ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಹಣ ಪರಿಶಿಷ್ಟ ಪಂಗಡದ ಜನರಿಗೆ ಬಳಕೆಯಾಗಬೇಕಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಭ್ರಷ್ಟರ ಕುಮ್ಮಕ್ಕಿನಿಂದ ನಕಲಿ ಖಾತೆಗಳಿಗೆ ವರ್ಗಾವಣೆ ಆಗಿದೆ. ಇದೇ ಕಾರಣಕ್ಕೆ ಅಧೀಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಸಿಟಿ ರವಿ ಆರೋಪಿಸಿದರು.

ರಾಯಚೂರು (ಮೇ.28): ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಹಣ ಪರಿಶಿಷ್ಟ ಪಂಗಡದ ಜನರಿಗೆ ಬಳಕೆಯಾಗಬೇಕಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಭ್ರಷ್ಟರ ಕುಮ್ಮಕ್ಕಿನಿಂದ ನಕಲಿ ಖಾತೆಗಳಿಗೆ ವರ್ಗಾವಣೆ ಆಗಿದೆ. ಇದೇ ಕಾರಣಕ್ಕೆ ಅಧೀಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಸಿಟಿ ರವಿ ಆರೋಪಿಸಿದರು.

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಕೋಟಿ ಕೋಟಿ ಲೂಟಿ ಅವ್ಯವಹಾರಕ್ಕೆ ಬೆದರಿ ಅಧಿಕಾರಿ ಆತ್ಮಹತ್ಯೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು, ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಆರು ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದಾರೆ. ನನ್ನ ಸಾವಿಗೆ ನಿಗಮದ ಅಧಿಕಾರಿಗಳು ಕಾರಣ ಎಂದು ಉಲ್ಲೇಖಿಸಿದ್ದಾರೆ. ಇದರಲ್ಲಿ ಸಚಿವರು ಮೌಖಿಕ ಆದೇಶ ನೀಡಿದ್ದಾರೆ. ಅಧಿಕಾರಿಗಳ ಹೆಸರು ಉಲ್ಲೇಖ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ ನಾನು ಸುಖಾಸುಮ್ಮನೆ ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಅಲ್ಲ. ಅಪಮಾನ ಸಹಿಸಲ್ಲ ಎಂದು ಬರೆದುಕೊಂಡಿದ್ದಾರೆ. ಈಗ ಆಡಳಿತದಲ್ಲಿರೋ ಸಿದ್ದರಾಮಯ್ಯ, ಡಿಸಿಎಂ ಈ ಹಿಂದೆ ವಿಪಕ್ಷದಲ್ಲಿದ್ದಾಗ ನಾವು ಕೇಳೋಕೆ ಮುಂಚೆನೇ ರಾಜೀನಾಮೆ ಕೊಡ್ತಿವಿ ಅಂತಾ ಹೇಳಿಕೊಂಡಿದ್ದರು. ಆತ್ಮಹತ್ಯೆಗೆ ಕಾರಣವಾಗಿರುವ ಅಧಿಕಾರಿಗಳ ಮೇಲೆ ಕೊಲೆ ಮೊಕದ್ದಮೆ, ಎಸ್‌ಸಿ ಎಸ್ಟಿ ಕೇಸ್ ಸಹ ಹಾಕ್ತೀರಿ, ನ್ಯಾಯಾಧೀಶರ ಮೂಲಕ ತನಿಖೆಗೆ ಸೂಚಿಸ್ತೀರಿ ಅಂದುಕೊಂಡಿದ್ದೆವು ಆದರೆ ಈ ಪ್ರಕರಣವನ್ನೇ ಮುಚ್ಚಿಹಾಕೋ ಕೆಲಸ ಸಿಎಂ ಡಿಸಿಎಂ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ 80-85 ಕೋಟಿ ಲೂಟಿ ಆರೋಪ: ಅವ್ಯವಹಾರಕ್ಕೆ ಬೆದರಿ ಅಧಿಕಾರಿ ಆತ್ಮಹತ್ಯೆ!

