ಮುಡಾ ಹಗರಣ ಕೇವಲ 14 ಸೈಟ್ ಹಗರಣ ಅಲ್ಲ‌. ಸಾವಿರಾರು ಕೋಟಿ ಹಗರಣ ಆಗಿದೆ. ಸಿದ್ದರಾಮಯ್ಯ ಗೌರವ ಯುತವಾಗಿ ರಾಜೀನಾಮೆ ಕೊಡಬೇಕು ಎಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ‌.ವೈ. ವಿಜಯೇಂದ್ರ.   

ಹುಬ್ಬಳ್ಳಿ(ಅ.18):  ಸಿದ್ದರಾಮಯ್ಯನವರ ಪಾಪದ ಕೊಡ ತುಂಬಿದೆ. ಸಿದ್ದರಾಮಯ್ಯ ಕೆಸರೆ ಗ್ರಾಮದಿಂದ ಕೆಸರು ಎರಚಿಕೊಂಡಿದ್ದಾರೆ. ಮುಡಾ ಕಚೇರಿ ಮೇಲೆ ಇಡಿ ದಾಳಿ ನೀರಿಕ್ಷೀತವಾಗಿದೆ. ಸಿದ್ದರಾಮಯ್ಯ ಗೌರವಯುತವಾಗಿ ರಾಜೀನಾಮೆ ಕೊಡಬೇಕು ಅನ್ನೋದು ನಮ್ಮ ಆಗ್ರಹ‌ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ‌.ವೈ. ವಿಜಯೇಂದ್ರ ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ‌.ವೈ ವಿಜಯೇಂದ್ರ ಅವರು, ನಾಮ್ಮ ಪಾದಯಾತ್ರೆಗೆ ಒಂದು ಅರ್ಥ ಸಿಕ್ಕಿದೆ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಯನ್ನ ಎದುರಿಸಬೇಕು ಎಂದು ಆಗ್ರಹಿಸಿದ್ದಾರೆ. ಮುಡಾ ಹಗರಣ ಕೇವಲ 14 ಸೈಟ್ ಹಗರಣ ಅಲ್ಲ‌. ಸಾವಿರಾರು ಕೋಟಿ ಹಗರಣ ಆಗಿದೆ. ಸಿದ್ದರಾಮಯ್ಯ ಗೌರವ ಯುತವಾಗಿ ರಾಜೀನಾಮೆ ಕೊಡಬೇಕು ಎಂದು ಬಿ‌.ವೈ ವಿಜಯೇಂದ್ರ ತಿಳಿಸಿದ್ದಾರೆ.

ಮುಡಾ ಮೇಲೆ ಇಡಿ ದಾಳಿ: ಸಿದ್ದು ಕಳಂಕ ರಹಿತವಾಗಿದ್ದರೆ ರಾಜ್ಯಕ್ಕೆ ಮಾದರಿ ಆಗ್ತಾರೆ, ಆರಗ ಜ್ಞಾನೇಂದ್ರ

ಲೋಕಾಯುಕ್ತ ಪ್ರಕರಣ ದಾಖಲಿಸಿಕೊಂಡಿದೆ. ಅದಕ್ಕೆ ಪೂರಕವಾಗಿ ಇಂದು ಇಡಿ ದಾಳಿ ಮಾಡಿದೆ. ಜಾರಿ ನಿರ್ದೇಶನಾಲಯದ ದಾಳಿ ನಿರೀಕ್ಷಿತ. ಸಿಎಂ ಕುಟುಂಬ ಅಕ್ರಮವಾಗಿ ಜಮೀನು ಖರೀದಿಸಿತ್ತು. 14 ನಿವೇಶನವನ್ನು ಆಕ್ರಮವಾಗಿ ಸಿಎಂ ಪತ್ನಿಗೆ ನೀಡಲಾಗಿತ್ತು. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ದಲ್ಲಾಳಿಗಳ ಮೂಲಕ ಖರೀದಿಸಿದ್ದರು. ಸಿಎಂ ಕುಟುಂಬದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದೆವು. ಸದನದಲ್ಲಿ ಚರ್ಚೆಗೂ ಸಿಎಂ ಅವಕಾಶ ಮಾಡಿಕೊಡಲಿಲ್ಲ. 14 ನಿವೇಶನಗಳಲ್ಲಿ ಅಕ್ರಮ ಆಗಿಲ್ಲ ಅಂತ ಸಮರ್ಥನೆ ಮಾಡಿಕೊಂಡರು. 62 ಕೋಟಿ ರೂಪಾಯಿ ಪರಿಹಾರ ಕೊಡಬೇಕೆಂದರು. ತಮ್ಮ ಮನಸ್ಸಿಗೆ ಬಂದಂತೆ ಸಿಎಂ ವರ್ತಿಸಿದರು. ಈಗ ಸಿದ್ದರಾಮಯ್ಯ ಅವರಿಗೆ ಜ್ಞಾನೋದಯವಾಗಿದೆ. 14 ನಿವೇಶನಗಳನ್ನು ಹಿಂದಿರುಗಿಸೋದಾಗಿ ಪತ್ರ ಬರೆದಿದ್ದಾರೆ. ವಿಶೇಷ ನ್ಯಾಯಾಲಯ ತನಿಖೆಗೆ ಆದೇಶಿಸಿದೆ ಎಂದು ಹೇಳಿದ್ದಾರೆ. 

