ಏರ್ ಬೌಂಡ್ ಸಂಸ್ಥೆಗಳು ಡ್ರೋನ್ ಮೂಲಕ ರೋಗನಿರ್ಣಯ ಮಾದರಿಗಳನ್ನು ಯಶಸ್ವಿಯಾಗಿ ಪ್ರಯೋಗಾಲಯಕ್ಕೆ ಕೊಂಡೊಯ್ಯುವ ತಮ್ಮ ಮಹತ್ವದ ಮೆಡಿಕಲ್ ಲಾಜಿಸ್ಟಿಕ್ಸ್ ಪೈಲಟ್ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ.
ಬೆಂಗಳೂರು (ಮಾ.17): ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ನಾರಾಯಣ ಹೆಲ್ತ್ ಮತ್ತು ಬೆಂಗಳೂರು ಮೂಲದ ವೈಮಾನಿಕ ಲಾಜಿಸ್ಟಿಕ್ಸ್ ಕಂಪನಿ ಏರ್ ಬೌಂಡ್ ಸಂಸ್ಥೆಗಳು ಡ್ರೋನ್ ಮೂಲಕ ರೋಗನಿರ್ಣಯ ಮಾದರಿಗಳನ್ನು ಯಶಸ್ವಿಯಾಗಿ ಪ್ರಯೋಗಾಲಯಕ್ಕೆ ಕೊಂಡೊಯ್ಯುವ ತಮ್ಮ ಮಹತ್ವದ ಮೆಡಿಕಲ್ ಲಾಜಿಸ್ಟಿಕ್ಸ್ ಪೈಲಟ್ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಚಂದಾಪುರದಲ್ಲಿರುವ ನಾರಾಯಣ ಹೆಲ್ತ್ ಕ್ಲಿನಿಕ್ ನಿಂದ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಕೇಂದ್ರ ಪ್ರಯೋಗಾಲಯಕ್ಕೆ ವೈಮಾನಿಕ ಸಂಪರ್ಕ ಕಲ್ಪಿಸುವ ಮೂಲಕ, ನಗರ ಪ್ರದೇಶದ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಉಂಟುಮಾಡುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ.
ಜನವರಿ 2026ರಿಂದ ಈ ಯೋಜನೆ ಕೈಗೊಳ್ಳಲಾಗಿದ್ದು, ಈ 4 ಕಿ.ಮೀ ದೂರದ ವೈಮಾನಿಕ ಮಾರ್ಗವನ್ನು ಕೇವಲ 10 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆಯ ರಸ್ತೆ ಸಾರಿಗೆಗೆ ಹೋಲಿಸಿದರೆ ಅತ್ಯಂತ ವೇಗವಾಗಿ ತಲುಪಬಹುದು. ಪೈಲಟ್ ಯೋಜನೆಯ ಅವಧಿಯಲ್ಲಿ, ಸತತ 54 ಕಾರ್ಯಾಚರಣೆಯ ದಿನಗಳಲ್ಲಿ 700ಕ್ಕೂ ಹೆಚ್ಚು ಡ್ರೋನ್ ಹಾರಾಟಗಳನ್ನು ಮಾಡಲಾಗಿದ್ದು, ಪ್ರತಿ ಹಾರಾಟದಲ್ಲಿ 40 ರೋಗನಿರ್ಣಯ ಮಾದರಿಗಳನ್ನು ಸುರಕ್ಷಿತವಾಗಿ ಕೊಂಡೊಯ್ಯಲಾಗಿದೆ. ಈ ಯೋಜನೆಯು ಡ್ರೋನ್ ಆಧಾರಿತ ಸಾಗಾಣಿಕೆ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ತೋರಿಸಿಕೊಟ್ಟಿದೆ.
ಈ ಪೈಲಟ್ ಯೋಜನೆಗೆ ಮೊದಲು, ಚಂದಾಪುರ ಕ್ಲಿನಿಕ್ ನಿಂದ ರೋಗನಿರ್ಣಯದ ಮಾದರಿಗಳನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ರಸ್ತೆಯ ಮೂಲಕ ಕೇಂದ್ರ ಪ್ರಯೋಗಾಲಯಕ್ಕೆ ಸಾಗಿಸಲಾಗುತ್ತಿತ್ತು. ಸಂಚಾರ ದಟ್ಟಣೆಗೆ ಅನುಗುಣವಾಗಿ ಇವು ಪ್ರಯೋಗಾಲಯ ತಲುಪುವ ಸಮಯ ಹೆಚ್ಚಾಗುತ್ತಿತ್ತು. ಆದರೆ ಈಗ ಈ ವೈಮಾನಿಕ ಮಾರ್ಗದ ಬೇಡಿಕೆಗೆ ತಕ್ಕಂತೆ ಮತ್ತು ನಿಗದಿತ ವೇಳಾಪಟ್ಟಿಯಂತೆ ದಿನಕ್ಕೆ 20 ಹಾರಾಟಗಳನ್ನು ನಡೆಸುತ್ತಿದೆ.
