ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ, ಹೈಟೆಕ್ ಕಾರ್‌ನಲ್ಲಿ ಗೋವುಗಳನ್ನು ಕಳ್ಳತನ ಮಾಡುತ್ತಿದ್ದವರನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ್ದಾರೆ. ಆದರೆ, ಕಳ್ಳರು ಅತಿವೇಗವಾಗಿ ಚಲಾಯಿಸಿ ತಪ್ಪಿಸಿಕೊಂಡಿದ್ದು, ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ..

ಚಿಕ್ಕಮಗಳೂರು (ಡಿ.13): ಹೈಟೆಕ್ ಕಾರ್‌ನಲ್ಲಿ ಗೋವುಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಗೋ ಕಳ್ಳರನ್ನು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಮತ್ತೊಂದು ಕಾರ್‌ನಲ್ಲಿ ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ. ಕೊಪ್ಪದಿಂದ ಕುದುರೆಗುಂಡಿವರೆಗೂ ನಡೆದ ಈ ಚೇಸಿಂಗ್ ವಿಫಲವಾಗಿದೆ.

ಹೈಟೆಕ್ ಕಾರ್‌ನಲ್ಲಿ ಗೋವುಗಳ ಕಳ್ಳತನ

ಕೊಪ್ಪ ತಾಲೂಕಿನಲ್ಲಿ ಗೋ ಕಳ್ಳರು ಹೈಟೆಕ್ ಕಾರ್‌ನಲ್ಲಿ ಗೋವುಗಳನ್ನು ತುಂಬಿಕೊಂಡು ಹೋಗುತ್ತಿದ್ದರು. ಈ ವಿಷಯ ತಿಳಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ತಕ್ಷಣವೇ ಮತ್ತೊಂದು ಕಾರ್‌ನಲ್ಲಿ ಅವರನ್ನು ಬೆನ್ನತ್ತಿದ್ದಾರೆ. ಕಳ್ಳರನ್ನು ಹಿಡಿಯುವ ಪ್ರಯತ್ನದಲ್ಲಿ ಕಾರ್ಯಕರ್ತರು ತಮ್ಮ ಕಾರ್‌ನಲ್ಲಿ ಚೇಸಿಂಗ್ ವಿಡಿಯೋ ಮಾಡಿಕೊಂಡೇ ಮುಂದುವರೆದಿದ್ದಾರೆ.

ಗೋ ಕಳ್ಳರ ಕಾರ್ ಮತ್ತು ಬೆನ್ನತ್ತಿದ್ದ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಕಾರ್ ಎರಡೂ ರಸ್ತೆಯಲ್ಲಿ ಅತೀ ವೇಗವಾಗಿ ಚಲಿಸಿದ್ದು, ಕೊಪ್ಪದಿಂದ ಕುದುರೆಗುಂಡಿಯವರೆಗೂ ಸಿನಿಮಾಶೈಲಿಯ ಕಾರ್ ರೇಸ್‌ನಂತೆ ಭಾಸವಾಗಿತ್ತು. ಆದರೂ, ಅತೀ ವೇಗದಿಂದ ಚಲಾಯಿಸಿದ ಕಾರಣ ಗೋ ಕಳ್ಳರ ಕಾರನ್ನು ಹಿಡಿಯಲು ಸಾಧ್ಯವಾಗದೆ ಕಾರ್ಯಕರ್ತರು ವಾಪಸ್ಸು ಬಂದಿದ್ದಾರೆ. ಕಳ್ಳರ ಕಾರ್ ತೀರ್ಥಹಳ್ಳಿ ಮಾರ್ಗವಾಗಿ ಹೋಗಿರುವ ಸಾಧ್ಯತೆ ಇದೆ ಎಂದು ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶಂಕೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ:

ಈ ರೀತಿಯ ಗೋ ಕಳ್ಳತನಗಳು ಹಲವು ಬಾರಿ ನಡೆದಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಸಂಬಂಧ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಕಿಡಿಕಾರಿ ಪೋಸ್ಟ್‌ಗಳನ್ನು ಹಾಕಿದ್ದು, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಆಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.