ಸಿಬಿಐ ತನಿಖೆ ಆಗಬೇಕು ಅಂತ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಇದರ ನಡುವೆ ಇಂದು ಇಡಿ ದಾಳಿ ಮಾಡಿದೆ. ಎಲ್ಲವೂ ಕಾನೂನು ರೀತಿಯಲ್ಲಿ ಪ್ರಕ್ರಿಯೆಗಳ ನಡೆದಿದೆ. ಕೆಸರೆ ಗ್ರಾಮದಲ್ಲಿ ಸಿಎಂ ಕೆಸರು ಮೆತ್ತಿಕೊಂಡಿದ್ದಾರೆ. ಕ್ಲೀನ್ ರಾಜಕಾರಣಿ ಅಂತ ತಮ್ಮ ಬೆನ್ನು ತಾವೇ ಚಪ್ಪರಿಸಿಕೊಂಡಿದ್ದರು. ಆದರೆ ಈ ಪ್ರಕರಣದಲ್ಲಿ ಕೆಸರು ಎರಚಿಕೊಂಡಿರುವುದು ಬಹಿರಂಗಗೊಂಡಿದೆ. ಈ ಪ್ರಕರಣದಲ್ಲಿ ಸಿಎಂ ಅವರೇ ಮೊದಲ ಆರೋಪಿಯಾಗಿದ್ದಾರೆ. ಭಂಡತನದಿಂದ ಹೊರಗೆ ಬಂದು ಗೌರವಯುತವಾಗಿ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದ್ದಾರೆ. 

ಮುಡಾದಲ್ಲಿ 4 ಸಾವಿರ ಕೋಟಿ ಅಕ್ರಮವಾಗಿದೆ ಎಂದಿದ್ದಕ್ಕೆ ಇಡಿ ದಾಳಿ ಆಗಿದೆ: ಆರ್. ಅಶೋಕ್!

ಇಡಿ ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಉಪ್ಪು ತಿಂದ ಮೇಲೆ ನೀರು ಕುಡಿಲೇಬೇಕಾಗುತ್ತದೆ. ಯಾವ ಪುರುಷಾರ್ಥಕ್ಕಾಗಿ 14 ನಿವೇಶನ ವಾಪಸ್ ಕೊಟ್ಟಿದ್ದೀರಿ?. ಇಡಿ ದಾಳಿ ನಡೆದ ಕೂಡಲೇ ಪಕ್ಷಪಾತ ನೆನಪಾಗುತ್ತಾ. ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಖುದ್ದು ಸಿಎಂ ಆದೇಶಿಸಿದ್ದಾರೆ. ಮುಡಾ ಹಗರಣ ಕೇವಲ 14 ನಿವೇಶನಗಳಿಗೆ ಸೀಮಿತವಲ್ಲ . 4 ರಿಂದ 5 ಸಾವಿರ ಕೋಟಿ ಬೆಲೆಬಾಳುವ ನಿವೇಶನಗಳನ್ನು ದಲ್ಲಾಳಿಗಳಿಗೆ ಕೊಟ್ಟಿದ್ದಾರೆ ಮುಖ್ಯಮಂತ್ರಿಗಳೇ ಇದೆಲ್ಲದಕ್ಕೂ ಹೊಣೆಗಾರರು. ಸಿಎಂ ಸಿಎಂ ಅವರ ಪಾಪದ ಕೊಡ ತುಂಬಿದೆ. ಯಾವತ್ತೂ ರಾಜೀನಾಮೆ ಕೊಡ್ತಾರೊ ಗೊತ್ತಿಲ್ಲ. ಭಂಡತನದಿಂದ ಸಿಎಂ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ. ಕಾನೂನು ಕುಣಿಕೆಯಿಂದ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದಿದ್ದಾರೆ. 

ಉಪಚುನಾವಣೆಯ ಟಿಕೆಟ್‌ಗೆ ಸಂಬಂಧಿಸಿದಂತೆ ಒಂದೆರಡು ದಿನದಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ನಾಡಿದ್ದು ನಾನು ದೆಹಲಿಗೆ ಹೋಗ್ತೇನೆ, ಎರಡು ಮೂರು ದಿನಗಳಲ್ಲಿ ಅಂತಿಮಗೊಳ್ಳಲಿದೆ. ಚನ್ನಪಟ್ಟಣ ವಿಚಾರ ಹೈಕಮಾಂಡ್ ಬಿಟ್ಟದ್ದು, ಈಗಾಗಲೇ ಕುಮಾರಸ್ವಾಮಿ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಾನು ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಾತನಾಡುತ್ತೇನೆ. ಶಿಗ್ಗಾಂವಿ ವಿಚಾರವಾಗಿ ಬಸವರಾಜ ಬೊಮ್ಮಾಯಿ ಮನಸಲ್ಲಿ ಏನಿದೆ ಅನ್ನೋದು‌ ಮುಖ್ಯ. ಪಕ್ಷದ ಪ್ರಮುಖರ ಅಭಿಪ್ರಾಯ ತಗೆದುಕೊಂಡು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.