ಇದರಿಂದ ಪ್ರಯೋಗಾಲಯಗಳು ಮಾದರಿಗಳನ್ನು ಒಟ್ಟಾರೆಯಾಗಿ ಒಂದೇ ಸಲ ಪಡೆಯುವ ಬದಲಿಗೆ ನಿರಂತರವಾಗಿ ಸ್ವೀಕರಿಸಲು ಸಾಧ್ಯವಾಗುತ್ತಿದೆ. ಕಾರ್ಯಾಚರಣೆ ಆರಂಭವಾದ ಮೊದಲ ವಾರದಲ್ಲೇ, ನಾರಾಯಣ ಹೆಲ್ತ್ ರಸ್ತೆ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದು, ಈ ಎರಡು ಕೇಂದ್ರಗಳ ನಡುವೆ ವೈಮಾನಿಕ ಮಾರ್ಗವನ್ನೇ ಏಕೈಕ ಸಾರಿಗೆ ಸಂಪರ್ಕವನ್ನಾಗಿ ಮಾಡಿದೆ. ಇದು ಪ್ರಯೋಗಾಲಯದ ಕೆಲಸವನ್ನು ಬೇಗನೆ ಪ್ರಾರಂಭಿಸಲು ಅನುವು ಮಾಡಿಕೊಡುತ್ತಿದ್ದು, ವೈದ್ಯರು ವರದಿಗಳನ್ನು ವೇಗವಾಗಿ ಪಡೆಯಲು ಮತ್ತು ರೋಗಿಗಳಿಗೆ ರೋಗನಿರ್ಣಯದ ಫಲಿತಾಂಶ ಸಿಗುವ ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿದೆ.
ಈ ಕುರಿತು ಮಾತನಾಡಿದ ನಾರಾಯಣ ಹೆಲ್ತ್ ನ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು, "ತಂತ್ರಜ್ಞಾನವು ವೈದ್ಯಕೀಯ ವೆಚ್ಚವನ್ನು ಕಡಿಮೆ ಮಾಡುವ ವೇಗವರ್ಧಕ ಎಂಬುದನ್ನು ನಂಬುತ್ತಾ, ನಾವು ನಮ್ಮ ವೈದ್ಯಕೀಯ ಡ್ರೋನ್ ವಿತರಣಾ ಸೇವೆಯ ಆರಂಭವನ್ನು ಹೆಮ್ಮೆಯಿಂದ ಘೋಷಿಸುತ್ತಿದ್ದೇವೆ. ತಾಂತ್ರಿಕ ವ್ಯವಸ್ಥೆಯ ಬಳಕೆಯ ಪರವಾಗಿರುವ ನಾವು, ಕಳೆದ 25 ವರ್ಷಗಳಲ್ಲಿ ಎಲ್ಲರಿಗೂ ಸುರಕ್ಷಿತ, ಕೈಗೆಟುಕುವ ಬೆಲೆಯ ಮತ್ತು ಸುಲಭವಾಗಿ ಲಭ್ಯವಿರುವ ವೈದ್ಯಕೀಯ ಸೇವೆಯನ್ನು ಒದಗಿಸಲು ಪ್ರಬಲವಾದ ಡಿಜಿಟಲ್ ವ್ಯವಸ್ಥೆಯನ್ನು ನಿರ್ಮಿಸಲು ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದೇವೆ.
