ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ನಿರ್ಮಾಣ , ಬೀದಿ ಬದಿ ವ್ಯಾಪಾರಿಗಳ ಬದುಕು ಅತಂತ್ರ!
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ರಸ್ತೆ ಹೆದ್ದಾರಿ ಪಕ್ಕದ ಬೀದಿ ಬದಿ ವ್ಯಾಪಾರಿಗಳ ಬದುಕಿಗೆ ಬಾರಿ ಪೆಟ್ಟು ಕೊಟ್ಟಿದೆ. ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಬೈಪಾಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದ್ದು, ಎಲ್ಲರೂ ಅಲ್ಲೇ ಸಂಚರಿಸುತ್ತಿರುವುದು ವ್ಯಾಪಾರಸ್ಥರನ್ನ ಬೀದಿಗೆ ಬೀಳುವಂತೆ ಮಾಡಿದೆ.
ರಾಮನಗರ (ಸೆ.23): ಕೇಂದ್ರ ಹಾಗೂ ರಾಜ್ಯ ಸರ್ಕಾರ ವಾಹನ ಸವಾರರಿಗೆ ಅನುಕೂಲವಾಗಲಿ ಎಂದು ದಶಪಥ ರಸ್ತೆ, ಬೈಪಾಸ್ ರಸ್ತೆಯನ್ನ ನಿರ್ಮಾಣ ಮಾಡುತ್ತಿದೆ. ಆದರೆ ಇದೇ ರಸ್ತೆ ಇದೀಗ ವ್ಯಾಪಾರಿಗಳ ಬದುಕಿನ ಮೇಲೆ ಬಾರಿ ಪೆಟ್ಟು ನೀಡಿದೆ. ಪ್ರಯಾಣಿಕರು, ವಾಹನ ಸವಾರಿಗೆ ಅನುಕೂಲವಾಗಬೇಕು, ಟ್ರಾಫಿಕ್ ಕಿರಿಕಿರಿ ಇರಬಾರದು, ನಾನಾ ಕಾರಣಗಳನ್ನ ಮುಂದಿಟ್ಟು ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಾಣ ಮಾಡುತ್ತಿವೆ. ಅಲ್ಲದೆ ಹೆದ್ದಾರಿಯಲ್ಲಿ ಸಿಗುವ ನಗರದ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಬೈಪಾಸ್ ರಸ್ತೆಗಳನ್ನು ಸಹಾ ನಿರ್ಮಾಣ ಮಾಡಿದೆ. ಆದರೆ ಇದೇ ಬೈಪಾಸ್ ರಸ್ತೆ ವ್ಯಾಪಾರಸ್ಥರನ್ನ ಬೀದಿಗೆ ಬೀಳುವಂತೆ ಮಾಡಿದೆ. ಅಂದ ಹಾಗೆ ಈಗಾಗಲೇ ಬೆಂಗಳೂರಿನ ಕೆಂಗೇರಿಯಿಂದ ಮಂಡ್ಯದ ಮದ್ದೂರುವರೆಗೂ ಕಾಮಗಾರಿ ಮುಗಿದಿದೆ. ಹೀಗಾಗಿ ನೂತನ ದಶಪಥ ರಸ್ತೆಗಳಲ್ಲಿ ವಾಹನಗಳು ಸಂಚಾರಿಸುತ್ತಿವೆ. ಇನ್ನು ಹೆದ್ದಾರಿಯಲ್ಲಿ ಸಿಗುವ ನಗರದ ಬದಲಿ ಬೈಪಾಸ್ ರಸ್ತೆಗಳಲ್ಲಿ ಶೇ 95 ರಷ್ಟು ವಾಹನಗಳು ಸಂಚಾರಿಸುತ್ತಿವೆ. ಹೀಗಾಗಿ ಈ ಹಿಂದೆ ಬೆಂಗಳೂರು-ಮೈಸೂರು ಹೆದ್ದಾರಿ ಅಕ್ಕಪಕ್ಕದಲ್ಲಿ ಇದ್ದ ವ್ಯಾಪಾರಿಗಳಿಗೆ ಇದೀಗ ವ್ಯಾಪಾರವೇ ಇಲ್ಲದಂತೆ ಆಗಿದೆ. ಯಾವೊಬ್ಬ ಪ್ರಯಾಣಿಕರು, ಪ್ರವಾಸಿಗರು, ವಾಹನ ಸವಾರರು ಬರುತ್ತಿಲ್ಲ. ಎಲ್ಲ ವಾಹನಗಳು ಬೈಪಾಸ್ ರಸ್ತೆಯಲ್ಲಿಯೇ ಹೋಗುತ್ತಿವೆ. ಹೀಗಾಗಿ ಟೀ ಅಂಗಡಿಯಿಂದ ಹಿಡಿದು, ಹೋಟಲ್, ಪೆಟ್ರೋಲ್ ಬಂಕ್, ಪಂಚರ್ ಶಾಪ್ ಸೇರಿದಂತೆ ಬಹುತೇಕರಿಗೆ ವ್ಯಾಪಾರವೇ ಇಲ್ಲದಂತಾಗಿದೆ.
