ಕಡಿಮೆ ಗ್ಲೆಸಿಮಿಕ್‌ ಸೂಚ್ಯಂಕ ಹೊಂದಿರುವ ಹಾಗೂ ಮಧುಮೇಹಿ ರೋಗಿಗಳಿಗೂ ಅನ್ನ ಊಟ ಮಾಡಲು ಅನುಕೂಲವಾಗುವ ಭತ್ತದ ತಳಿಯೊಂದನ್ನು ಪರಿಚಯಿಸುವ ಕಾರ್ಯಕ್ಕೆ ಇಲ್ಲಿಯ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಮುಂದಾಗಿದೆ.

ಬಸವರಾಜ ಹಿರೇಮಠ

Add Asianetnews Kannada as a Preferred SourcegooglePreferred

ಧಾರವಾಡ (ನ.13) :  ಕಡಿಮೆ ಗ್ಲೆಸಿಮಿಕ್‌ ಸೂಚ್ಯಂಕ ಹೊಂದಿರುವ ಹಾಗೂ ಮಧುಮೇಹಿ ರೋಗಿಗಳಿಗೂ ಅನ್ನ ಊಟ ಮಾಡಲು ಅನುಕೂಲವಾಗುವ ಭತ್ತದ ತಳಿಯೊಂದನ್ನು ಪರಿಚಯಿಸುವ ಕಾರ್ಯಕ್ಕೆ ಇಲ್ಲಿಯ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಮುಂದಾಗಿದೆ.

ಈ ಹಿಂದೆ ವಾಲ್ಮಿ ಕೆರೆಯ ಕೆಳಭಾಗದ ಹಿಂದೆ ಇರುವ 9 ಎಕರೆ ಪ್ರದೇಶ ಹಲವು ವರ್ಷಗಳಿಂದ ಸಾಗುವಳಿಯಾಗದೆ ಪಾಳು ಬಿದ್ದಿತ್ತು. ವಾಲ್ಮಿ ನಿರ್ದೇಶಕರಾಗಿದ್ದ ಡಾ. ರಾಜೇಂದ್ರ ಪೋದ್ದಾರ ಮತ್ತು ಸದ್ಯದ ನಿರ್ದೇಶಕರಾದ ಬಸವರಾಜ ಬಂಡಿವಡ್ಡರ ಸಲಹೆಯಿಂದ ಬೀಳು ಪ್ರದೇಶವನ್ನು ಅಭಿವೃದ್ಧಿಪಡಿಸಿ ಇದೀಗ ಬಂಗಾರದಂತಹ ಭತ್ತದ ಬೆಳೆಯನ್ನು ಬೆಳೆಯಲಾಗಿದೆ.

ಮಧುಮೇಹಿಗಳಿಗೆ ಇನ್ಮುಂದೆ ನೋವಿನ ಕಿರಿಕಿರಿಯಿಲ್ಲ, ಇಂಜೆಕ್ಷನ್ ಬದಲು ಬರಲಿದೆ ಇನ್ಸುಲಿನ್ ಸ್ಪ್ರೇ

ತೆಲಂಗಾಣದ ರೈಸ್ ಮತ್ತು ನ್ಯೂಟ್ರಿಷನ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ ಇತ್ತೀಚೆಗೆ ಆರ್‌ಎನ್‌ಆರ್ –15048 ಎಂಬ ಭತ್ತದ ತಳಿ ಬಿಡುಗಡೆ ಮಾಡಿದೆ. ಇದಕ್ಕೆ “ತೆಲಂಗಾಣ ಸೋನಾ” ಎಂತಲೂ ಕರೆಯುತ್ತಾರೆ. ಈ ಭತ್ತವು ಕಡಿಮೆ ಗ್ಲೆಸಿಮಿಕ್ ಇಂಡೆಕ್ಸ್ (51.0ರಷ್ಟು) ಹೊಂದಿರುವುದರಿಂದ ಇದಕ್ಕೆ `ಡಯಾಫಿಟ್ ಪ್ಯಾಡಿ’ ಎಂತಲೂ ಕರೆಯುತ್ತಾರೆ. ಇದೀಗ ವಾಲ್ಮಿಯಲ್ಲಿ ಈ ಭತ್ತದ ತಳಿಯನ್ನು ಯಶಸ್ವಿಯಾಗಿ ಬೆಳೆದು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಸೇರಿದಂತೆ ರಾಜ್ಯದಲ್ಲಿ ಬತ್ತ ಬೆಳೆಯುವ ರೈತರಿಗೆ ಕ್ಷೇತ್ರೋತ್ಸವದ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ.

ಕಡಿಮೆ ಗ್ಲೆಸಿಮಿಕ್‌ ಸೂಚ್ಯಂಕ ಹೊಂದಿರುವುದರಿಂದ ಇದು ಸಕ್ಕರೆ ಕಾಯಿಲೆ ಹೊಂದಿರುವವರಿಗೂ ಉಪಯುಕ್ತವಾಗಿದೆ. ಈ ತಳಿಯು ಸೋನಾ ಮಸೂರಿ ಹಾಗೆಯೇ ಸೂಪರ್ ಫೈನ್ ಭತ್ತವಾಗಿದ್ದು, ಬೆಂಕಿ ರೋಗ ಮತ್ತು ಶೀತ್ ಬ್ಲೆಟ್ ರೋಗಕ್ಕೆ ನಿರೋಧಕತೆ ಹೊಂದಿದೆ ಎಂದು ವಾಲ್ಮಿ ನಿರ್ದೇಶಕ ಬಸವರಾಜ ಬಂಡಿವಡ್ಡರ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಈ ಡಯಾಬಿಟೀಸ್‌ ಔಷಧಿ ತಗೊಂಡ್ರೆ ಶುಗರ್‌ ಲೆವೆಲ್‌ ಜತೆಗೆ ತೂಕನೂ ಇಳಿಸ್ಬೋದು!

ಈ ತಳಿಯು ಹೆಚ್ಚಿನ ಹೆಡ್‌ರೈಸ್ ರಿಕವರಿ ಹೊಂದಿದೆ. ಇದು ತಡವಾಗಿ ಬಿತ್ತನೆಯಾಗುವ ಪರಿಸ್ಥಿತಿಯಲ್ಲೂ ಸೂಕ್ತವಾಗಿದೆ. ಮುಂಗಾರು ಮತ್ತು ಹಿಂಗಾರು ಹಿಂಗಾಮಿನಲ್ಲಿ ಬೆಳೆಯುವ ಈ ತಳಿಯು 125 ದಿವಸಕ್ಕೆ ಮಾಗುತ್ತದೆ. ಇದರ ಇನ್ನೊಂದು ವಿಶೇಷ ಗುಣವೇನೆಂದರೆ ಸಾಮಾನ್ಯವಾಗಿ ನಾವು ಬಳಸುವ ಸೋನಾ ಮಸೂರಿ ಭತ್ತಕ್ಕಿಂತ ಶೇ.5ರಷ್ಟು ಹೆಚ್ಚಿಗೆ ಪ್ರೋಟೀನ್ ಅಂಶವನ್ನು ಹೊಂದಿದೆ. ಎಕರೆಗೆ ಸರಾಸರಿ 25ರಿಂದ 30 ಕ್ವಿ೦ಟಲ್‌ನಷ್ಟು ಇಳುವರಿ ಪಡೆಯಬಹುದಾಗಿದೆ