ರಸ್ತೆ ಮಧ್ಯದಲ್ಲಿ ಉದ್ದಕ್ಕೂ ಬಿರುಕು ಬಿಟ್ಟಿರುವುದು ಕಾಮಗಾರಿ ಗುಣಮಟ್ಟದ ಬಗ್ಗೆ ಅನುಮಾನದಿಂದ ನೋಡುವಂತಾಗಿದೆ

ಮದ್ದೂರು(ಸೆ.04): ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ರಸ್ತೆ ಉದ್ಘಾಟನೆಗೆ ಮುನ್ನವೇ ಬಿರುಕು ಕಾಣಿಸಿಕೊಂಡಿದೆ. ಕಳಪೆ ಕಾಮಗಾರಿಯಿಂದ ರಸ್ತೆ ಬಿರುಕು ಬಿಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದರೆ, ಭಾರೀ ಮಳೆ ಬಿದ್ದ ಕಾರಣದಿಂದ ಬಿರುಕು ಉಂಟಾಗಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಪ್ಪೆ ಸಾರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಸಂಸದೆ ಸುಮಲತಾ ಅಂಬರೀಶ್‌ ಅವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಹೆದ್ದಾರಿ ಕಾಮಗಾರಿ ಪರಿಶೀಲನೆ ನಡೆಸುವ ವೇಳೆ ತಾಲೂಕಿನ ನಿಡಘಟ್ಟ ಸಮೀಪ ಹೆದ್ದಾರಿ ರಸ್ತೆ ಬಿರುಕು ಬಿಟ್ಟಿರುವುದು ಗಮನಕ್ಕೆ ಬಂದಿತು. ರಸ್ತೆ ಮಧ್ಯದಲ್ಲಿ ಉದ್ದಕ್ಕೂ ಬಿರುಕು ಬಿಟ್ಟಿರುವುದು ಕಾಮಗಾರಿ ಗುಣಮಟ್ಟದ ಬಗ್ಗೆ ಅನುಮಾನದಿಂದ ನೋಡುವಂತಾಗಿದೆ. ಉದ್ಘಾಟನೆಗೆ ಮುನ್ನವೇ ರಸ್ತೆ ಬಿರುಕು ಬಿಟ್ಟಿರುವುದರಿಂದ ಈ ರಸ್ತೆ ಎಷ್ಟುಕಾಲ ಬಾಳಿಕೆ ಬರಲಿದೆ ಎಂಬ ಶಂಕೆ ಮೂಡಿದೆ ಎಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದರು.

COMMISSION: ಕೇಂದ್ರದ ಹಣಕ್ಕೂ ಶಾಸಕ ಕಮಿಷನ್‌ ದಂಧೆ: ಸಂಸದೆ ಸುಮಲತಾ

ಮನಸೋಇಚ್ಛೆ ಹಾಳು: 

ಪಟ್ಟಣಕ್ಕೆ ಆಗಮಿಸಿದ ಸಚಿವ ಹಾಗೂ ಸಂಸದೆ ಅವರಿಗೆ ಪುರಸಭಾ ಅಧ್ಯಕ್ಷ ಸುರೇಶ್‌ಕುಮಾರ್‌, ಸದಸ್ಯ ತೈಲೂರು ಪ್ರಸನ್ನ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಅಧಿಕಾರಿಗಳು ಮದ್ದೂರು ಪಟ್ಟಣದಲ್ಲಿ ಪುರಸಭೆ ಆಸ್ತಿಯನ್ನು ಮನಸೋ ಇಚ್ಧೆ ಹಾಳು ಮಾಡಿದ್ದಾರೆ ಯುಜಿಡಿ ಸಂಪರ್ಕ ಹಾಳು ಮಾಡಿ ಮಲಮೂತ್ರ ಮಿಶ್ರಿತ ಕೊಳಚೆ ನೀರು ರಸ್ತೆಯ ಮೇಲೆ ಹರಿಯವಂತೆ ಮಾಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಸಾರ್ವಜನಿಕರು ಪುರಸಭಾ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ. ಈ ಸಮಸ್ಯೆ ಬಗೆ ಹರಿಸಿಕೊಡಿ ಎಂದು ಮನವಿ ಮಾಡಿದರು.