ಕ್ಲಿನಿಕಲ್ ಪ್ರಯೋಗಾಲಯಗಳು ಮತ್ತು ರಕ್ತನಿಧಿಗಳಂತಹ ಅತ್ಯಗತ್ಯ ಸೇವೆಗಳನ್ನು ಕೇಂದ್ರೀಕೃತಗೊಳಿಸುವ ಮೂಲಕ ಕಾರ್ಯಕ್ಷಮತೆಯನ್ನು ಉತ್ಕೃಷ್ಟಗೊಳಿಸುವುದರಿಂದ ರೋಗನಿರ್ಣಯ ಮತ್ತು ರಕ್ತ ವರ್ಗಾವಣೆಯ ವೆಚ್ಚವನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ. ಆದಾಗ್ಯೂ, ಸಾಗಾಣಿಕೆ ಸಮಯ ಮತ್ತು ಸಾಗಾಣಿಕೆ ವೆಚ್ಚಗಳು ಈ ಬದಲಾವಣೆನೆಗೆ ಬಹುದೊಡ್ಡ ಅಡ್ಡಿಯಾಗಿದ್ದವು" ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, "ಡ್ರೋನ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಏರ್ ಬೌಂಡ್ ಸಂಸ್ಥೆ ಜೊತೆ ಪಾಲುದಾರಿಕೆ ಹೊಂದುವ ಮೂಲಕ, ನಾವು ಈ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತಿದ್ದೇವೆ. ಚಂದಾಪುರದಲ್ಲಿರುವ ನಮ್ಮ ಕ್ಲಿನಿಕ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಮ್ಮ ಆಸ್ಪತ್ರೆಯನ್ನು ಸಂಪರ್ಕಿಸುವ ಯಶಸ್ವಿ ಪ್ರಾಯೋಗಿಕ ಯೋಜನೆಯ ನಂತರ, ಅತಿ ವೇಗದ ಮತ್ತು ಕಡಿಮೆ ವೆಚ್ಚದ ವೈಮಾನಿಕ ಲಾಜಿಸ್ಟಿಕ್ಸ್ ಸೇವೆ ಒದಗಿಸಬಲ್ಲ 'ಅದ್ಭುತ ಫಲಿತಾಂಶಗಳನ್ನು' ನಾವು ಪ್ರತ್ಯಕ್ಷವಾಗಿ ನೋಡಿದ್ದೇವೆ" ಎಂದು ತಿಳಿಸಿದರು.
ನಮ್ಮ ಮುಂದಿನ ಹಾದಿ: 'ಬನಶಂಕರಿ ಮತ್ತು ಅದಕ್ಕೂ ಆಚೆ'
ಪ್ರಾಯೋಗಿಕ ಯೋಜನೆಯ ಉತ್ತಮ ಫಲಿತಾಂಶಗಳಿಂದ ಸಂತೋಷಗೊಂಡಿರುವ ನಾರಾಯಣ ಹೆಲ್ತ್, ಮುಂಬರುವ ತಿಂಗಳುಗಳಲ್ಲಿ ಉದ್ಘಾಟನೆಗೊಳ್ಳಲಿರುವ ಬನಶಂಕರಿಯ ತನ್ನ ಹೊಸ ಆಸ್ಪತ್ರೆಯಲ್ಲಿ ಈ ಸೇವೆಗಳನ್ನು ಒದಗಿಸಲು ಸಿದ್ಧತೆ ನಡೆಸುತ್ತಿದೆ. ಅಂತಿಮವಾಗಿ, ನಿಯಂತ್ರಕ ಅನುಮತಿಗಳು ಮತ್ತು ಸರ್ಕಾರದ ಅನುಮತಿಯನ್ನು ನಿರೀಕ್ಷಿಸುತ್ತಿರುವ ನಾರಾಯಣ ಹೆಲ್ತ್ ಮತ್ತು ಏರ್ ಬೌಂಡ್, ಈ ಕೆಳಗಿನ ಸ್ಥಳಗಳನ್ನು ಸಂಪರ್ಕಿಸುವ ಹೊಸ ವೈಮಾನಿಕ ಪ್ರಾಯೋಗಿಕ ಕಾರಿಡಾರ್ ಅನ್ನು ಪ್ರಾರಂಭಿಸಲು ಉದ್ದೇಶಿಸಿವೆ:
• ಬನಶಂಕರಿಯ ಹೊಸ ಆಸ್ಪತ್ರೆ
• ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಾರಾಯಣ ಹೆಲ್ತ್ ಆಸ್ಪತ್ರೆ
ರೋಗಿಗಳ ಆರೈಕೆಯಲ್ಲಿ ಮಹತ್ತರ ಬದಲಾವಣೆ
ಈ ಕುರಿತು ಡಾ. ದೇವಿ ಶೆಟ್ಟಿ ಅವರು, "ರಕ್ತದ ಮಾದರಿಗಳು ಮತ್ತು ಜೀವ ಉಳಿಸುವ ರಕ್ತದ ಚೀಲಗಳ ಸಾಗಣೆಗೆ ಡ್ರೋನ್ ಅನ್ನು ಬಳಸುವುದು ವೈದ್ಯಕೀಯ ಕ್ಷೇತ್ರದಲ್ಲಿ ನಿಜಕ್ಕೂ ಒಂದು 'ಗೇಮ್ ಚೇಂಜರ್' ಆಗಲಿದೆ, ಇದು ವೈದ್ಯಕೀಯ ಚಿಕಿತ್ಸೆಗಳನ್ನು ಬಹಳ ವೇಗವಾಗಿ ನೀಡಲು ಅನುವು ಮಾಡಿಕೊಡುತ್ತದೆ. ಇಂತಹ ಶ್ರೇಷ್ಠ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವ ನಿಯಂತ್ರಕ ಚೌಕಟ್ಟನ್ನು ಸ್ಥಾಪಿಸಿದ್ದಕ್ಕಾಗಿ ನಾವು ಸರ್ಕಾರಕ್ಕೆ ಪ್ರಾಮಾಣಿಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಹೆಚ್ಚು ಶ್ರೇಷ್ಠ ವೈದ್ಯಕೀಯ ವ್ಯವಸ್ಥೆ ಸ್ಥಾಪಿಸುವ ಕಡೆಗೆ ಸಾಗುವ ಈ ಪ್ರಯಾಣದಲ್ಲಿ ನಮ್ಮೊಂದಿಗೆ ನಿಂತ ಪಾಲುದಾರರಾದ ಏರ್ ಬೌಂಡ್ ಸಂಸ್ಥೆಗೂ ನಾವು ಧನ್ಯವಾದ ಅರ್ಪಿಸುತ್ತೇವೆ" ಎಂದು ತಿಳಿಸಿದರು.
