ತೋಟದಲ್ಲಿ ಕೆಲಸ ಮಾಡುತ್ತಿದ್ದ 61 ವರ್ಷದ ಕೃಷಿಕರೊಬ್ಬರ ಮೇಲೆ ಜೇನುಹುಳುಗಳು ದಾಳಿ ಮಾಡಿದ ಪರಿಣಾಮ ಅವರು ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದಲ್ಲಿ ನಡೆದಿದೆ.

ಜೇನು ನೊಣಗಳ ದಾಳಿಗೆ ರೈತ ಬಲಿ

ಚಿಕ್ಕಮಗಳೂರು: ಜೇನುಹುಳುಗಳ ದಾಳಿಗೆ ತುತ್ತಾದ ಕೃಷಿಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣದಲ್ಲಿ ನಡೆದಿದೆ. 61 ವರ್ಷ ಕೃಷಿಕ ಕರಿಯಾ ನಾಯ್ಕ ಮೃತಪಟ್ಟವರು. ನಿನ್ನೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕರಿಯಾ ನಾಯ್ಕ ಅವರ ಮೇಲೆ ಏಕಾಏಕಿ ಜೇನುಹುಳುಗಳು ದಾಳಿ ಮಾಡಿದ್ದವು. ಇದರಿಂದ ಕೃಷಿಕ ಕರಿಯನಾಯ್ಕ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಸಖರಾಯಪಟ್ಟಣ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರಿಗೆ ಕರೆದೊಯ್ಯುವ ವೇಳೆ ಅವರು ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕರಿಯಾ ನಾಯ್ಕ ಸಾವನ್ನಪ್ಪಿದ್ದು, ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಚೀಟಿ ಹೆಸರಲ್ಲಿ ಜನರಿಗೆ ಲಕ್ಷ ಲಕ್ಷ ರೂ. ನಾಮ ಹಾಕಿದ್ದ ಬಳ್ಳಾರಿಯ ವೆಂಕಟೇಶನ ಕಡೆಗೂ ಬಂಧಿಸಿದ ಪೊಲೀಸರು