ಸಂಸದರು ಹಾಗೂ ನನ್ನ ಮೇಲೆ ಭ್ರಷ್ಟಾಚಾರದ ಗುರುತರವಾದ ಆರೋಪ ಹೊರಿಸಿರುವ ದಿನೇಶ್ ಶೆಟ್ಟಿ ಅವರ ಸವಾಲನ್ನು ನಾವಿಬ್ಬರೂ  ಸ್ವೀಕರಿಸಿದ್ದು, ದುರ್ಗಾಂಬಿಕಾ ದೇವಸ್ಥಾನದಲ್ಲಿ ನಾವು ಗಂಟೆ ಹೊಡೆಯಲು ಸಿದ್ಧ. ಶೆಟ್ಟಿಯವರೇ ದಿನಾಂಕ ಹಾಗೂ  ನಿಗದಿಪಡಿಸಲಿ ಎಂದು ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು.

ದಾವಣಗೆರೆ (ಜು.18) : ಸಂಸದರು ಹಾಗೂ ನನ್ನ ಮೇಲೆ ಭ್ರಷ್ಟಾಚಾರದ ಗುರುತರವಾದ ಆರೋಪ ಹೊರಿಸಿರುವ ದಿನೇಶ್ ಶೆಟ್ಟಿ ಅವರ ಸವಾಲನ್ನು ನಾವಿಬ್ಬರೂ ಸ್ವೀಕರಿಸಿದ್ದು, ದುರ್ಗಾಂಬಿಕಾ ದೇವಸ್ಥಾನದಲ್ಲಿ ನಾವು ಗಂಟೆ ಹೊಡೆಯಲು ಸಿದ್ಧ. ಶೆಟ್ಟಿಯವರೇ ದಿನಾಂಕ ಹಾಗೂ ನಿಗದಿಪಡಿಸಲಿ ಎಂದು ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು.

Add Asianetnews Kannada as a Preferred SourcegooglePreferred

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಲಂಚ ತೆಗೆದುಕೊಂಡಿಲ್ಲ ಎಂದು ಅದೇ ದೇವಸ್ಥಾನದಲ್ಲಿ ನಾವೇ ಮೊದಲು ಗಂಟೆ ಹೊಡೆಯಲಿದ್ದೇವೆ. ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ದಿನೇಶ್ ಶೆಟ್ಟಿ ದೇವಸ್ಥಾನಕ್ಕೆ ಕರೆಸಲಿ. ಹಾಗೂ ಅವರೇ ದಿನಾಂಕ ಹಾಗೂ ಸಮಯ ನಿಗದಿಗೊಳಿಸಲಿ ಎಂದು ಸವಾಲೆಸೆದರು.

ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ನಾನು ಶಾಮನೂರು ಕುಟುಂಬದ ಮೇಲೆ ಹಲವು ಆರೋಪ ಮಾಡಿ, ಸಾಕ್ಷಿ ಸಮೇತ ಪಾಲಿಕೆ ಆವರಣದ ರಂಗಮಂದಿರದಲ್ಲಿ ಅರ್ಧ ದಿನ ಕಾದರೂ ಯಾರೂ ಅತ್ತ ಸುಳಿಯಲಿಲ್ಲ. ಇದೇ ಶಾಮನೂರು ಕುಟುಂಬ ಭ್ರಷ್ಟಾಚಾರ ಮಾಡದಿದ್ದರೆ ಅಂದು ಬಂದು ಆರೋಪವನ್ನು ನಿರಾಕರಿಸಬಹುದಿತ್ತು ಎಂದರು.

ಶಾಸಕ ಶಾಮನೂರು ಶಿವಶಂಕರಪ್ಪಗೆ 1 ವರ್ಷವಾದರೂ ಸಿಎಂ ಸ್ಥಾನ ನೀಡಿ: ಕಾಂಗ್ರೆಸ್ ಮುಖಂಡ ಒತ್ತಾಯ

ಇದೇ ದಿನೇಶ್ ಶೆಟ್ಟಿ ಪಿ.ಜೆ. ಬಡಾವಣೆಯ ಫುಟ್ ಪಾತ್ ಗಳಲ್ಲಿ ಅಂಗಡಿ ಇಟ್ಟುಕೊಂಡವರ ಬಳಿ ಚಂದಾ ವಸೂಲಿ ಮಾಡಿರುವುದು ಎಲ್ಲರಿಗೂ ಗೊತ್ತು. ಅವರುಗಳು ಸಾಕ್ಷಿ ಹೇಳಲು ಸಿದ್ಧರಿದ್ದಾರೆ. ಶೆಟ್ಟಿ ಚಂದಾ ವಸೂಲಿ ಮಾಡಿಲ್ಲ ಎಂದು ಗಂಟೆ ಹೊಡೆಯಲು ಸಿದ್ಧರಾ ಎಂದು ಪ್ರಶ್ನೆ ಹಾಕಿದರು.

