ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ವಲಯದಲ್ಲಿ ಕಾರೊಂದು 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಆದರೆ, ಸ್ಥಳದಲ್ಲಿ ಯಾರೂ ಇಲ್ಲದಿರುವುದು ಮತ್ತು ಪೊಲೀಸರಿಗೆ ಮಾಹಿತಿ ನೀಡದಿರುವುದು ಘಟನೆಯ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಕಾರು
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾರೊಂದು 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ. ಆದರೆ ಘಟನೆ ನಡೆದ ಸ್ಥಳದಲ್ಲಿ ಯಾರೂ ಇಲ್ಲದೇ ಇರುವುದು ಹಾಗೂ ಘಟನೆ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡದೇ ಇರುವುದು ಈಗ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಅನುಮಾನಕ್ಕೆ ಕಾರಣವಾದ ಪ್ರಕರಣ:
ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ವಲಯದ ಹೊನ್ನಾಳ ಗ್ರಾಮದ ಬಳಿ ಕಾರೊಂದು 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಹೀಗಾಗಿ ವಿಚಾರ ತಿಳಿದ ಕೂಡಲೇ ಸ್ಥಳೀಯರು ಆ ಪ್ರದೇಶಕ್ಕೆ ಹೋಗಿ ನೋಡಿದಾಗ ಕಾರಿನಲ್ಲಿ ಯಾರೊಬ್ಬರೂ ಇಲ್ಲದೇ ಇರುವುದು ಕಂಡು ಬಂದಿದೆ. ಈ ಘಟನೆ ಮಲ್ಲಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರಿಗೂ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಈ ಪ್ರಕರಣವೀಗ ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ರೈತರ ಕೈಗೆ ಸಿಕ್ಕ ಪಂಪ್ಸೆಟ್ ಕೇಬಲ್ ಕಳ್ಳರು: ಕದ್ದ ಕೇಬಲ್ನಿಂದ ಮರಕ್ಕೆ ಕಟ್ಟಿ ಥಳಿಸಿದ ರೈತರು
50 ಅಡಿ ಎತ್ತರದಿಂದ ಕಾರು ಕಂದಕಕ್ಕೆ ಉರುಳಿ ಬಿದ್ದಿದ್ದು, 4 ಚಕ್ರ ಮೇಲಾಗಿ ಬಿದ್ದಿರುವುದು ಕಂಡು ಬಂದಿದೆ. ಕಾರಿನಲ್ಲಿ ಯಾರಿದ್ರು,? ಎಷ್ಟು ಜನ? ಎಲ್ಲಿಯವರು ಎಂಬ ಯಾವುದೇ ಮಾಹಿತಿ ಅಲ್ಲಿನ ಯಾರಿಗೂ ಸಿಕ್ಕಿಲ್ಲ. ಸ್ಥಳೀಯರು ವಿಚಾರ ತಿಳಿದು ಹೋಗಿ ನೋಡುವಷ್ಟರಲ್ಲಿ ಕಾರಿನ ಬಳಿ ಯಾರೂ ಇರಲಿಲ್ಲ. ಕಾರಿನಲ್ಲಿ ಓರ್ವ ಪ್ರಯಾಣಿಕ ಇದ್ದ ಘಟನೆ ಬಳಿಕ ಆತನೇ ಸ್ವತಃ ಆಸ್ಪತ್ರೆಗೆ ತೆರಳಿದ್ದಾನೆ ಎಂಬ ಮಾಹಿತಿ ಇದೆ. ಆದರೆ ಪೊಲೀಸರಿಗೆ ಮಾಹಿತಿ ನೀಡದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಅರಣ್ಯ ಪ್ರದೇಶವಾಗಿದ್ದು, ಕಾಡು ಪ್ರಾಣಿ ಬೇಟೆಗೇನಾದರು ಬಂದಿದ್ರಾ ಎಂಬ ಅನುಮಾನ ಮೂಡಿದ್ದು, ಸಾರ್ವಜನಿಕರ ಮಾಹಿತಿ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಮದುವೆ ಮನೆಯಲ್ಲಿ ಊಟ ಮಾಡ್ತಿದ್ದಾಗ ದುರಂತ: ಗಂಟಲಿನಲ್ಲಿ ರಸಗುಲ್ಲಾ ಸಿಲುಕಿ ವ್ಯಕ್ತಿ ಸಾವು