ಸಚಿವ ಗೋಪಾಲಯ್ಯ ಮಾತನಾಡಿ, ಜಿಲ್ಲಾಧಿಕಾರಿಗಳು ಸಂಬಂಧ ಪಟ್ಟಅಧಿಕಾರಿಗಳಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳಿಗೆ ಸೂಚಿಸಿ ಸಮಸ್ಯೆಗಳನ್ನು ತಕ್ಷಣ ಬಗೆ ಹರಿಸಬೇಕು. ಹಾನಿಗೊಳಾದ ಮೂಲ ಸೌರ್ಯಕಗಳನ್ನು ಕಲ್ಪಿಸುವಂತೆ ಕ್ರಮ ಕ್ರಮಗೊಳ್ಳುವಂತೆ ತಾಕೀತು ಮಾಡಿದರು.

ಮಂಡ್ಯ ಜಿಲ್ಲೆಗೆ ಭರ್ಜರಿ ಕೊಡುಗೆ: ಸಿಎಂ ಬೊಮ್ಮಾಯಿಗೆ ಅದ್ಧೂರಿ ಸನ್ಮಾನ, ಉಮೇಶ್‌

ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಜಿಪಂ ಸಿಇಒ ಶಾಂತಾ ಎಲ್‌.ಹುಲ್ಮನಿ, ಉಪ ವಿಭಾಗಧಿಕಾರಿ ಆರ್‌.ಐಶ್ವರ್ಯ, ತಹಸೀಲ್ದಾರ್‌ ಟಿ.ಎನ್‌.ನರಸಿಂಹಮೂರ್ತಿ, ತಾಪಂ ಇಒ ಎಲ್‌.ಸಂದೀಪ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕದಲೂರು ರಾಮಕೃಷ್ಣ, ಕೆಪಿಸಿಸಿ ಸದಸ್ಯ ಎಸ್‌.ಗುರುಚರಣ, ಪುರಸಭಾ ಮಾಜಿ ಅಧ್ಯಕ್ಷ ಎಂ.ಪಿ.ಅಮರ್‌ಬಾಬು ಇದ್ದರು.

ಅಧಿಕಾರಿಗಳಿಗೆ ತರಾಟೆ: 

ನಿಡಘಟ್ಟದ ಬಳಿ ಹೆದ್ದಾರಿ ಕಾಮಗಾರಿಗೆ ರೈತರ ಭೂಮಿಯನ್ನು ವಶಕ್ಕೆ ಪಡೆದುಕೊಂಡಾಗ ತೈಲೂರು ಕೆರೆಗೆ ಹೆಚ್ಚುವರಿ ನೀರು ಬಂದು ಕೆರೆ ಕೋಡಿ ಹೊಡೆದು ರೈತರ ಬೆಳೆಗಳಿಗೆ ನುಗ್ಗಿ ನಷ್ಟವಾಗಿದೆ ಎಂದು ಸ್ಥಳಿಯರು ಸಚಿವ ಹಾಗೂ ಸಂಸದೆಗೆ ದೂರಿದರು. ಈ ವೇಳೆ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕರೆಸಿ ವಿವರಣೆ ಕೇಳಿದಾಗ ಕಾರ್ಯಪಾಲಕ ಇಂಜಿನಿಯರ್‌ ಎಚ್‌.ಎನ್‌.ನಾಗರಾಜು ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 10 ಕೋಟಿ ರು. ಅನುದಾನ ಬಂದಿದೆ ಟೆಂರ್ಡ ಕರೆದು ಹಾನಿಯಾಗೊಳಗಾದ ಕೆರೆಗಳನ್ನು ಪುನಶ್ಚೆತನ ಮಾಡಲಾಗುವುದು ಎಂದು ತಿಳಿಸಿದಾಗ, ಸಚಿವ ಗೋಪಾಲಯ್ಯ ಅವರು ಹಣ ಬಿಡುಗಡೆಯಾದ ಮೇಲೆ ಟೆಂಡರ್‌ ಏಕೆ ಕರೆದಿಲ್ಲ. ನಿನಗೆ ರೈತರ ಕೆಲಸ ಮಾಡಲು ಇಷ್ಟಇಲ್ವ ಎಂದು ತರಾಟೆಗೆ ತೆಗೆದುಕೊಂಡರು.