ಧರ್ಮದ ಮೂಲ ದಯೆಯೇ ಆಗಿದೆ. ನಮ್ಮ ವಂಶವಾಹಿಯಲ್ಲಿಯೇ ಎಲ್ಲರೂ ಒಂದೇ ಎಂಬ ಅಂಶ ಇದೆ. ಆದರೆ, ಆರ್‌ಎಸ್‌ಎಸ್‌ ದ್ವೇಷವನ್ನು ಹರಡುತ್ತಿದೆ. ನಾವೆಲ್ಲಾ ಹಿಂದು, ನಾವೆಲ್ಲ ಒಂದು ಎಂದು ಘೋಷಣೆ ಮಾಡುತ್ತಿದ್ದರೂ, ಸಮಾಜದಲ್ಲಿ ಅಸ್ಪೃಶ್ಯತೆ, ಜಾತಿ ತಾರತಮ್ಯ ಪಾಲಿಸುತ್ತಿದ್ದಾರೆ: ಅಗ್ನಿ ಶ್ರೀಧರ್‌ 

ಬೆಂಗಳೂರು(ಜ.11): ಪ್ರಸ್ತುತ ದೇಶದಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷ, ದುರಂತ ನಡೆಯುತ್ತಿರುವ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಹಿಂದುತ್ವದ ಸಂಕೋಲೆಯಿಂದ ಹೊರಬಂದು ನೆಲದ ನೈಜ ಸಂಸ್ಕೃತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜ. 12 ರಂದು ನೂತನವಾದ ರಾಷ್ಟ್ರೀಯ ದ್ರಾವಿಡ ಸಂಘ (ಆರ್‌ಡಿಎಸ್‌) ಆರಂಭಿಸಲಾಗುವುದು ಎಂದು ಪತ್ರಕರ್ತ ಅಗ್ನಿ ಶ್ರೀಧರ್‌ ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೆ ನಮ್ಮ ನೆಲದಲ್ಲಿ ಎಲ್ಲರನ್ನು ಒಳಗೊಳ್ಳುವ ಸಂಸ್ಕೃತಿ ಇತ್ತು. ಜಾತಿ, ಮತ, ಲಿಂಗ ತಾರತಮ್ಯ ಇರಲಿಲ್ಲ. ಎಲ್ಲರೂ ಎಲ್ಲರಿಗೋಸ್ಕರ ಬದುಕುತ್ತಿದ್ದರು. ಆದರೆ ಸದ್ಯ ದೇಶದಲ್ಲಿ ಹಿಂದುತ್ವ ಹೆಸರಲ್ಲಿ ಸಾಕಷ್ಟು ದುರಂತ ನಡೆಯುತ್ತಿದೆ. ಧರ್ಮದ ಹೆಸರಿನಲ್ಲಿ ಅಧರ್ಮವಿದ್ದು, ದ್ವೇಷ ಬಿತ್ತಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯುವ ಜನತೆಯನ್ನು ಜಾಗೃತಗೊಳಿಸಲು ಎಲ್ಲಾ ರೀತಿಯ ಪ್ರಭುತ್ವವನ್ನು ಒಂದೆಡೆ ತರಲು ಸಂಘ ಆರಂಭಿಸುತ್ತಿದ್ದೇವೆ’ ಎಂದರು.

ಶಿವ 'ತಪಸ್ವಿ' ಅದಕ್ಕಾಗಿ ಆರೆಸ್ಸೆಸ್‌ 'ಹರ್ ಹರ್‌ ಮಹಾದೇವ್‌' ಅನ್ನೋದಿಲ್ಲ: ರಾಹುಲ್‌ ಗಾಂಧಿ!

‘ಧರ್ಮದ ಮೂಲ ದಯೆಯೇ ಆಗಿದೆ. ನಮ್ಮ ವಂಶವಾಹಿಯಲ್ಲಿಯೇ ಎಲ್ಲರೂ ಒಂದೇ ಎಂಬ ಅಂಶ ಇದೆ. ಆದರೆ, ಆರ್‌ಎಸ್‌ಎಸ್‌ ದ್ವೇಷವನ್ನು ಹರಡುತ್ತಿದೆ. ನಾವೆಲ್ಲಾ ಹಿಂದು, ನಾವೆಲ್ಲ ಒಂದು ಎಂದು ಘೋಷಣೆ ಮಾಡುತ್ತಿದ್ದರೂ, ಸಮಾಜದಲ್ಲಿ ಅಸ್ಪೃಶ್ಯತೆ, ಜಾತಿ ತಾರತಮ್ಯ ಪಾಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘವು ನಾಡಿನ ಪ್ರತಿಯೊಬ್ಬ ಯುವಜನರನ್ನು ತಲುಪಿ, ದ್ರಾವಿಡ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಯಾರ ಮೇಲಿನ ದ್ವೇಷಕ್ಕಾಗಿಯೋ, ಹಿಂಸೆ ಪ್ರಚೋದನೆ ನೀಡಲೋ ಆರ್‌ಡಿಎಸ್‌ ಮುಂದಾಗುವುದಿಲ್ಲ’ ಎಂದು ಹೇಳಿದರು.

ಲಿಂಗಾಯತರು ದ್ರಾವಿಡರು:

ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಜಿ.ಬಿ.ಪಾಟೀಲ್‌ ಮಾತನಾಡಿ, ‘ಲಿಂಗಾಯತ ಸಮುದಾಯ ಸೇರಿದಂತೆ ದಕ್ಷಿಣ ಭಾರತದ ಜನರು ತಮ್ಮ ಹಿನ್ನೆಲೆ ಹುಡುಕುತ್ತಾ ಹೊರಟರೇ ದ್ರಾವಿಡರು ಎಂದು ತಿಳಿಯುತ್ತದೆ. ಆರ್ಯರು ಈ ದೇಶದ ಮೂಲ ನಿವಾಸಿಗಳೆಂದು ಸಾಕ್ಷೀಕರಿಸುವಲ್ಲಿ ವಿಫಲರಾಗಿದ್ದಾರೆ. ನಮ್ಮ ಸಂಸ್ಕೃತಿಯತ್ತ ಮರಳಲು ನೂತನ ಸಂಘ ಕಟ್ಟಲಾಗುತ್ತಿದೆ’ ಎಂದರು.

ರಾಷ್ಟ್ರೀಯ ದ್ರಾವಿಡ ಸಂಘದ ಉದ್ಘಾಟನಾ ಸಮಾರಂಭ ಮಹಾರಾಣಿ ಕಾಲೇಜು ಪಕ್ಕದ ಸೌಟ್ಸ್‌ ಗೈಡ್ಸ್‌ ಸಭಾಂಗಣದಲ್ಲಿ ಜ.12ಕ್ಕೆ ಬೆಳಗ್ಗೆ 10.30ಕ್ಕೆ ಜರುಗಲಿದೆ. ಕಾರ್ಯಕ್ರಮದಲ್ಲಿ ಡಾ.ಬಂಜಗೆರೆ ಜಯಪ್ರಕಾಶ್‌, ಶಾಸಕ ಸತೀಶ್‌ ಜಾರಕಿಹೊಳಿ, ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಜಿ.ಬಿ.ಪಾಟೀಲ್‌, ಚಿತ್ರ ಸಾಹಿತಿ ಕವಿರಾಜ್‌ ಭಾಗಿಯಾಗಲಿದ್ದಾರೆ.