Agriculture in Karnataka: ರೈತರ ಆದಾಯ ಹೆಚ್ಚಿಸುವ ಸೆಕೆಂಡರಿ ಕೃಷಿ ನಿದೇಶನಾಲಯ ರಚನೆ
* ಗ್ರಾಮೀಣ ಮಟ್ಟದಲ್ಲಿ ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡಿಂಗ್ಗೆ ಪ್ರೋತ್ಸಾಹದ ಉದ್ದೇಶ
* ರೈತರಿಗೆ ಉತ್ತಮ ಬೆಲೆ ಕೊಡಿಸಲು ಪೂರಕವಾಗಿ ಕೆಲಸ ಮಾಡಲಿರುವ ನಿರ್ದೇಶನಾಲಯ
* ರೈತರ ಆರ್ಥಿಕ ಸ್ಥಿತಿ ಉತ್ತಮಪಡಿಸಲು ಕೊಡುಗೆ ನೀಡುವಂತೆ ಮಾಡುವುದು ನಿರ್ದೇಶನಾಲಯದ ಉದ್ದೇಶ
ಬೆಂಗಳೂರು(ಜ.20): ಗ್ರಾಮೀಣ ಮಟ್ಟದಲ್ಲಿ(Rural Area) ಕೃಷಿಯ ಪ್ರಾಥಮಿಕ ಹಾಗೂ ಉಪ ಉತ್ಪನ್ನಗಳ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಸಂಸ್ಕರಣೆ, ಪ್ಯಾಕಿಂಗ್ ಹಾಗೂ ಬ್ರಾಂಡಿಂಗ್ ಮಾಡಲು ಪ್ರೋತ್ಸಾಹಿಸುವ ಸಲುವಾಗಿ ‘ಸೆಕೆಂಡರಿ ಕೃಷಿ ನಿರ್ದೇಶನಾಲಯ’(Directorate of Secondary Agriculture) ರಚಿಸಿ ರಾಜ್ಯ ಸರ್ಕಾರ(Government of Karnataka) ಆದೇಶ ಹೊರಡಿಸಿದೆ.
ಕೃಷಿ ಇಲಾಖೆಯ(Department of Agriculture) ನಿರ್ದೇಶಕರ ನೇತೃತ್ವದಲ್ಲಿ 13 ಜನ ಸದಸ್ಯರು ಇರುವ ನಿರ್ದೇಶನಾಲಯ ಸ್ಥಾಪಿಸಿದ್ದು ದ್ವಿತೀಯ ಹಂತದಲ್ಲಿ ರೈತರಿಗೆ(Farmers) ಉತ್ತಮ ಬೆಲೆ ಕೊಡಿಸಲು ಪೂರಕವಾಗಿ ಕೆಲಸ ಮಾಡಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್(BC Patil) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
' ಪಡಿತರದಲ್ಲಿ ಬೆಲ್ಲ ನೀಡಲು ಕ್ರಮ: ರೈತರ ಆದಾಯ ದ್ವಿಗುಣ ಗುರಿ'
ದ್ವಿತೀಯ ಹಂತದ ಕೃಷಿಯ ಮೂಲ ಉತ್ಪನ್ನ ಹಾಗೂ ಉಪ ಉತ್ಪನ್ನಗಳಿಗೆ ಮಾರುಕಟ್ಟೆ(Market) ಒದಗಿಸುವ ನಿಟ್ಟಿನಲ್ಲಿ ಇದು ಕೆಲಸ ಮಾಡಲಿದೆ. ಜೇನುಸಾಕಾಣೆ, ಜೈವಿಕ ಗೊಬ್ಬರ ಘಟಕಗಳು, ಸಾವಯವ ಬಣ್ಣ ಅಥವಾ ಡೈ ತಯಾರಿಕೆ, ಅಣಬೆ, ರೇಷ್ಮೆ ಹುಳು ಸಾಕಣೆ, ನರ್ಸರಿ ಇತ್ಯಾದಿಗಳಂತಹ ಸಣ್ಣ ಪ್ರಮಾಣದ ಚಟುವಟಿಕೆಗಳು ಸೆಕಂಡರಿ ಕೃಷಿಗೆ(Agriculture) ಉತ್ತಮ ಉದಾಹರಣೆ ಎಂದು ಅವರು ತಿಳಿಸಿದ್ದಾರೆ.
ಗ್ರಾಮೀಣ ಮಟ್ಟದಲ್ಲಿ ಗುಡಿ ಕೈಗಾರಿಕೆ ಎಂದು ಪರಿಗಣಿಸಬಹುದಾದ ಚಟುವಟಿಕೆಗಳು ಸ್ಥಳೀಯ ಮತ್ತು ಸುತ್ತಮುತ್ತಲಿನ ರೈತರ ಆರ್ಥಿಕ ಸ್ಥಿತಿ ಉತ್ತಮಪಡಿಸಲು ಕೊಡುಗೆ ನೀಡುವಂತೆ ಮಾಡುವುದು ನಿರ್ದೇಶನಾಲಯದ ಪ್ರಮುಖ ಉದ್ದೇಶವಾಗಿದೆ.