ಏರ್ ಬೌಂಡ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ನಮನ್ ಪುಷ್ಪ್ ಅವರು ಮಾತನಾಡಿ, "54 ದಿನಗಳಲ್ಲಿ 700ಕ್ಕೂ ಹೆಚ್ಚು ಡ್ರೋನ್ ಹಾರಾಟಗಳನ್ನು ಪೂರ್ಣಗೊಳಿಸಿದ್ದರ ಬಗ್ಗೆ ನನಗೆ ಹೆಮ್ಮೆ ಇದೆ. ನಾರಾಯಣ ಹೆಲ್ತ್ ಸಂಸ್ಥೆಯು ನೈಜ ಚಿಕಿತ್ಸಕ ಪರಿಸರದಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುವ ಮೂಲಕ, ನಮ್ಮ ಮೇಲೆ ನಂಬಿಕೆ ಇಡುವ ಮೂಲಕ ನಮಗೆ ಬಹುತೇಕ ಸಂಸ್ಥೆಗಳು ನೀಡದ ಅಪೂರ್ವ ಅವಕಾಶವನ್ನು ಒದಗಿಸಿದೆ. ಈ ಪೈಲಟ್ ಯೋಜನೆಯು ನಿರಂತರ ಮತ್ತು ನಿಖರವಾದ ವೈಮಾನಿಕ ಲಾಜಿಸ್ಟಿಕ್ಸ್ ಎಂಬುದು ಕೇವಲ ಭವಿಷ್ಯದ ಪರಿಕಲ್ಪನೆಯಲ್ಲ, ಅದು ಈಗ ಭಾರತದ ಅತ್ಯಂತ ಜನನಿಬಿಡ ನಗರವೊಂದರಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಸಾಂಪ್ರದಾಯಿಕ ಲಾಜಿಸ್ಟಿಕ್ಸ್ ವಿಭಾಗವು ಈಗ ಬದಲಾವಣೆಗೆ ಸಿದ್ಧವಾಗಿದ್ದು, ವಾಣಿಜ್ಯ ಸರಕು ಸಾಗಣೆಗಾಗಿ ಡ್ರೋನ್ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಆಶಯವಾಗಿದೆ ಮತ್ತು ಆ ಬದಲಾವಣೆ ಜಾರಿಗೆ ಬಂದಾಗ ದೂರ ಎಂಬುದು ಅಡ್ಡಿಯಾಗಿ ಉಳಿಯುವುದಿಲ್ಲ" ಎಂದು ಹೇಳಿದರು.
ಈ ಹಿಂದೆ, ದೂರ ದೂರದ ಕ್ಲಿನಿಕ್ ಗಳಲ್ಲಿ ಸಂಗ್ರಹಿಸಲಾದ ಮಾದರಿಗಳು ರಸ್ತೆ ಸಾರಿಗೆಯ ಮೂಲಕ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ತಲುಪುತ್ತಿದ್ದವು. ಈಗ ದಿನವಿಡೀ ನಿರಂತರವಾಗಿ ವೈಮಾನಿಕವಾಗಿ ಮಾದರಿ ತಲುಪುತ್ತಿದ್ದು, ಪ್ರಯೋಗಾಲಯವು ಕೇವಲ ನಿಗದಿತ ಕೊರಿಯರ್ ವಿತರಣೆಗಳ ಬದಲಿಗೆ ಸತತವಾಗಿ ಮಾದರಿಗಳನ್ನು ಸ್ವೀಕರಿಸುತ್ತಿದೆ.