ಈ ಕೇಸ್ ಹೊರಗಡೆ ಬಂದ್ರೆ ಲೂಟಿ ಮಾಡೋದು ಗೊತ್ತಾಗುತ್ತೆ ಅಂತಾ ಕೇಸ್ ಮುಚ್ಚಿ ಹಾಕೋ ಯತ್ನ ಮಾಡ್ತಿದ್ದಾರೆ. ಈ ಹಿಂದೆ ಗುತ್ತಿಗೆದಾರ ಸಂತೋಷ್ ಪಾಟೀಲ್ ನಾಲ್ಕು ಕೋಟಿ ಕೆಲಸ ಮಾಡಿದ್ರೂ ಕಾನೂನು ಬಾಹಿರ ಅಂತಾ ಬಿಲ್ ಕ್ಲಿಯರ್ ಆಗಿರಲಿಲ್ಲ. ಆದ್ರೆ ಈಶ್ವರಪ್ಪ ವಿರುದ್ಧ ಅಪಾದನೆ ಮಾಡಿದ್ರು, ರಾಜೀನಾಮೆ ನೀಡುವಂತೆ ಮಾಡಿದ್ರು. ಇದೇ ಡಿಸಿಎಂ ಡಿಕೆ ಶಿವಕುಮಾರ ಡಿಜಿ, ಸೆಕ್ರೆಟರಿ ಬದುಕಿದ್ದರೆ ಕೇಸ್ ಹಾಕಬೇಕು ಅಂತಾ ಹೇಳಿದ್ರು. ಈಗ ಅವರದೇ ಸರ್ಕಾರದಲ್ಲಿ ಮೃತ ಅಧೀಕ್ಷಕ ಸ್ಪಷ್ಟವಾಗಿ ಹೇಳಿದ್ದಾರೆ. ಮೌಖಿಕವಾಗಿ ಸಚಿವರು ಅಂತಾ ಹೇಳಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರೇ ಉತ್ತರ ಕೊಡಿ ಯಾಕೆ ರಾಜೀನಾಮೆ ಪಡೆದಿಲ್ಲ. ಯಾಕೆ ಭ್ರಷ್ಟ ಸಚಿವರನ್ನ ಇನ್ನೂ ಇಟ್ಟುಕೊಂಡಿದ್ದೀರಿ? ಇಲ್ಲಿ ಅಕ್ರಮ ಆಗಿರೋ ಹಣ ಚುನಾವಣೆಗೆ ಬಳಕೆಯಾಗಿರುವ ಸಾಧ್ಯತೆ ಇದೆ. ಕೂಡಲೇ ಸಚಿವರನ್ನ ವಜಾ ಮಾಡಬೇಕು, ಅಧಿಕಾರಿಗಳನ್ನ ಅಮಾನತ್ತು ಮಾಡಿ ಕೇಸ್ ದಾಖಲಿಸಿ ಎಂದು ಆಗ್ರಹಿಸಿದರು.

ಈ ಹಿಂದೆ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಾಗ ಸುರ್ಜೇವಾಲ, ರಾಮಲಿಂಗಾರೆಡ್ಡಿ ಸೇರಿ ಹಲವರು ಇದೇ ಡಿಮ್ಯಾಂಡ್ ಮಾಡಿದ್ರು. ಆದ್ರೀಗ ನಿಮ್ಮ ಸರ್ಕಾರದಲ್ಲಿ ಭ್ರಷ್ಟ ಸಚಿವರಿಂದಾಗ ಒಬ್ಬ ಅಧೀಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅದನ್ನ ಸ್ಪಷ್ಟವಾಗಿ ತಿಳಿಸಿದ್ದಾನೆ ಹೀಗಿದ್ರೂ ಯಾಕೆ ಇನ್ನೂ ಯಾವುದೇ ಕ್ರಮ ತಗೊಳ್ತಿಲ್ಲ, ಸಚಿವರ ರಾಜೀನಾಮೆ ಪಡೆಯುತ್ತಿಲ್ಲ. ಹಗರಣ ಮುಚ್ಚಿಹಾಕಿ ಯಾರನ್ನ ರಕ್ಷಣೆ ಮಾಡಲು ಮುಂದಾಗಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 85 ಕೋಟಿ ರೂ. ಅವ್ಯವಹಾರ; ಸಚಿವರ ಹೆಸರು ಬರೆದಿಟ್ಟು ಅಧಿಕಾರಿ ಆತ್ಮಹತ್ಯೆ