ಅಂದಹಾಗೆ ನೂತನ ದಶಪಥ ರಸ್ತೆ ನಿರ್ಮಾಣಕ್ಕೂ ಮೊದಲು, ನಾಲ್ಕು ಪಥದ ರಸ್ತೆಯಲ್ಲಿಯೇ ಬೆಂಗಳೂರಿನಿಂದ ಹೊರಟು, ಕುಂಬಳಗೂಡು, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಮಾರ್ಗವಾಗಿ ಮೈಸೂರಿಗೆ ಪ್ರಯಾಣಿಕರು ಹೋಗುತ್ತಿದ್ದರು. ಪ್ರತಿನಿತ್ಯ ಲಕ್ಷಾಂತರ ವಾಹನಗಳ ಸಂಚಾರವಿತ್ತು. ನಗರ ಪ್ರದೇಶದ ಮೂಲಕವೇ ವಾಹನಗಳ ಸಂಚಾರವಿತ್ತು.
ಈ ವೇಳೆ ಹೆದ್ದಾರಿಯ ಅಕ್ಕಪಕ್ಕದಲ್ಲಿ ಇದ್ದ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಅದರಲ್ಲೂ ಪ್ರಮುಖವಾಗಿ ಬಿಡದಿಯಲ್ಲಿ ತಟ್ಟೆ ಇಡ್ಲಿ ಸವಿದು ಮೈಸೂರು ಕಡೆ ಪ್ರಯಾಣ ಬೆಳೆಸುತ್ತಿದ್ದರು. ಆದರೆ ಇದೀಗ ತಟ್ಲೆ ಇಡ್ಲಿ ಸವಿಯುದಕ್ಕೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಶೇ 90 ರಷ್ಟು ಮಂದಿ ಹೋಟಲ್ ಕಡೆ ಮುಖ ಮಾಡುತ್ತಿಲ್ಲ. ಹೀಗಾಗಿ ಪ್ರವಾಸಿಗರನ್ನೆ ನಂಬಿಕೊಂಡು ಹೋಟಲ್ ನಡೆಸುತ್ತಿದ್ದವರ ಹೋಟಲ್ ಗಳು ಖಾಲಿ ಹೊಡೆಯುತ್ತಿವೆ.
ಒಟ್ಟಾರೆ ನೂತನ ಬೆಂಗಳೂರು-ಮೈಸೂರು ಹೆದ್ದಾರಿಯಿಂದಾಗಿ ವ್ಯಾಪಾರಸ್ಥರಿಗೆ ವ್ಯಾಪಾರವಿಲ್ಲದೆ ಪರದಾಡುವಂತೆ ಆಗಿದೆ.ವ್ಯಾಪಾರವನ್ನೇ ನಂಬಿಕೊಂಡವರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ದಶಪಥದಲ್ಲಿ ಕಳಪೆ ಕಾಮಗಾರಿ: ಆರೋಪ
ಮೈಸೂರು ಬೆಂಗಳೂರು ಹೆದ್ದಾರಿ ಕಾಮಗಾರಿಯು ಅದರ ವಿನ್ಯಾಸ ಮತ್ತು ತಾಂತ್ರಿಕತೆಯಲ್ಲಿ ಅವೈಜ್ಞಾನಿಕವಾಗಿದ್ದು, ಗುಣಮಟ್ಟದಲ್ಲಿ ಕಳಪೆ ಆಗಿರುವುದನ್ನು ಇತ್ತೀಚೆಗೆ ಸುರಿದ ಮಳೆಯೇ ತೋರಿಸಿದೆ. ಈ ಯೋಜನೆಯನ್ನು ತಮ್ಮ ಸಾಧನೆ ಎಂಬಂತೆ ಹೊತ್ತು ಮೆರೆಸುತ್ತಿರುವ ಸಂಸದ ಪ್ರತಾಪ ಸಿಂಹರ ಸಾಮರ್ಥ್ಯ, ಬರಿ ಮಾತಿನ ಬಡಾಯಿ ಎಂಬುದನ್ನು ಬಯಲು ಮಾಡಿದೆ ಎಂದು ಸ್ವರಾಜ್ ಇಂಡಿಯಾದ ಉಗ್ರ ನರಸಿಂಹೇಗೌಡ ತಿಳಿಸಿದ್ದಾರೆ.
