ಲಿಂಗಾಯತ ಮಹಾಸಭೆ ಗುತ್ತಿಗೆ ಹಿಡಿದಿದ್ದೀರಾ?: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಯತ್ನಾಳ್
* ಸದನದಲ್ಲಿ ಈಶ್ವರ್ ಖಂಡ್ರೆಗೆ ಯತ್ನಾಳ್ ತರಾಟೆ
* ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆ
* ಕಾಂಗ್ರೆಸ್ ಸದಸ್ಯರು ಮತ್ತು ಯತ್ನಾಳ್ ನಡುವೆ ಮಾತಿನ ಚಕಮಕಿ
ಬೆಂಗಳೂರು(ಸೆ.24): ಆಡಳಿತ ಪಕ್ಷದ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯ ಈಶ್ವರ್ ಖಂಡ್ರೆ ನಡುವೆ ಜಟಾಪಟಿ ನಡೆದಿದ್ದು, ಲಿಂಗಾಯತ(Lingayat) ವೀರಶೈವ ಮಹಾಸಭಾವನ್ನು ಗುತ್ತಿಗೆ ಹಿಡಿದಿದ್ದೀರಾ ಎಂದು ಈಶ್ವರ ಖಂಡ್ರೆ ವಿರುದ್ಧ ಬಸನಗೌಡ ಪಾಟೀಲ್ ಕಿಡಿಕಾರಿದ್ದಾರೆ.
ಗುರುವಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆ ವೇಳೆ, ಬಸನಗೌಡ ಪಾಟೀಲ್ ಯತ್ನಾಳ್ ಮಧ್ಯಪ್ರವೇಶಿಸಿ ಆ ಭಾಗದ ಕಾಂಗ್ರೆಸ್(Congress) ನಾಯಕರು ಏನು ಮಾಡಿದ್ದಾರೆ ಎಂದು ಹೇಳಿದರು. ಈ ವೇಳೆ ಕಾಂಗ್ರೆಸ್ ಸದಸ್ಯರ ಮತ್ತು ಯತ್ನಾಳ್ ನಡುವೆ ಮಾತಿನ ಚಕಮಕಿ ನಡೆಯಿತು. ಈಶ್ವರ್ ಖಂಡ್ರೆ(Eshwar Khandre) ಅವರು ಆ ಬಗ್ಗೆ ಮಾತನಾಡಲು ನೈತಿಕತೆ ಏನು ಎಂದು ಹೇಳಿದರು. ಇದರಿಂದ ಕೆರಳಿದ ಯತ್ನಾಳ್, ನನ್ನ ನೈತಿಕತೆ ಬಗ್ಗೆ ಮಾತನಾಡಬೇಕಿಲ್ಲ. ನಾನೂ ಯಾವುದೋ ವಂಶದಿಂದ ರಾಜಕಾರಣ ಮಾಡುತ್ತಿಲ್ಲ ಎಂದು ಕೆಣಕಿದರು. ಇದು ಇಬ್ಬರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.
ಲಿಂಗಾಯತರನ್ನ ಸೆಳೆಯಲು ಕಾಂಗ್ರೆಸ್ ಸಭೆ
ಮಾತು ಮುಂದುವರಿಸಿದ ಯತ್ನಾಳ್, ಲಿಂಗಾಯತ ವೀರಶೈವ ಮಹಾಸಭಾವನ್ನು ಗುತ್ತಿಗೆ ಹಿಡಿದಿದ್ದೀರಾ? ನನಗೆ ನೈತಿಕತೆ ಇದೆ ಎಂದು ಕಿಡಿಕಾರಿದರು. ನಂತರ ಪ್ರಿಯಾಂಕ್ ಖರ್ಗೆ(Priyank Kharge) ತಮ್ಮ ಮಾತು ಮುಂದುವರಿಸಿದಾಗ ವಾಕ್ಸಮರ ತಣ್ಣಗಾಯಿತು.