ಕೊರೋನಾದಿಂದ ಬಹುತೇಕ ಕನ್ನಡಿಗರ ಪಾರು ಮಾಡಿದ ಚೀನಾ ಹೊಸವರ್ಷ!| ಬಚಾವ್‌ ಆದೆವೆಂದು ನಿಟ್ಟುಸಿರು ಬಿಟ್ಟಕನ್ನಡಿಗರು| ವೈರಸ್‌ ಬಾಧೆ ತಗ್ಗಿದ ಬಳಿಕ ವಾಪಸ್‌ಗೆ ನಿರ್ಧಾರ

ಬೆಂಗಳೂರು[ಫೆ.10]: ಚೀನಾ ಕ್ಯಾಲೆಂಡರ್‌ನ ಹೊಸ ವರ್ಷದ ರಜೆ ಹಿನ್ನೆಲೆಯಲ್ಲಿ ನಾಡಿಗಾಗಮಿಸಿದ್ದಂರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಕನ್ನಡಗಿರು ಸೇರಿದಂತೆ ನೂರಾರು ಭಾರತೀಯರು ಕಾಕತಾಳೀಯವೆಂಬಂತೆ ಕರೋನಾ ಆತಂಕದಿಂದ ಪಾರಾಗಿರುವ ವಿದ್ಯಮಾನ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ಚೀನಾದಲ್ಲಿ ನಿಯಾನ್‌ ಕ್ಯಾಲೆಂಡರ್‌ ಪದ್ಧತಿ ಅನುಸರಿಸಲಾಗುತ್ತಿದ್ದು, ಅದರಂತೆ ಜ.25ರಂದು ಅಲ್ಲಿ ಹೊಸ ವರ್ಷ ಆಚರಿಸಲಾಗಿತ್ತು. ಅಲ್ಲಿಹೊಸ ವರ್ಷ ಆರಂಭವಾಗುವ ವಾರದ ಹಿಂದಿನಿಂದ 10 ದಿನಗಳ ಕಾಲ ದೇಶದೆಲ್ಲೆಡೆ ಸರ್ಕಾರಿ ರಜೆ ಇರುತ್ತದೆ. ಕೈಗಾರಿಕೆ ಮತ್ತಿತರ ಸಂಸ್ಥೆಗಳಲ್ಲಿ ಒಂದು ತಿಂಗಳವರೆಗೂ ರಜೆ ನೀಡುವ ಕ್ರಮ ಇದೆ. ಹೀಗಾಗಿ ರಜೆ ಘೋಷಣೆಯಾದ ಕೂಡಲೇ ಅಲ್ಲಿದ್ದ ಬಹುತೇಕ ಭಾರತೀಯರು ತಾಯ್ನಾಡಿಗೆ ಹಿಂತಿರುಗಿದ್ದರು.

ಬ್ಯಾಡ್ ನ್ಯೂಸ್: ಕೊರೋನಾ ಸ್ವೀಕರಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ!

300ಕ್ಕೂ ಹೆಚ್ಚು ಕರ್ನಾಟಕದವರು:

ಚೀನಾದಲ್ಲಿ 300ಕ್ಕೂ ಹೆಚ್ಚು ಕನ್ನಡಿಗರು ನಮ್ಮ ಸಂಪರ್ಕದಲ್ಲಿದ್ದಾರೆ. ಹೊಸ ವರ್ಷಾಚರಣೆ ರಜೆ ಘೋಷಣೆಯಾದ ಬಳಿಕ ಅರ್ಧಕ್ಕೂ ಹೆಚ್ಚು ಮಂದಿ ಕರ್ನಾಟಕಕ್ಕೆ ಬಂದಿದ್ದಾರೆ ಎಂದು ಚೀನಾದ ಶಾಂಘೈನಲ್ಲಿ ಯೋಗ ಶಿಕ್ಷಕರಾಗಿರುವ ಮಂಗಳೂರಿನ ಸುಧೀರ್‌ ಗಟ್ಟಿಹೇಳುತ್ತಾರೆ. ಕರಾವಳಿಯ 15ಕ್ಕೂ ಹೆಚ್ಚು ಸ್ನೇಹಿತರು ಅಲ್ಲಿದ್ದು ಅವರೆಲ್ಲರೂ ತಾಯ್ನಾಡಿಗೆ ಮರಳಿ ಸಂತೋಷದಿಂದ ಇದ್ದಾರೆ ಎಂದಿದ್ದಾರೆ.

ನಾವು ಭಾರತಕ್ಕೆ ಮರಳಿದ ವಾರದ ಬಳಿಕ ಚೀನಾದಲ್ಲಿ ಕೊರೋನಾ ಬಾಧೆಯ ವಿಚಾರ ತಿಳಿದುಬಂತು. ಫೆ.4ಕ್ಕೆ ಮರಳಿ ಚೀನಾಕ್ಕೆ ಹೋಗಲು ವಿಮಾನ ಟಿಕೆಟ್‌ ಕಾಯ್ದಿರಿಸಿದ್ದೆ. ಈಗ ರದ್ದು ಮಾಡಿದ್ದೇನೆ. ಕೊರೋನಾ ಸಮಸ್ಯೆ ಸಂಪೂರ್ಣ ಇಳಿಮುಖವಾದ ಬಳಿಕವೇ ಚೀನಾಕ್ಕೆ ತೆರಳುತ್ತೇನೆ ಎಂದು ಸುಧೀರ್‌ ಗಟ್ಟಿಹೇಳಿದ್ದಾರೆ.

ಕೊರೋನಾ ಶಂಕಿತ ರೋಗಿಗಳ ಮೇಲೆ ಚೀನಾ ಅಧಿಕಾರಿಗಳ ದಾಳಿ!

ಚೀನಾದ ಎಕ್ಸ್‌ಪೋರ್ಟ್‌ ಉದ್ಯಮ ಹೊಂದಿರುವ ಉಳ್ಳಾಲದ ಕಿನ್ಯ ನಿವಾಸಿ ಆಸೀಫ್‌ ಕಿನ್ಯ ಅವರೂ ಕೊರೋನಾ ಆವರಿಸುವುದಕ್ಕೆ ಮೊದಲೇ ತಾಯ್ನಾಡಿಗೆ ಮರಳಿದವರು. ಚೀನಾ ಹೊಸ ವರ್ಷದ ಸಂದರ್ಭದಲ್ಲೆಲ್ಲ ಅಲ್ಲಿರುವ ವಿದೇಶಿಗರು ಸ್ವದೇಶಗಳಿಗೆ ಮರಳುವುದು ಮಾಮೂಲಿ. ಈ ಬಾರಿಯೂ ಹೆಚ್ಚಿನವರು ಭಾರತಕ್ಕೆ ಬಂದಿದ್ದರಿಂದ ಮಾರಕ ಸೋಂಕಿನಿಂದ ಅದೃಷ್ಟವಶಾತ್‌ ಪಾರಾಗಿದ್ದಾರೆ ಎಂದು ಹೇಳಿದರು.