ಮೈಸೂರಿನ ವರಕೋಡು ಗ್ರಾಮದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲಾ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ಎಂದು ಹೇಳಿದರು. ಪರಿಶುದ್ಧ ಭಕ್ತಿ, ಮಾನವೀಯತೆ ಹಾಗೂ ಪರರ ಹಿತಚಿಂತನೆಯಿಂದ ಮಾತ್ರ ದೇವರು ಒಲಿಯುತ್ತಾನೆ ಎಂದು ಅವರು ತಿಳಿಸಿದರು.

ಮೈಸೂರು (ಮಾ.14): ಎಲ್ಲಾ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೈಸೂರು ತಾಲೂಕು ವರಕೋಡು ಗ್ರಾಮದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ ಸಂಪ್ರೊಕ್ಷಣ ಪುನರ್ ಪ್ರತಿಷ್ಠಾಪನಾ ಕುಂಭಾಭಿಷೇಕ ಹಾಗೂ ಮಹಾದ್ವಾರ ಪೂಜಾ ಮಹೋತ್ಸವದಲ್ಲಿ ಶುಕ್ರವಾರ ಪಾಲ್ಗೊಂಡು ಮಾತನಾಡಿದ ಅವರು, ಭಕ್ತಿ ಪರಿಶುದ್ಧವಾಗಿರಬೇಕು. ಅಲ್ಲದೆ, ಮಾನವೀಯತೆ ಹಾಗೂ ಪರರ ಹಿತಚಿಂತನೆಯಿಂದ ಮಾತ್ರ ದೇವರು ಒಲಿಯುತ್ತಾನೆ. ದೇವರು ಸರ್ವಾಂತರ್ಯಾಮಿಯಾಗಿದ್ದಾನೆ ಎಂದರು.

ಬೀರೇಶ್ವರಸ್ವಾಮಿ ದೇವಸ್ಥಾನದ ಪೂಜಾ ಮಹೋತ್ಸವಗಳು, ಜಾತ್ರೆಗಳಲ್ಲಿ ಜನರು ಸಂತೋಷದಿಂದ ಭಾಗವಹಿಸಿದ್ದಾರೆ. ಬೀರೇಶ್ವರಸ್ವಾಮಿ ನಾಡಿನ ಸಮಸ್ತ ಜನತೆಗೆ ಮಂಗಳವನ್ನುಂಟು ಮಾಡಲಿ ಎಂದು ಅವರು ಪ್ರಾರ್ಥಿಸಿದರು.

ಭಕ್ತಿಯು ಪರಿಶುದ್ಧವಾಗಿರಬೇಕು. ಯಾವ ಧರ್ಮವೂ ದ್ವೇಷ ಮಾಡುವುದನ್ನು ಭೋದಿಸಿಲ್ಲ. ಇನ್ನೊಬ್ಬರನ್ನು ದ್ವೇಷಿಸುವುದು ಭಕ್ತಿಯೇ ಅಲ್ಲ. ಶುದ್ಧವಾದ ಭಕ್ತಿ ಇಲ್ಲದೆ ಹೋದರೆ ಎಷ್ಟೇ ಪೂಜೆ ಮಾಡಿದರೂ ಸಾರ್ಥಕ ಆಗುವುದಿಲ್ಲ. ದೇವನೊಬ್ಬ, ನಾಮ ಹಲವು. ದೇವರು ಗುಡಿಯಲ್ಲಿ ಮಾತ್ರ ಇರುತ್ತಾನೆ ಎಂದು ನಂಬುವುದು ಸರಿಯಾದ ನಂಬಿಕೆಯಲ್ಲ. ಶುದ್ಧವಾದ ಭಕ್ತಿಯಿಂದ ಪೂಜಿಸುವವರಿಗೆ ದೇವರು ಒಳ್ಳೆಯದನ್ನು ಮಾಡುತ್ತಾನೆ. ದೇವರು ನಿಮ್ಮಲ್ಲೇ ಇದ್ದಾನೆ. ದೇವರು ನಿಮಗೆ ಒಲಿಯಬೇಕೆಂದರೆ ಯಾರಿಗೂ ಕೆಟ್ಟದನ್ನು ಬಯಸಬಾರದು ಎಂದು ಅವರು ತಿಳಿಸಿದರು.