತ್ರಾ ಮತ್ತು ಪತಿ ಪ್ರಶಾಂತ್ ನಡುವೆ ಕಳೆದ ಹಲವು ದಿನಗಳಿಂದ ಮನಸ್ತಾಪ, ಗಲಾಟೆ ನಡೆಯುತ್ತಲೇ ಇತ್ತು. ಹಲವು ಬಾರಿ ತಾರಕಕ್ಕೇರಿದೆ. ನಿನ್ನೆ(ಮೇ.03) ರಾತ್ರಿ ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಜಗಳ ಜೋರಾಗಿದೆ. ಪತಿ ಮಾತುಗಳಿಂದ ಪವಿತ್ರ ತೀವ್ರವಾಗಿ ನೊಂದುಕೊಂಡಿದ್ದಾಳೆ. ನಾಲ್ಕು ವರ್ಷದ ನಿವೇದ್ ಚೌಧರಿ ಹಾಗೂ 2 ವರ್ಷದ ನಿರ್ಮಲ್ ಚೌಧರಿ ಎಂಬ ಇಬ್ಬರು ಮಕ್ಕಳಿಗೆ ತಡ ರಾತ್ರಿ ವಿಷವುಣಿಸಿದ ಪವಿತ್ರ ತಾನು ಸೇವಿಸಿದ್ದಾಳೆ. ಬೆಳಗ್ಗೆ ಎದ್ದಾಗ ಮೂವರು ತೀವ್ರವಾಗಿ ಅಸ್ವಸ್ಥಗೊಂಡು ಗಂಭೀರವಾಗಿದ್ದಾರೆ. ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಮೂವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿವೇದ್ ಹಾಗೂ ನಿರ್ಮಲ್ ಇಬ್ಬರು ಮೃತಪಟ್ಟಿದ್ದಾರೆ. ಇತ್ತ ಪವಿತ್ರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.

ಏನೂ ಅರಿಯದ ಕಂದಮ್ಮಗಳು ಬಲಿ

2 ವರ್ಷ ಹಾಗೂ ನಾಲ್ಕು ವರ್ಷದ ಇಬ್ಬರು ಗಂಡು ಮಕ್ಕಳು ತಂದೆ ತಾಯಿ ಜಗಳ ನೋಡಿ ಭಯಪಟ್ಟಿದ್ದರು, ಗಾಬರಿಯಾಗಿದ್ದರು. ಇಬ್ಬರ ಮಾತಿನ ಚಕಮಕಿ ಮಕ್ಕಳಿಬ್ಬರಲ್ಲೂ ಆತಂಕ ತಂದಿತ್ತು. ಆದರೆ ಇದರ ಪರಿಣಾಮ ಬಗ್ಗೆ ಪುಟಾಣಿ ಮಕ್ಕಳಿಗೆ ಯಾವುದೇ ಅರಿವು ಇರಲಲ್ಲ. ತಾಯಿ ದುಡುಕಿನ ನಿರ್ಧಾರ ತೆಗದುಕೊಂಡಿದ್ದರೆ, ತಂದೆ ಜಗಳ ಕುಟುಂಬವನ್ನು ಈ ಪರಿಸ್ಥಿತಿಗೆ ತಂದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಯಶವಂತಪುರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪತಿ ಪ್ರಶಾಂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇತ್ತ ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸರು ಮಹಿಳೆಯ ಆರೋಗ್ಯ ಕುರಿತು ವೈದ್ಯರಲ್ಲಿ ವಿಚಾರಿಸಿದ್ದಾರೆ. ಪತಿ ಹಾಗೂ ಪತ್ನಿ ನಡುವಿನ ಗಲಾಟೆಗೆ ಕಾರಣವೇನು? ಕಿರುಕುಳ ಸೇರಿದಂತೆ ಇತರ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.