ಕೋಡಿಮಠದ ಶ್ರೀಗಳು ಮುಂದಿನ ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತ ಎಂದು ಭವಿಷ್ಯ ನುಡಿದಿದ್ದಾರೆ. ರಾಷ್ಟ್ರ ಮಟ್ಟದಲ್ಲಿಯೂ ಯುಗಾದಿ ನಂತರ ಅಹಿತಕರ ಘಟನೆಗಳು ನಡೆಯುವ ಬಗ್ಗೆ ಎಚ್ಚರಿಸಿದ್ದು, ಪ್ರಸ್ತುತ ರಾಜಕಾರಣವು ಮೌಲ್ಯಗಳನ್ನು ಕಳೆದುಕೊಂಡಿದೆ ಎಂದು ವಿಷಾದಿಸಿದ್ದಾರೆ.
ಕೆ.ಆರ್.ಪೇಟೆ (ಡಿ.3): ಮುಂದಿನ ವರ್ಷದ ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗಳಾಗಲಿದ್ದು, ಮುಖ್ಯಮಂತ್ರಿ ಬದಲಾವಣೆ ನಡೆಯುವುದು ಖಚಿತ ಎಂದು ಕೋಡಿಮಠದ ಶಿವರಾತ್ರಿ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಶಿವನ ಪಾದಕ್ಕೆ ಬೀಳಲಿದೆ ಮಲ್ಲಿಗೆ:
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿವನ ಮುಡಿಯ ಮೇಲಿರುವ ಮಲ್ಲಿಗೆಯು ಶಿವನ ಪಾದಕ್ಕೆ ಬೀಳಲೇಬೇಕು. ರಾಜ್ಯ ರಾಜಕಾರಣದ ಗೊಂದಲವು ಸಂಪೂರ್ಣವಾಗಿ ಬಗೆಹರಿಯಲಿದ್ದು, ಸುಖಾಂತ್ಯವಾಗಲಿದೆ. ಮಕರ ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದ ನಾಯಕತ್ವದ ಗುದ್ದಾಟವು ಬಗೆಹರಿಯಲಿದೆ ಎಂದು ಹೇಳಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ಯುಗಾದಿ ನಂತರ ಸಮಸ್ಯೆ:
ನಾನು ಶಾಸ್ತ್ರ ಹೇಳುವವನಲ್ಲ ಶಾಸ್ತ್ರಕಾರನಲ್ಲ ಮುಂದೆ ನಡೆಯುವ ವಿಚಾರಗಳನ್ನು ತಿಳಿಸುವ ಶಕ್ತಿ ಹೊಂದಿದ್ದೇನೆ. ಅದೇ ರೀತಿ ರಾಷ್ಟ್ರ ರಾಜಕಾರಣದಲ್ಲಿಯೂ ಕೂಡ ಯುಗಾದಿ ನಂತರ ಸಮಸ್ಯೆಗಳು ಎದುರಾಗಲಿವೆ. ಇತ್ತೀಚಿಗೆ ನಡೆದ ಬಾಂಬ್ ಬ್ಲಾಸ್ಟ್ ನಂತಹ ಅಹಿತಕರ ಘಟನೆಗಳು ರಾಷ್ಟ್ರ ಮಟ್ಟದಲ್ಲಿ ನಡೆಯಲಿವೆ ಎಂದು ಎಚ್ಚರಿಸಿದರು.
ರಾಜಕಾರಣಿಗಳು ರಾಜಕಾರಣವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವಾಗ ಮಠಾಧೀಶರು ಸಮಾಜದ ಒಳಿತಿಗಾಗಿ ರಾಜಕೀಯವಾಗಿ ಏಕೆ ಸಲಹೆ ಸೂಚನೆಗಳನ್ನು ನೀಡಬಾರದು. ಮಠಗಳು ಮೊದಲು ಜಾತಿಯತೆಯಿಂದ ದೂರವಿರಬೇಕು. ಜಾತಿ ಪದ್ಧತಿ ನಾಗರೀಕ ಸಮಾಜಕ್ಕೆ ಅಂಟಿರುವ ಶಾಪ. ಮಠಾಧೀಶರು ಮೊದಲು ಜಾತಿ ಸಂಕೋಲೆಗಳಿಂದ ಹೊರಬಂದು ಜಾತ್ಯತೀತ ಸಮಾಜದ ನಿರ್ಮಾಣಕ್ಕಾಗಿ ಗಟ್ಟಿಯಾಗಿ ನಿಂತಾಗ ಮಾತ್ರ ನಾಗರೀಕ ಸಮಾಜದಲ್ಲಿ ಬದಲಾವಣೆಯನ್ನು ಕಾಣಲು ಸಾಧ್ಯವಿದೆ ಎಂದು ತಿಳಿಸಿದರು.
ಹಣವಿದ್ದವರ ವಿಜೃಂಭಣೆ:
ರಾಜಕಾರಣ ದಿಕ್ಕುತಪ್ಪಿದೆ. ತತ್ವ ಆದರ್ಶ ಹಾಗೂ ಮೌಲ್ಯಗಳು ಮಾಯವಾಗಿವೆ. ಹಣವಿದ್ದವರು ರಿಯಲ್ ಎಸ್ಟೇಟ್ ಕುಳಗಳು ರಾಜಕಾರಣದಲ್ಲಿ ವಿಜೃಂಭಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ. ಮಕರ ಸಂಕ್ರಾಂತಿ ನಂತರ ಮತ್ತೆ ನಾನು ಪತ್ರಕರ್ತರ ಮುಂದೆ ಬಂದು ಹಲವು ಹೊಸ ವಿಚಾರಗಳ ಬಗ್ಗೆ ಮಾತನಾಡುತ್ತೇನೆ. ಸದ್ಯಕ್ಕೆ ಇಷ್ಟು ಸಾಕು ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ.


