ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಾವಳಿ ವೀಕ್ಷಿಸಲು ಶಾಸಕರಿಗೆ ತಲಾ 2 ಟಿಕೆಟ್‌ ನೀಡುವಂತೆ ಕೇಳಿದ್ದು, ಅದಕ್ಕೆ ಕೆಎಸ್‌ಸಿಎ ಒಪ್ಪಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಾವಳಿ ವೀಕ್ಷಿಸಲು ಶಾಸಕರಿಗೆ ತಲಾ 2 ಟಿಕೆಟ್‌ ನೀಡುವಂತೆ ಕೇಳಿದ್ದು, ಅದಕ್ಕೆ ಕೆಎಸ್‌ಸಿಎ ಒಪ್ಪಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

Add Asianetnews Kannada as a Preferred SourcegooglePreferred

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರ ಐಪಿಎಲ್‌ ಟಿಕೆಟ್‌ ಬೇಡಿಕೆ ಕುರಿತು ಕೆಎಸ್‌ಸಿಎ ಅಧ್ಯಕ್ಷರನ್ನು ಕರೆದು ಮಾತನಾಡಿದ್ದೇನೆ. ಈವರೆಗೆ ಶಾಸಕರಿಗೆ ತಲಾ 1 ಟಿಕೆಟ್‌ ನೀಡುತ್ತಿದ್ದರು. ಅದರೊಂದಿಗೆ ಹೆಚ್ಚುವರಿಯಾಗಿ ಒಂದು ಟಿಕೆಟ್‌ ನೀಡುವಂತೆ ಕೇಳಿದ್ದೇವೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಆರ್‌ಸಿಬಿಯವರಿಗೂ ಈ ಬಗ್ಗೆ ಕೇಳಲಾಗಿದೆ. ವಿಧಾನಸಭೆ ಸ್ಪೀಕರ್ ಅವರು ಶಾಸಕರಿಗೆ ತಲಾ ನಾಲ್ಕು ಟಿಕೆಟ್‌ ನೀಡುವಂತೆ ಕೆಎಸ್‌ಸಿಎಗೆ ಸೂಚಿಸಲು ಹೇಳಿದ್ದರು. ಆದರೆ, ಈಗಾಗಲೇ ಟಿಕೆಟ್‌ಗಳು ಮಾರಾಟ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಟಿಕೆಟ್‌ ಬಗ್ಗೆ ಚರ್ಚಿಸಲಾಗುವುದು ಎಂದರು.

ಶಾಸಕರಿಗೆ ಟಿಕೆಟ್‌ ಕೇಳುವ ಹಕ್ಕಿದೆ:

ಶಾಸಕರ ಬೇಡಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್‌, ಶಾಸಕರಿಗೆ ಹಕ್ಕಿದೆ. ಅವರು ಸರ್ಕಾರ ಮತ್ತು ವ್ಯವಸ್ಥೆಯ ಭಾಗ. ನಾವು ಒತ್ತಡಗಳ ನಡುವೆಯೂ ಪಂದ್ಯಾವಳಿ ಆಯೋಜನೆಗೆ ಅನುಮತಿ ನೀಡಿದ್ದೇವೆ. ನಾನು ಕೆಎಸ್‌ಸಿಎ ಸದಸ್ಯನಾಗಿರಬಹುದು, ಅದು ಬೇರೆ. ನಮ್ಮ ಶಾಸಕರಿಗೆ ಪಂದ್ಯ ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಐಪಿಎಲ್‌ ಭದ್ರತೆಗಾಗಿ ಸಿಎಸ್‌ ಸಭೆ

ಐಪಿಎಲ್‌ ಪಂದ್ಯಾವಳಿ ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಅವರು ಅಧಿಕಾರಿಗಳು ಹಾಗೂ ಕೆಎಸ್‌ಸಿಎ ಪದಾಧಿಕಾರಿಗಳೊಂದಿಗೆ ಸುರಕ್ಷತೆ ಕುರಿತು ಶುಕ್ರವಾರ ಸಭೆ ನಡೆಸಿದರು.

ಕ್ರಿಕೆಟ್‌ ಪಂದ್ಯ ವೀಕ್ಷಣೆಗೆ ಬರುವವರ ಸುರಕ್ಷತೆಗಾಗಿ ಕ್ರೀಡಾಂಗಣದ ಒಳಗೆ ಮತ್ತು ಕ್ರೀಡಾಂಗಣ ಸುತ್ತಲೂ ರೂಪಿಸಲಾಗಿರುವ ಭದ್ರತಾ ವ್ಯವಸ್ಥೆ, ನಗರದ ಸಂಚಾರ ವ್ಯವಸ್ಥೆಯಲ್ಲಿ ಮಾಡಿಕೊಳ್ಳಲಾಗಿರುವ ಬದಲಾವಣೆ, ವಾಹನ ನಿಲುಗಡೆ ವ್ಯವಸ್ಥೆ, ಕ್ರೀಡಾಂಗಣದ ಒಳಗೆ ಕುಡಿಯುವ ನೀರು ಸೇರಿ ಇನ್ನಿತರ ಅವಶ್ಯಕ ಮಾಹಿತಿಯನ್ನು ಪಡೆದುಕೊಂಡರು.

ಮೆಟ್ರೋ ರೈಲಿನ ವೇಳಾಪಟ್ಟಿ, ನಿಲ್ದಾಣಗಳಲ್ಲಿ ಮಾಡಿಕೊಳ್ಳಲಾಗಿರುವ ಹೆಚ್ಚುವರಿ ಭದ್ರತೆ ಕುರಿತು ಮಾಹಿತಿ ಪಡೆದು, ಯಾವುದೇ ಸಣ್ಣ ಅಹಿತಕರ ಘಟನೆಗೂ ಅವಕಾಶ ನೀಡದಂತೆ ಎಚ್ಚರವಹಿಸಬೇಕು. ಅಧಿಕಾರಿಗಳು ಮತ್ತು ಸಂಸ್ಥೆ ಹೈಅಲರ್ಟ್‌ನಲ್ಲಿರಬೇಕು. ಆಯಾ ಕ್ಷಣದ ಮಾಹಿತಿಯನ್ನು ಹಿರಿಯ ಅಧಿಕಾರಿಗಳೊಂದಿಗೆ ನಿಯಮಿತವಾಗಿ ವಿನಿಮಯ ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ಹಾಗೆಯೇ, ಪಂದ್ಯಾವಳಿ ಆಯೋಜನೆಗೆ ಸರ್ಕಾರ ವಿಧಿಸಿರುವ ಷರತ್ತುಗಳು ಮತ್ತು ಎಚ್ಚರಿಕೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ನಿರ್ದೇಶಿಸಿದರು.

ಟಾಪ್- ಕೊನೆಗೂ ಸಿಕ್ತು

- ಶಾಸಕರಿಗೆ ಟಿಕೆಟ್‌ ಕೇಳುವ ಹಕ್ಕಿದೆ : ಶಿವಕುಮಾರ್‌

ಶಾಸಕರ ಟಿಕೆಟ್‌ ಬೇಡಿಕೆ ಮರುದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಬೆಂಗಳೂರಿನಲ್ಲಿ ಶುಕ್ರವಾರ ಭೇಟಿಯಾದರು.