ಐಪಿಎಲ್‌ ಪಂದ್ಯಾವಳಿಯ ಟಿಕೆಟ್‌ ವಿಚಾರ ವಿಧಾನಸಭೆಯಲ್ಲಿ ಚರ್ಚೆಗೆ ಬಂದಿದ್ದು, ಪ್ರತಿ ಶಾಸಕರಿಗೆ ಕನಿಷ್ಠ 5 ಟಿಕೆಟ್‌ಗಳನ್ನು ನೀಡಬೇಕೆಂದು ಪಕ್ಷಾತೀತವಾಗಿ ಶಾಸಕರು ಆಗ್ರಹಿಸಿದ್ದಾರೆ. ಕ್ರೀಡಾಂಗಣಕ್ಕೆ ಸರ್ಕಾರ ಕಡಿಮೆ ಬಾಡಿಗೆಗೆ ಜಾಗ ನೀಡಿದ್ದರೂ, ಶಾಸಕರಿಗೆ ಗೌರವ ಸಿಗುತ್ತಿಲ್ಲ ಎಂದ ಆರ್. ಅಶೋಕ್

ವಿಧಾನಸಭೆ (ಮಾ.27): ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ಟಿಕೆಟ್‌ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಪ್ರತಿ ಶಾಸಕರಿಗೆ ಕನಿಷ್ಠ 5 ಟಿಕೆಟ್‌ ನೀಡುವಂತೆ ಪಕ್ಷಾತೀತವಾಗಿ ಶಾಸಕರು ಆಗ್ರಹಿಸಿದ ಪ್ರಸಂಗ ನಡೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುರುವಾರ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಈ ವಿಚಾರ ಪ್ರಸ್ತಾಪಿಸಿ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆದಾಗ ಶಾಸಕರಿಗೆ ಒಂದು ಪಾಸ್‌ ಕೊಡಲ್ಲ. ಕ್ರೀಡಾಂಗಣಕ್ಕೆ ರಾಜ್ಯ ಸರ್ಕಾರ ಮಾಸಿಕ 1,600 ರು. ಬಾಡಿಗೆಯಂತೆ 16.32 ಎಕರೆ ಜಾಗ ನೀಡಿದೆ. ಕೊಡುವ ಒಂದು ಟಿಕೆಟ್‌ ಮೇಲೂ ನಮ್ಮ ಹೆಸರು ಇರುತ್ತದೆ. ಆ ಟಿಕೆಟ್‌ ಕೊಟ್ಟು ನಮ್ಮ ಕುಟುಂಬದವರನ್ನೂ ಕಳುಹಿಸಲು ಆಗಲ್ಲ. ಪ್ರತಿ ಶಾಸಕರಿಗೆ ಕನಿಷ್ಠ 5 ಟಿಕೆಟ್‌ ಕೊಡಬೇಕು. ಅವರು ಉಚಿತವಾಗಿ ಕೊಡುವುದು ಬೇಡ. ನಾವು ಹಣ ಕೊಡುತ್ತೇವೆ ಎಂದರು. ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್‌ನ ವಿಜಯಾನಂದ ಕಾಶಪ್ಪನವರ್‌, ಶಾಸಕರಿಗೆ ಮರ್ಯಾದೆ ಇಲ್ಲವೇ? ಜನಸಾಮಾನ್ಯರ ಜತೆಗೆ ನಾವು ಸರತಿ ಸಾಲಲ್ಲಿ ನಿಲ್ಲಬೇಕಾ? ಪ್ರತಿ ಶಾಸಕರಿಗೆ ಕನಿಷ್ಠ 5 ಟಿಕೆಟ್‌ ಕೊಡಿಸಿ ಎಂದು ಆಗ್ರಹಿಸಿದರು. 

ಇದಕ್ಕೆ ಬಿಜೆಪಿಯ ದುರ್ಯೊಧನ ಐಹೊಳೆ, ಕಾಂಗ್ರೆಸ್‌ನ ಕೋನರೆಡ್ಡಿ ಸೇರಿ ಕೆಲವರು ದನಿಗೂಡಿಸಿದರು. ಸ್ಪೀಕರ್‌ ಖಾದರ್‌ ಪ್ರತಿಕ್ರಿಯಿಸಿ, ಟಿಕೆಟ್‌ ಬಗ್ಗೆ ಸಂಬಂಧಿತರನ್ನು ಕರೆಸಿ ಮಾತನಾಡಿ. ಶಾಸಕರ ಕುಟುಂಬದ ಕನಿಷ್ಠ 4 ವಿಐಪಿ ಸ್ಟ್ಯಾಂಡ್‌ ಟಿಕೆಟ್‌ ಕೊಡುವಂತಾಗಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ನಾನು ಕೆಎಸ್‌ಸಿಎ ಸದಸ್ಯ. ಅಧ್ಯಕ್ಷರನ್ನು ಕರೆಸಿ ಮಾತನಾಡುವೆ ಎಂದರು.

ಸಾಮ್ರಾಟ್‌ ಅಶೋಕ್‌, ಸ್ಪೀಕರ್‌ ಖಾದರ್‌ ಆದೇಶವನ್ನು ಅವರಿಗೆ ಹೇಳುತ್ತೇನೆ ಎಂದು ಹೇಳಿದರು. ಮನೆಯವರನ್ನು ಕರೆದುಕೊಂಡು ಹೋಗುವುದು ಹೇಗೆ? ಒಂದು ಟಿಕೆಟ್‌ಗೆ 5 ಸಾವಿರ ರು.ನಿಂದ 20 ಸಾವಿರ ರು. ವೆಚ್ಚವಾಗುತ್ತದೆ. ಕಾಳ ಸಂತೆಯಲ್ಲಿ ಟಿಕೆಟ್‌ಗಳ ಮಾರಾಟ ನಡೆಯುತ್ತದೆ.