ಆರೆಸ್ಸೆಸ್‌ ಕುರಿತಾಗಿ ಮತ್ತೊಮ್ಮೆ ಹರಿಹಾಯ್ದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, 21ನೇ ಶತಮಾನದಲ್ಲಿ ಕೌರವರು ಖಾಕಿ ಹಾಫ್‌ ಪ್ಯಾಂಟ್‌ಅನ್ನು ಧರಿಸುತ್ತಾರೆ ಹಾಗೂ ಶಾಖೆಯನ್ನು ನಡೆಸುತ್ತಾರೆ ಎಂದು ಟೀಕೆ ಮಾಡಿದ್ದಾರೆ.

ಕುರುಕ್ಷೇತ್ರ (ಜ.9): ಭಾರತ್‌ ಜೋಡೋ ಯಾತ್ರೆಯ ವೇಳೆ ಒಂದರ ಮೇಲೆ ಒಂದರಂತೆ ವಿವಾದಿತ ಮಾತುಗಳನ್ನು ಆಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಆರೆಸ್ಸೆಸ್‌ ಅನ್ನು ಕೌರವರಿಗೆ ಹೋಲಿಸಿದ್ದಾರೆ. ಅದಲ್ಲದೆ, ಆರೆಸ್ಸೆಸ್‌ನವರೂ ಎಂದಿಗೂ ಹರ್‌ ಹರ್‌ ಮಹಾದೇವ್‌ ಅನ್ನೋದಿಲ್ಲ. ಶಿವ ತಪಸ್ವಿ ಎನ್ನುವ ಕಾರಣಕ್ಕಾಗಿ ಅವರೆಂದೂ ಹರ ಹರ ಮಹಾದೇವ್‌ ಎನ್ನುವ ಘೋಷಣೆಯನ್ನು ಕೂಗೋದಿಲ್ಲ ಎಂದು ಹೇಳಿದ್ದಾರೆ. ಭಾರತ್‌ ಜೋಡೋ ಯಾತ್ರೆ ಪ್ರಸ್ತುತ ಹರಿಯಾಣದ ಕುರುಕ್ಷೇತ್ರದಲ್ಲಿದ್ದು ಈ ವೇಳೆ ರಾಹುಲ್‌ ಗಾಂಧಿ ಈ ಮಾತನ್ನು ಆಡಿದ್ದಾರೆ. 'ಕೌರವರು ಯಾರು? 21ನೇ ಶತಮಾನದ ಕೌರವರು ಖಾಕಿ ಬಣ್ಣದ ಅರ್ಧ ಪ್ಯಾಂಟ್‌ ಧರಿಸಸ್ತಾರೆ. ಕೈಯಲ್ಲಿ ಲಾಠಿ ಹಿಡಿದುಕೊಂಡು ಶಾಖೆಯನ್ನು ನಡೆಸುತ್ತಾರೆ. ಅವರೊಂದಿಗೆ ಅದೇ ರೀತಿಯಲ್ಲಿ ಹಿಂದುಸ್ತಾನದ 2-3 ಶ್ರೀಮಂತರು ಕೂಡ ಜೊತೆಯಾಗಿದ್ದಾರೆ. ಕೌರವರೊಂದಿಗೆ ಇವರೆಲ್ಲರೂ ಇದ್ದಾರೆ. ನೋಟು ಅಮಾನ್ಯೀಕರಣ ಮಾಡಿದವರು ಯಾರು? ಜಿಎಸ್‌ಟಿಯನ್ನು ತಪ್ಪಾಗಿ ಜಾರಿ ಮಾಡಿದವರು 'ಯಾರು? ಇವೆಲ್ಲವನ್ನೂ ಯಾರಿಗಾಗಿ ಮಾಡಿದ್ದಾರೆ. ಯಾರ ಸೂಚನೆಯ ಅನ್ವಯ ಮಾಡಿದ್ದಾರೆ ಎನ್ನುವುದನ್ನು ಸರ್ಕಾರ ತಿಳಿಸಬೇಕು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…


ನೋಟು ಅಮಾನ್ಯೀಕರಣ ಹಾಗೂ ತಪ್ಪಾದ ಜಿಎಸ್‌ಟಿ ಜಾರಿಗೆ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿರಬಹುದು. ಆದರೆ, ನರೇಂದ್ರ ಮೋದಿ ಅವರೊಬ್ಬರೇ ತಮ್ಮ ಶಕ್ತಿಯನ್ನು ಬಳಸಿ ಇದನ್ನು ಮಾಡಿದ್ದಲ್ಲ. ಹಿಂದುಸ್ತಾನದ ಎರಡು-ಮೂರು ಕೋಟ್ಯಧಿಪತಿಗಳು ತಮ್ಮ ಶಕ್ತಿಯನ್ನು ಬಳಸಿ ಪ್ರಧಾನಿಯವರಿಂಧ ಸಹಿ ಮಾಡಿಸಿಕೊಂಡಿದ್ದಾರೆ. ಇದನ್ನು ನಂಬೋದು ಬಿಡೋದು ನಿಮಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.

ಆರೆಸ್ಸೆಸ್‌ನವರು ಹರ ಹರ ಮಹಾದೇವ್‌ ಅನ್ನೋದಿಲ್ಲ: ಆರೆಸ್ಸೆಸ್ ಜನರು ಎಂದಿಗೂ 'ಹರ್ ಹರ್ ಮಹಾದೇವ್' ಎಂದು ಜಪಿಸುವುದಿಲ್ಲ ಏಕೆಂದರೆ ಭಗವಾನ್ ಶಿವನು 'ತಪಸ್ವಿ' ಆಗಿದ್ದವನು. ಈ ಜನರು ಭಾರತದ 'ತಪಸ್ಯ' ಮೇಲೆ ದಾಳಿ ಮಾಡುತ್ತಿದ್ದಾರೆ. ಅವರು 'ಜೈ ಸಿಯಾ ರಾಮ್' ನಿಂದ ಸೀತಾ ದೇವಿಯನ್ನು ತೆಗೆದುಹಾಕಿದ್ದಾರೆ. ಈ ಜನರು ಭಾರತದ ಸಂಸ್ಕೃತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.