ದಲಿತರ ಕ್ಷೌರ ಮಾಡಿದರೆ ಸರ್ವಣೀಯರು ಬರುವುದಿಲ್ಲ ಎನ್ನುವ ಕಾರಣದಿಂದ ತಾಲೂಕಿನ ಮುದ್ದಾಬಳ್ಳಿಯಲ್ಲಿ ಮುಚ್ಚಲಾಗಿದ್ದ ಕಟಿಂಗ್ ಸಲೂನ್ (ಕ್ಷೌರದಂಗಡಿ) ಅನ್ನು ಬುಧವಾರ ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ತೆರೆಯಲಾಯಿತು.  

ಕೊಪ್ಪಳ (ಮೇ.08): ದಲಿತರ ಕ್ಷೌರ ಮಾಡಿದರೆ ಸರ್ವಣೀಯರು ಬರುವುದಿಲ್ಲ ಎನ್ನುವ ಕಾರಣದಿಂದ ತಾಲೂಕಿನ ಮುದ್ದಾಬಳ್ಳಿಯಲ್ಲಿ ಮುಚ್ಚಲಾಗಿದ್ದ ಕಟಿಂಗ್ ಸಲೂನ್ (ಕ್ಷೌರದಂಗಡಿ) ಅನ್ನು ಬುಧವಾರ ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ತೆರೆಯಲಾಯಿತು. ಗ್ರಾಮಕ್ಕೆ ತಹಸೀಲ್ದಾರ್‌ ವಿಠ್ಠಲ್‌ ಚೌಗಲಿ, ತಾಪಂ ಇಒ ದುಂಡಪ್ಪ ತೂರಾದಿ ಹಾಗೂ ಡಿವೈಎಸ್ಪಿ ಮುತ್ತಣ್ಣ ಸರ್ವಗೋಳ ಭೇಟಿ ನೀಡಿ ಶಾಂತಿ ಸೌರ್ಹಾದ ಸಭೆ ನಡೆಸಿದರು. 

ಗ್ರಾಮದಲ್ಲಿ ಹಿರಿಯರು, ಅಧಿಕಾರಿಗಳು, ಕ್ಷೌರದಂಗಡಿಯವರು ಹಾಗೂ ದಲಿತ ಸಂಘಟನೆಗಳ ನೇತೃತ್ವದಲ್ಲಿ ಸಭೆ ನಡೆಸಿ ತಿಳಿ ಹೇಳಲಾಯಿತು. ನಾವು ಇನ್ಮುಂದೆ ಅಸ್ಪೃಶ್ಯತೆ ಆಚರಣೆ ಮಾಡುವುದಿಲ್ಲ. ಎಲ್ಲರೂ ಸಮಾನವಾಗಿ ಬದುಕುತ್ತೇವೆ ಎಂದು ಶಪಥ ಮಾಡಲಾಯಿತು. ಎರಡು ತಿಂಗಳಿಂದ ಮುಚ್ಚಿದ್ದ ಕಟಿಂಗ್ ಶಾಪ್‌ಗಳನ್ನು ತೆಗೆಸಿ ದಲಿತರ ಕಟಿಂಗ್ ಮಾಡುವ ಮೂಲಕ ಗಂಭೀರ ಸಮಸ್ಯೆಯನ್ನು ಶಾಂತಿಯುತವಾಗಿ ನಿವಾರಿಸಲಾಯಿತು.

ರಾಜಧಾನಿ ಭದ್ರತೆಗೆ 5 ಲಕ್ಷ ಸಿಸಿಟಿವಿ ಕಣ್ಗಾವಲು: ಬಿ.ದಯಾನಂದ್

ಖೋಟಾ ನೋಟು ಚಲಾವಣೆ: ನಗರದ ಬಾರ್‌ವೊಂದರಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಕೊಪ್ಪಳ ರಸ್ತೆಯ ಸಮರ್ಥ ಬಾರ್ ಆ್ಯಂಡ್‌ ರೆಸ್ಟೋರಂಟ್‌ನಲ್ಲಿ ₹ 500 ಮುಖ ಬೆಲೆಯ ಮೂರುನೋಟು (₹ 1500) ಚಲಾವಣೆ ಮಾಡುತ್ತಿದ್ದ ಹೊಸಪೇಟೆಯ ಅರವಿಂದ ನಗರದ ಕಲಂಧರ್ ಅಬ್ದುಲ್ ಹಫೀಜ್, ಸಂಡೂರಿನ ಸೈಯದ್ ಕಾಲನಿಯ ನೂರ್‌ ಮುಸ್ತಾಫ್‌ ಖಾಜಾ ಅಮೀನ್ ಸಾಬ್‌ ಅವರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಆದರೆ, ಮೂವರ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸದೆ ಸಹಚರರು ಎಂದು ಉಲ್ಲೇಖಿಸಲಾಗಿದೆ.

ಮೇ 2ರಂದು ಮದ್ಯ ಖರೀದಿಸಿದ ಆರೋಪಿಗಳು ₹ 1205 ನೀಡಲು ₹ 500 ಮುಖ ಬೆಲೆಯ ₹ 1500 (ಖೋಟಾ ನೋಟು) ನೀಡಿದ್ದಾರೆ. ಈ ಹಣದ ಬಗ್ಗೆ ಅನುಮಾನ ಬಂದ ಕೌಂಟರ್‌ನಲ್ಲಿ ಕುಳಿತಿದ್ದ ಗಂಗಾಧರ ವೀರೇಶಪ್ಪ ಪ್ರಶ್ನಿಸಿದ್ದಾರೆ. ಆಗ ಆರೋಪಿಗಳು ಅಲ್ಲಿಂದ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಅಲ್ಲಿನ ಸಿಬ್ಬಂದಿ ಕಾರು ಅಡ್ಡಗಟ್ಟಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅವರು ವಿಚಾರಣೆ ನಡೆಸಿ ಅವರನ್ನು ಬಂಧಿಸಿದ್ದಾರೆ. ಈ ಹಿಂದೆ ಗಂಗಾವತಿ, ಕನಕಗಿರಿ, ಕಾರಟಗಿ ಸೇರಿದಂತೆ ಗಂಗಾವತಿಯ ಗಡಿ ಭಾಗದಲ್ಲಿ ಖೋಟಾ ನೋಟುಗಳ ಹಾವಳಿ ಹೆಚ್ಚಾಗಿತ್ತು. ಈಗ ಬೇರೆಡೆಯಿಂದ ನಗರಕ್ಕೆ ಬಂದವರಿಂದ ಖೋಟಾ ನೋಟ್‌ಗಳ ಹಾವಳಿ ಹೆಚ್ಚಾಗಿದೆ.