ಮುಖ್ಯವಾಗಿ ಬಾಪೂಜಿ ಸಂಸ್ಥೆಯನ್ನು ಕಟ್ಟಿದ್ದು ಯಾರು? ಸಂಸ್ಥೆಯನ್ನು ಕಟ್ಟಿ ಬೆಳೆಸಿದವರ ಪಾಡು ಏನಾಗಿದೆ ಉತ್ತರಿಸಲಿ. ಶಾಮನೂರು ಕುಟುಂಬದ ಒಡೆತನದ ರೈಸ್ ಮಿಲ್ ನಲ್ಲಿ ಕರೆಂಟ್ ಕದ್ದ ಕಾರಣಕ್ಕೆ ಕೇಸ್ ಹಾಕಿ ದಂಡ ಹಾಕಿದ್ದು ಯಾರಿಗೆ ಎಂದು ಪ್ರಶ್ನಿಸಿದರು.

ಎಸ್.ಎಸ್. ಮಾಲ್ ಕಟ್ಟಲು ರಸ್ತೆ, ಪಾರ್ಕ್ ಹಾಗೂ ಮುತ್ಸದ್ಧಿ ರಾಜಕಾರಣಿ ಗಾಂಜೀವೀರಪ್ಪನವರ ಸಮಾಧಿ ಸಮೇತ ಜಾಗವನ್ನು ಸಹ ಕಬಳಿಸಿಲ್ಲವೇ? ಮಾಲ್ ಒತ್ತುವರಿಗೆ ಸಂಬಂಧಪಟ್ಟಂತೆ ಹೋರಾಟ ಮಾಡುತ್ತಿದ್ದ ಮಹಾದೇವ್ ನಿಗೂಢ ಸಾವಿಗೆ ಯಾರು ಕಾರಣ? ಎಂದರು.

ದೂಡಾದಿಂದ ಹರಾಜು ಮಾಡಬೇಕಾದ 40 ಕ್ಕೂ ಹೆಚ್ಚು ಮೂಲೆ ನಿವೇಶನಗಳನ್ನು ತುಂಡು ನಿವೇಶನಗಳನ್ನಾಗಿ ಪರಿವರ್ತನೆ. ಮಾಡಿ ತಮ್ಮ ಛೇಲಾಗಳಿಗೆ ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಸಿದ್ದೇಶ್ವರ್‌ಗೆ ಟಿಕೆಟ್ ಸಿಕ್ಕರೆ ತಂದು ಎಂಪಿ ಚುನಾವಣೆಗೆ ನಿಲ್ಲಲಿ, ನಾನೇ ಫಂಡ್ ಮಾಡುತ್ತೇನೆ: ಶಾಮನೂರು ಶಿವಶಂಕರಪ್ಪ

ಟಿವಿ ಸ್ಟೇಷನ್ ಕೆರೆ ಪಕ್ಕದಲ್ಲಿ ಸುಮಾರು 2 ಲಕ್ಷ ಲೀಟರ್ ಸಾಮರ್ಥ್ಯದ ಸಂಪು ನಿರ್ಮಾಣ ಮಾಡಿ, ಅಲ್ಲಿಂದ ಎಸ್.ಎಸ್. ಆಸ್ಪತ್ರೆಗೆ ಟಿ.ವಿ. ಸ್ಟೇಷನ್ ಕೆರೆಯ ನೀರನ್ನು ಒಯ್ದಿರುವುದು ಇದೇ ಶಾಮನೂರು ಕುಟುಂಬ. ಹಾಗೂ ದಾವಣಗೆರೆಗೆ ಬರಬೇಕಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಬರದಂತೆ ನಡೆಯುತ್ತಿರುವುದು ಇದೇ ಶಾಮನೂರು ಎಂದು ಆರೋಪ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್,ರಾಜನಹಳ್ಳಿ ಶಿವಕುಮಾರ್, ಕೊಂಡಜ್ಜಿ ಜಯಪ್ರಕಾಶ್, ನಸೀರ್ ಅಹಮದ್,ಶಿವನಗೌಡ ಪಾಟೀಲ್,ರಮೇಶ್ ನಾಯ್ಕ್,ಕಿಶೋರ್ ಕುಮಾರ್ ಮಡಿವಾಳ್ ಉಪಸ್ಥಿತರಿದ್ದರು.