ಇನ್ನು 10 ದಿನದಲ್ಲಿ ಡಿಕೆಶಿ 5 ಕೇಸ್‌ ವಿಚಾರಣೆ! ಇಂದು ಇ.ಡಿ. ವಿಚಾರಣೆಗೆ ಹಾಜರಾಗಲು ದಿಲ್ಲಿಗೆ ಬೇಕಂತಲೇ ಬಿಜೆಪಿಯಿಂದ ಒತ್ತಡ: ಕಾಂಗ್ರೆಸ್‌ ಕಿಡಿ

ಬೆಂಗಳೂರು (ನ.14) : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಸೋಮವಾರ ಮತ್ತೊಮ್ಮೆ ವಿಚಾರಣೆ ಎದುರಿಸುವಂತೆ ಜಾರಿ ನಿರ್ದೇಶನಾಲಯ ನೋಟಿಸ್‌ ನೀಡಿದ್ದು, ಮುಂದಿನ ಒಂದು ವಾರದಲ್ಲಿ ಶಿವಕುಮಾರ್‌ ಅವರ ಇನ್ನೂ ನಾಲ್ಕು ಪ್ರಕರಣಗಳು ವಿವಿಧ ನ್ಯಾಯಾಲಯ, ತನಿಖಾ ಸಂಸ್ಥೆಗಳಲ್ಲಿ ವಿಚಾರಣೆಗೆ ಬರಲಿವೆ.

- ಹತ್ತು ದಿನಗಳ ಅವಧಿಯಲ್ಲಿ ಐದು ಪ್ರಕರಣಗಳ ವಿಚಾರಣೆ ನಡೆಯುತ್ತಿರುವುದರಿಂದ ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ‘ಡಿ.ಕೆ.ಶಿವಕುಮಾರ್‌ ಅವರನ್ನು ಚುನಾವಣೆ ಸಿದ್ಧತೆಯಿಂದ ದೂರ ಉಳಿಯುವಂತೆ ಮಾಡಲು ಉದ್ದೇಶಪೂರ್ವಕವಾಗಿಯೇ ವಿಚಾರಣೆಗಳ ಹೆಸರಿನಲ್ಲಿ ಒತ್ತಡ ಹೇರಲಾಗುತ್ತಿದೆ. ಅವರಿಗೆ ಬಿಡುವಿಲ್ಲದಂತೆ ಮಾಡಿ ರಾಜಕೀಯ ಲಾಭ ಪಡೆಯಲು ಬಿಜೆಪಿಯು ಷಡ್ಯಂತ್ರ ರೂಪಿಸಿ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.

ಡಿಕೆಶಿ ಇಡಿ ಕಚೇರಿಯಿಂದ ಬಂದು Paycm ಪೋಸ್ಟರ್ ಅಂಟಿಸೋದು ಹಾಸ್ಯಾಸ್ಪದ; ಸಚಿವ ಸುನಿಲ್ ಕುಮಾರ್

ಕಳೆದ ವಾರವಷ್ಟೇ (ನ.7) ಯಂಗ್‌ ಇಂಡಿಯಾ ಪ್ರಕರಣದ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ವಿಚಾರಣೆಗೆ ಕರೆದಿದ್ದ ಜಾರಿ ನಿರ್ದೇಶನಾಲಯವು (ಇ.ಡಿ) ಸೋಮವಾರ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದೆ. ವಿಚಾರಣೆಗೆ ಹಾಜರಾಗಲು ಈಗಾಗಲೇ ಡಿ.ಕೆ.ಶಿವಕುಮಾರ್‌ ಅವರು ದೆಹಲಿಗೆ ತೆರಳಿದ್ದಾರೆ.

ಇದಲ್ಲದೆ ಅಕ್ರಮ ಆಸ್ತಿ ಗಳಿಕೆ ಸಂಬಂಧ ಸಿಬಿಐ ಕೂಡ ಪ್ರಕರಣ ದಾಖಲಿಸಿದ್ದು, ಈ ಸಂಬಂಧದ ಹೈಕೋರ್ಚ್‌ನಲ್ಲಿ ದಾಖಲಾಗಿರುವ ಪ್ರಕರಣ ನ.18ರಂದು ವಿಚಾರಣೆಗೆ ಬರಲಿದೆ. ಅಕ್ರಮ ಆಸ್ತಿ ಗಳಿಕೆ ಕುರಿತು ಇ.ಡಿ. ಹಾಗೂ ಸಿಬಿಐ ಎರಡೂ ಕಡೆ ಪ್ರಕರಣ ದಾಖಲಿಸಿರುವುದರ ವಿರುದ್ಧ ಶಿವಕುಮಾರ್‌ ಸಲ್ಲಿಸಿರುವ ಅರ್ಜಿ ಇದಾಗಿದೆ.

ನ.14ಕ್ಕೆ ಡಿ.ಕೆ.ಶಿವಕುಮಾರ್‌ಗೆ ಮತ್ತೆ ಇ.ಡಿ.ಬುಲಾವ್‌

ಇನ್ನು ಇದರ ಬಳಿಕ ನ.19ರಂದು ಐಟಿ ಹಾಗೂ ಇತರೆ ಎರಡು ಪ್ರಕರಣಗಳ ಬಗ್ಗೆ ಸಿಟಿ ಸಿವಿಲ್‌ ಕೋರ್ಚ್‌ನಲ್ಲಿ ವಿಚಾರಣೆ ನಡೆಯಲಿದೆ. ಬೇನಾಮಿ ಆಸ್ತಿ ವಿಚಾರದ ಬಗ್ಗೆ ಚೆನ್ನೈನಲ್ಲಿ ದಾಖಲಾಗಿರುವ ದೂರಿನ ಬಗ್ಗೆ ನ.21ರಂದು ವರ್ಚುಯಲ್‌ ವಿಚಾರಣೆ ನಡೆಯಲಿದೆ. ನಂತರ ನ.23ರಂದು ಮತ್ತೆ ಇ.ಡಿ. ಪ್ರಕರಣದ ವಿಚಾರಣೆ ನಡೆಯಲಿದೆ. ಇದೆಲ್ಲವೂ ಶಿವಕುಮಾರ್‌ ಅವರಿಗೆ ನೀಡುತ್ತಿರುವ ಉದ್ದೇಶಪೂರ್ವಕ ಕಿರುಕುಳ ಎಂದು ಕಾರ್ಯಕರ್ತರು ದೂರಿದ್ದಾರೆ.