Mandya: ಉದ್ಘಾಟನೆಗೆ ಮುನ್ನವೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬಿರುಕು..!
ಅನಗತ್ಯ ತಿರುವುಗಳಿಲ್ಲದ, ಸರಾಗ ಚಾಲನೆಗೆ ಅಡ್ಡಿಯಾಗದ ವಿಸ್ತಾರ ಮತ್ತು ರಸ್ತೆ ಮೇಲೆ ಬಿದ್ದ ನೀರು ಕೂಡಲೇ ಹರಿದು ಚರಂಡಿ ಮೂಲಕ ಕೆರೆ ಕಟ್ಟೆಗಳಿಗೆ ಸೇರುವ ವ್ಯವಸ್ಥೆ ನಿರ್ಮಾಣವೇ ಸುಗಮ ಸಂಚಾರಕ್ಕೆ ಮೂಲ ಬುನಾದಿ. ಈಗ ಬಿಡದಿ ಬಳಿ ನಿರ್ಮಿಸಿರುವ ಮೆಲ್ಸುತುವೆ ವಿನ್ಯಾಸ ಮತ್ತು ತಾಂತ್ರಿಕತೆಯಲ್ಲಿ ಲೋಪವಿರುವ ಕಾರಣ ತೆರವು ಮಾಡಿದ ದಿನದಿಂದಲೇ ಅಪಘಾತಗಳಾಗುತ್ತಿವೆ. ಈ ಸೇತುವೆ ಹಾದು ಬರುವುದು ಅಪಾಯಕಾರಿ ಮತ್ತು ದುಸ್ಸಾಹಸ. ಚನ್ನಪಟ್ಟಣದ ಬಳಿ ಹೆದ್ದಾರಿಯಲ್ಲಿ ಹೆಬ್ಬಳ್ಳದಂತೆ ನೀರು ನಿಲ್ಲುವುದು ಎಂಜಿನಿಯರುಗಳ ಕಸುಬುದಾರಿಕೆಗೆ ಕನ್ನಡಿ ಹಿಡಿದಿದೆ.
Bengaluru Mysuru Expressway: ಬೆಂಗ್ಳೂರು-ಮೈಸೂರು ದಶಪಥ ವರವೇ? ಶಾಪವೇ?
ಹೆದ್ದಾರಿ ಉದ್ದಕ್ಕೂ ನಗರ ಪಟ್ಟಣಗಳಿಗೆ ಪ್ರವೇಶ ನಿರ್ಗಮನ ಕಲ್ಪಿಸದೆ ಯೋಜನೆ ಮಾಡಿದ್ದಾರೆ. ಮತ್ತೆ ಅದಕ್ಕೆ ಹೆಚ್ಚುವರಿಯಾಗಿ ಸಾವಿರದ ಇನ್ನೂರು ಕೋಟಿಗೆ ಪ್ರಸ್ತಾವ ಸಲ್ಲಿಸಿರುವುದು ಈ ಯೋಜನೆಯು ಭ್ರಷ್ಟಯೋಜನೆ ಎಂಬ ಅನುಮಾನಗಳು ಮೂಡಲು ಕಾರಣ ಒದಗಿಸಿದೆ. ಹೆದ್ದಾರಿ ಪೂರ್ಣಗೊಂಡು ಪ್ರಯಾಣಕ್ಕೆ ವಿಧಿಸುವ ಸುಂಕದ ಮೊತ್ತದ ಸುದ್ದಿಯೂ ಇದು ನಿತ್ಯ ದರೋಡೆಗೆ ನಿರ್ಮಿಸಿದ ಹೆದ್ದಾರಿ ಎಂದು 40 ಪರ್ಸೆಂಟ ಸರ್ಕಾರದ ವೈಖರಿ ನೋಡಿದ ಯಾರಿಗೂ ಅನ್ನಿಸದೆ ಇರದು ಎಂದಿದ್ದಾರೆ.