ರೈತರ ಆದಾಯ ಹೆಚ್ಚಳಕ್ಕೆ 2ನೇ ಕೃಷಿ ನಿರ್ದೇಶನಾಲಯ: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ!
ಬೆಂಗಳೂರುಳ: ಕೃಷಿಕರ ಆದಾಯ ಹೆಚ್ಚಿಸಲು ಶೀಘ್ರವೇ ನೂತನ ಕೃಷಿ ನಿರ್ದೇಶನಾಲಯ ಸ್ಥಾಪಿಸಿ ಅಗತ್ಯ ಹಣಕಾಸು ನೆರವು ನೀಡಲಾಗುವುದು. ಸಮಗ್ರ ಮತ್ತು ನೈಸರ್ಗಿಕ ಕೃಷಿಗೂ ಬಜೆಟ್ನಲ್ಲಿ ಹೆಚ್ಚು ಅನುದಾನ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಿಸಿದರು.
ಕಳೆದ ವರ್ಷ ಡಿ.27 ರಂದು ನಗರದ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕೃಷಿ ಭವನದ ಎರಡನೇ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ್ದ ಅವರು, ಕೃಷಿಗೆ (Agriculture) ಆದ್ಯತೆ ನೀಡಲು ಆಗಾಗಲೇ ಕೃಷಿ ನಿರ್ದೇಶನಾಲಯ ಸ್ಥಾಪಿಸಲಾಗಿದೆ. ಕೃಷಿಕರ ಆದಾಯ ಹೆಚ್ಚಿಸುವ ದೃಷ್ಟಿಯಿಂದ ಎರಡನೇ ಕೃಷಿ ನಿರ್ದೇಶನಾಲಯ ಸ್ಥಾಪಿಸಲು ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದರು.
Aerial Crop Spraying: ಅಡಕೆ ಬೆಳೆ ಕ್ರಿಮಿನಾಶಕ ಸಿಂಪಡಿಸಲು ಬಂತು ಡ್ರೋನ್!
ಕೃಷಿಯೇತರ ಆದಾಯ ವೃದ್ಧಿಸುವ ನಿಟ್ಟಿನಲ್ಲೂ ಸರ್ಕಾರ ಕಾರ್ಯೋನ್ಮುಖ
ಕೃಷಿ ವಲಯದಲ್ಲಿ ಶೇ.1 ರಷ್ಟುಅಭಿವೃದ್ಧಿ ಆದರೆ ಕೈಗಾರಿಕೆಯಲ್ಲಿ (Industry) ಶೇ.4 ರಷ್ಟುಅಭಿವೃದ್ಧಿಯಾಗಲಿದೆ. ಇದರಿಂದಾಗಿ ಸೇವಾ ವಲಯದಲ್ಲಿ ಶೇ.10 ರಷ್ಟು ಪ್ರಭಾವ ಬೀರಲಿದೆ. ಕೃಷಿ ವಲಯದ ಅಭಿವೃದ್ಧಿ ರಾಜ್ಯದ ಆರ್ಥಿಕ ಸ್ಥಿತಿಗೂ ಬಹಳ ಮುಖ್ಯವಾಗಿದೆ. ಕೃಷಿಯೇತರ ಆದಾಯ ವೃದ್ಧಿಸಲು ಮೀನುಗಾರಿಕೆ ಮತ್ತಿತರ ಚಟುವಟಿಕೆಗೆ ಪ್ರೋತ್ಸಾಹ ನೀಡಿ ಕೃಷಿಕರ ಆದಾಯ ಹೆಚ್ಚಿಸಲಾಗುವುದು. ಸಮಗ್ರ ಮತ್ತು ನೈಸರ್ಗಿಕ ಕೃಷಿಗೂ ಉತ್ತೇಜನ ನೀಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು.
ಹವಾಮಾನ ಆಧಾರಿತ 10 ಕೃಷಿ ವಲಯಗಳು ರಾಜ್ಯದಲ್ಲಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು. ವರ್ಷದ ಎಲ್ಲ ಹವಾಮಾನದಲ್ಲಿಯೂ ಒಂದಲ್ಲಾ ಒಂದು ಬೆಳೆ ಬೆಳೆಯುವ ವಾತಾವರಣ ನಮ್ಮ ರಾಜ್ಯದಲ್ಲಿ ಮಾತ್ರವಿದೆ. ಹವಾಮಾನ ಆಧಾರಿತ ಕೃಷಿ ಚಟುವಟಿಕೆ ನಡೆಸಬೇಕು. ಭೂಮಿ ಅಷ್ಟೇ ಇದೆ. ಆದರೆ, ಕೃಷಿಕರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಕೃಷಿಯೇತರ ಆದಾಯ ವೃದ್ಧಿಸುವ ನಿಟ್ಟಿನಲ್ಲೂ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದ್ದರು. ಇದೀಗ ರೈತರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡ ಸಿಎಂ ಬೊಮ್ಮಾಯಿ ಅವರು ಸೆಕೆಂಡರಿ ಕೃಷಿ ನಿರ್ದೇಶನಾಲಯ ರಚಿಸಿದ್ದಾರೆ.