ಇತ್ತೀಚೆಗೆ ಕಾಂಗ್ರೆಸ್ ಸರ್ಕಾರ ಖಾಲಿ ಚೆಂಬು ಜಾಹೀರಾತು ಕೊಟ್ಟಿದ್ರು. ಆದ್ರೀಗ ಅವರೇ ಪರಿಶಿಷ್ಟ ಸಮುದಾಯಕ್ಕೆ ಚೆಂಬು ಕೊಟ್ಟು ಅವರ ಹಣ ಲೂಟಿ ಮಾಡಿದ್ದಾರೆ. ರಾಜ್ಯಾಧ್ಯಕ್ಷರ ಜೊತೆ ಸಮಾಲೋಚನೆ ನಡೆಸಿ ಸಚಿವರನ್ನ ವಜಾಗೊಳಿಸುವ ಹೋರಾಟ ಮಾಡಲಾಗುತ್ತೆ ಎಂದರು.

ಒಂದು ವರ್ಷದ ಸಾಧನೆ ನೋಡಿದ್ರೆ ಆತ್ಮಹತ್ಯೆಯಲ್ಲಿ ದಾಖಲೆಯಾಗಿದೆ. ನಾಲ್ಕು ತಿಂಗಳಲ್ಲಿ 432 ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಎನ್ ಆರ್ ಸಿಬಿ ಅಂತ ವರದಿ ಕೊಟ್ಟಿದೆ. ಈಗ ನಡೆದಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಆತ್ಮಹತ್ಯೆ ಪ್ರಕರಣ ಸರ್ಕಾರಿ ಕೃಪಾಪೋಷಿತ ಲೂಟಿಯ ಪರಿಣಾಮ. ನಮ್ಮ ಮೇಲೆ 40 ಪರ್ಸೆಂಟ್ ಆರೋಪ ಮಾಡಿದ್ರು. ಈಗ ಇವರೇ ಗುತ್ತಿಗೆದಾರರನ್ನು ಸುಲಿಯುತ್ತಿದ್ದಾರೆ.

ಇನ್ನು ಈ ಪ್ರಕರಣ ಸಿಐಡಿಗೆ ವರ್ಗಾವಣೆ ಮಾಡಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಟಿ ರವಿ ಯಾಕೆ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗೊಲ್ಲ? ನಂಬಿಕೆ ಇಲ್ಲ ಅಂತ ಹೇಳಲ್ಲ. ಇದರಲ್ಲಿ ಇಲಾಖೆ ಸಚಿವರ ಹೆಸರು ಕೇಳಿ ಬಂದಿದೆ. ಹೀಗಾಗಿ ಸಿಐಡಿ ನಿಷ್ಪಕ್ಷಪಾತವಾದ ತನಿಖೆ ಆಗಲ್ಲ ಅನಿಸುತ್ತೆ. ಕಾಂಗ್ರೆಸ್ ಪಾರ್ಟಿ ಇದರ ಪಾಲು ಪಡೆದಿದೆ ಹೀಗಾಗಿ ಸಿಐಡಿ ತನಿಖೆ ಅಂತಾ ಮುಚ್ಚಿಹಾಕಲು ಸರ್ಕಾರ ಪ್ರಯತ್ನ ನಡೆಸಿದೆ. ಆತ್ಮಹತ್ಯೆಗೆ ಕಾರಣವಾದ ಸಚಿವರನ್ನ ಕೂಡಲೇ ಕಿತ್ತೆಸೆದು ಅವರ ವಿರುದ್ಧ ಪ್ರಕರಣ ದಾಖಲಿಸಿ. ಇವರಲ್ಲ ಅಂದ್ರೆ ಮತ್ತೆ ಯಾರು? ಇಲಾಖೆ ಸಚಿವರು ಅಂದ್ರೆ ಇವರೇ ಅಲ್ವಾ? ಈ ಹಿಂದೆ ನಮ್ಮ ಸರ್ಕಾರದಲ್ಲಿ ಈಶ್ವರಪ್ಪ ಅವರ ರಾಜೀನಾಮೆ ಪಡೆದದ್ರಿ ಈಗ ನಿಮಗೆ ನೈತಿಕತೆ ಮಾನ ಮರ್ಯಾದೆ ಇದ್ರೆ ಕೂಡಲೇ ಸಚಿವರ ರಾಜೀನಾಮೆ ಪಡೆಯಿರಿ ಸವಾಲು ಹಾಕಿದರು.