ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ.50ರ ರಿಯಾಯಿತಿ ಯೋಜನೆಗೆ ಭಾರಿ ಪ್ರತಿಕ್ರಿಯೆ. 21 ದಿನಗಳಲ್ಲಿ ₹80 ಕೋಟಿಗೂ ಅಧಿಕ ದಂಡ ಸಂಗ್ರಹ. 28.84 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥ. ರಿಯಾಯಿತಿ ನಾಳೆ (ಸೆ.12) ಕೊನೆಗೊಳ್ಳಲಿದೆ.

ಬೆಂಗಳೂರು (ಸೆ.11): ಸಂಚಾರ ನಿಯಮ ಉಲ್ಲಂಘನೆಗಳ ದಂಡ ಪಾವತಿಗೆ ಪೊಲೀಸ್ ಇಲಾಖೆ ನೀಡಿದ್ದ ಶೇ.50ರ ರಿಯಾಯಿತಿ ಯೋಜನೆಗೆ ಸಾರ್ವಜನಿಕರಿಂದ ಭಾರಿ ಸ್ಪಂದನೆ ವ್ಯಕ್ತವಾಗಿದ್ದು, ಕೇವಲ 21 ದಿನಗಳಲ್ಲಿ ₹80 ಕೋಟಿಗೂ ಹೆಚ್ಚು ದಂಡ ಸಂಗ್ರಹವಾಗಿದೆ. ಈ ರಿಯಾಯಿತಿ ಯೋಜನೆಯು ನಾಳೆ (ಸೆಪ್ಟೆಂಬರ್ 12) ಕೊನೆಗೊಳ್ಳಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

21 ದಿನಗಳಲ್ಲಿ ದಾಖಲೆ ಸಂಗ್ರಹ

ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಬಾಕಿ ಉಳಿಸಿಕೊಂಡಿದ್ದ ದಂಡ ಪಾವತಿಸಲು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ, ಆಗಸ್ಟ್ 23 ರಿಂದ ಸೆಪ್ಟೆಂಬರ್ 12ರವರೆಗೆ ಪೊಲೀಸ್ ಇಲಾಖೆ ಶೇ.50ರ ರಿಯಾಯಿತಿ ಘೋಷಿಸಿತ್ತು. ಈ ಅವಕಾಶವನ್ನು ಬಳಸಿಕೊಂಡ ಸಾರ್ವಜನಿಕರು ದಂಡ ಪಾವತಿಗೆ ಮುಗಿಬಿದ್ದಿದ್ದಾರೆ.

ಕಳೆದ 21 ದಿನಗಳಲ್ಲಿ ಬೆಂಗಳೂರು ಸಂಚಾರಿ ಪೊಲೀಸ್ ವ್ಯಾಪ್ತಿಯಲ್ಲಿ ಒಟ್ಟು 28,84,114 ಪ್ರಕರಣಗಳು ಇತ್ಯರ್ಥಗೊಂಡಿವೆ. ಈ ಮೂಲಕ ಇದುವರೆಗೆ ₹80,78,75,350 ರೂಪಾಯಿ ದಂಡ ಸಂಗ್ರಹವಾಗಿದೆ. ಈ ಬೃಹತ್ ಮೊತ್ತವು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಎಷ್ಟಿದೆ ಎಂಬುದನ್ನು ಬಿಂಬಿಸುತ್ತದೆ.

ದಂಡದ ಮೊತ್ತ ಅರ್ಧದಷ್ಟು ಕಡಿಮೆಗೊಂಡಿದ್ದರಿಂದ ವಾಹನ ಸವಾರರು ತಮ್ಮ ಬಾಕಿ ದಂಡವನ್ನು ಪಾವತಿಸಲು ಆಸಕ್ತಿ ತೋರಿದ್ದಾರೆ. ಈ ರಿಯಾಯಿತಿ ಅವಕಾಶ ನಾಳೆ ಕೊನೆಯ ದಿನವಾಗಿದ್ದು, ದಂಡ ಬಾಕಿ ಉಳಿಸಿಕೊಂಡಿರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.

Scroll to load tweet…