ಚಾಮರಾಜನಗರದ ಬಾಲಕಿಯರ ಹಾಸ್ಟೆಲ್ಗೆ ಉಪ ಲೋಕಾಯುಕ್ತ ಫಣೀಂದ್ರ ಅವರು ದಿಢೀರ್ ಭೇಟಿ ನೀಡಿ, ಅಲ್ಲಿನ ಕಳಪೆ ನಿರ್ವಹಣೆ ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.
ಚಾಮರಾಜನಗರ (ನ.28): ಚಾಮರಾಜನಗರದ ಬಾಲಕಿಯರ ಹಾಸ್ಟೆಲ್ಗೆ ಉಪ ಲೋಕಾಯುಕ್ತ ಫಣೀಂದ್ರ ಅವರು ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಹಾಸ್ಟೆಲ್ನ ದುರ್ಬಲ ನಿರ್ವಹಣೆ ವ್ಯವಸ್ಥೆ ಮತ್ತು ಮಕ್ಕಳ ಪೋಷಣೆಯಲ್ಲಿನ ಲೋಪಗಳನ್ನು ಕಂಡು ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು.
ಚಾರ್ಟ್ ಪ್ರಕಾರ ಮಾಂಸಾಹಾರ ಕೊಡ್ತೀದ್ದೀರಾ!.
ಹಾಸ್ಟೆಲ್ ಸೌಲಭ್ಯಗಳನ್ನು ಪರಿಶೀಲಿಸಿದ ಉಪ ಲೋಕಾಯುಕ್ತರು, ಹಾಸ್ಟೆಲ್ ನಿಯಮಗಳ ಪ್ರಕಾರ ಮಕ್ಕಳ ಪೌಷ್ಟಿಕಾಂಶದಲ್ಲಿನ ವ್ಯತ್ಯಾಸ ಕಂಡುಬಂದಿದೆ. ಚಾರ್ಟ್ ಪ್ರಕಾರ ಮಕ್ಕಳಿಗೆ ವಾರಕ್ಕೊಮ್ಮೆ (ಪ್ರತಿ ಭಾನುವಾರ) ಮಾಂಸಾಹಾರ ಕೊಡ್ತಿದ್ದೀರಾ ಎಂದು ಪ್ರಶ್ನಿಸಿದರು. ಮಕ್ಕಳು ಕೇವಲ 15 ದಿನಗಳಿಗೊಮ್ಮೆ ಮಾತ್ರ ಮಾಂಸಾಹಾರ ನೀಡುತ್ತಿರುವುದಾಗಿ ಹೇಳಿದ್ದಾರೆ. ಕೆಲವು ಮಕ್ಕಳು ಭಾನುವಾರ ಊರಿಗೆ ಹೋಗದೆ ಹಾಸ್ಟೆಲ್ನಲ್ಲಿ ಉಳಿದರೂ, ಅವರಿಗೆ ಮಾಂಸಾಹಾರ ನೀಡದ ಕುರಿತು ಉಪ ಲೋಕಾಯುಕ್ತರು ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ನಾನು ನೋಡಿದ ವರ್ಸ್ಟ್ ಹಾಸ್ಟೆಲ್ ಗಳಲ್ಲಿ ಇದೇ ಮೊದಲು!
ಹಾಸ್ಟೆಲ್ನ ಕಳಪೆ ನಿರ್ವಹಣೆಯನ್ನು ಕಂಡು ತೀವ್ರ ಅಸಮಾಧಾನಗೊಂಡ ಉಪ ಲೋಕಾಯುಕ್ತ ಫಣೀಂದ್ರ ಅವರು ಕೆಜಿಬಿಬಿ (ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ) ಹಾಸ್ಟೆಲ್ನ ಹಿರಿಯ ಅಧಿಕಾರಿಗಳಿಗೆ ನೇರವಾಗಿ ಕರೆ ಮಾಡಿ ಮಾತನಾಡಿದರು. 'ನಾನು ನೋಡಿದ ವರ್ಸ್ಟ್ ಹಾಸ್ಟೆಲ್ ಗಳಲ್ಲಿ ಇದೇ ಮೊದಲು. ಜೀರೋ ಮೆಂಟೆನೆನ್ಸ್ (Zero Maintenance), ಜೀರೋ ಸ್ಪೆಷಾಲಿಟಿ (Zero Speciality)' ಎಂದು ಹಾಸ್ಟೆಲ್ ವ್ಯವಸ್ಥೆ ಕುರಿತು ಫಣೀಂದ್ರ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸೂಕ್ತ ಮಾಹಿತಿ ನೀಡುವಂತೆ ಶಿಕ್ಷಣಾಧಿಕಾರಿಗೆ ಸೂಚನೆ:
ಹಾಸ್ಟೆಲ್ ನಿರ್ವಹಣೆ ಮತ್ತು ಲೆಕ್ಕಪತ್ರಗಳ ಕುರಿತು ಗಂಭೀರ ಎಚ್ಚರಿಕೆ ನೀಡಿದ ಉಪ ಲೋಕಾಯುಕ್ತರು, ಶಿಕ್ಷಣಾಧಿಕಾರಿಗಳಿಗೆ ನಾಳೆ ಸೂಕ್ತ ಮಾಹಿತಿ ನೀಡುವಂತೆ ಸೂಚಿಸಿದರು. 'ಇವರು ಅಕೌಂಟ್ ಯಾವ ರೀತಿ ಮಾಡಿದ್ದಾರೆ ಅನ್ನೋದು ಚೆಕ್ ಮಾಡಿ. ನಾಳೆ ನೀವೂ ನನಗೆ ಮಾಹಿತಿ ಕೊಡಿ' ಎಂದು ಆದೇಶಿಸಿದರು. ಒಂದು ವೇಳೆ ಮಾಹಿತಿ ತಪ್ಪಾದರೆ, ಮೂವರನ್ನು ಅಮಾನತು ಮಾಡುತ್ತೇನೆ ಎನ್ನುವ ಮೂಲಕ ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.