ಈ ಯೋಜನೆಯು ಆಸ್ಪತ್ರೆಗಳ ಜಾಲವು ಕಾರ್ಯನಿರ್ವಹಿಸುವ ರೀತಿಯನ್ನು ಬದಲಿಸಲಿದೆ. ಕ್ಲಿನಿಕ್ ಗಳು ರೋಗಿಗಳ ಹತ್ತಿರವೇ ಮಾದರಿಗಳನ್ನು ಸಂಗ್ರಹಿಸಿ, ಪ್ರತೀ ಸ್ಥಳದಲ್ಲಿ ಪೂರ್ಣ ಪ್ರಮಾಣದ ರೋಗನಿರ್ಣಯ ಮೂಲಸೌಕರ್ಯವನ್ನು ಹೊಂದುವ ಬದಲು ಅವುಗಳನ್ನು ಅತ್ಯಂತ ವೇಗವಾಗಿ ಕೇಂದ್ರೀಕೃತ ಮತ್ತು ಸುಧಾರಿತ ಪ್ರಯೋಗಾಲಯಗಳಿಗೆ ಕಳುಹಿಸಬಹುದು. ಇದು ಆಸ್ಪತ್ರೆಗಳ ಜಾಲವು ತನ್ನ ರೋಗನಿರ್ಣಯದ ಸೇವೆಯನ್ನು ಉತ್ತಮಗೊಳಿಸಲು ಸಹಾಯ ಮಾಡುವುದಲ್ಲದೆ, ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಪ್ರಮುಖ ಆಸ್ಪತ್ರೆಗಳ ಆವರಣದಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.
ಮುಂದಿನ ಹಲವು ವರ್ಷಗಳಲ್ಲಿ, ಏರ್ ಬೌಂಡ್ ಮತ್ತು ನಾರಾಯಣ ಹೆಲ್ತ್ ಸಂಸ್ಥೆಗಳು ಹಂತ ಹಂತವಾಗಿ ಈ ಯೋಜನೆಯನ್ನು ವಿಸ್ತರಿಸುವ ಯೋಜನೆ ಹಾಕಿಕೊಂಡಿವೆ. ಇದರ ಭಾಗವಾಗಿ ನಾರಾಯಣ ಹೆಲ್ತ್ ಹೊರತಾದ ಸಣ್ಣ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳನ್ನು ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಕೇಂದ್ರೀಕೃತ ಪ್ರಯೋಗಾಲಯಕ್ಕೆ ಸಂಪರ್ಕಿಸಲಾಗುತ್ತದೆ. ಈ ಮೂಲಕ ನಗರದಾದ್ಯಂತ ಇರುವ ಆರೋಗ್ಯ ಸೇವಾ ಪೂರೈಕೆದಾರರು ಪ್ರತಿ ಘಟಕದಲ್ಲಿ ಪೂರ್ಣ ಪ್ರಯೋಗಾಲಯವನ್ನು ನಿರ್ಮಿಸುವ ಅಗತ್ಯವಿಲ್ಲದೆಯೇ ಸುಧಾರಿತ ರೋಗನಿರ್ಣಯ ಸೇವೆಗಳನ್ನು ಪಡೆಯಬಹುದು.
ಏರ್ ಬೌಂಡ್ ನ ಉತ್ಪನ್ನಗಳು 'ಬ್ಲೆಂಡೆಡ್ ವಿಂಗ್ ಬಾಡಿ ಟೈಲ್ ಸಿಟರ್' ವಿನ್ಯಾಸವನ್ನು ಹೊಂದಿದ್ದು, ವರ್ಟಿಕಲ್ ಆಗಿ ಟೇಕ್ ಆಫ್ ಆಗುತ್ತದೆ ಮತ್ತು ಫಿಕ್ಸೆಡ್ ವಿಂಗ್ ಹಾರಾಟ ಕಲ್ಪಿಸುತ್ತದೆ. ಸಾಂಪ್ರದಾಯಿಕ ಭೂಸಾರಿಗೆಗಿಂತ ಕಡಿಮೆ ವೆಚ್ಚದಲ್ಲಿ ವಿತರಣೆ ಮಾಡುವುದು ಸಾಧ್ಯವಾಗಿಸುತ್ತದೆ ಮತ್ತು ಜನನಿಬಿಡ ನಗರ ಪ್ರದೇಶಗಳಲ್ಲಿ ಸತತವಾಗಿ ಕಾರ್ಯಾಚರಣೆ ಮಾಡಲು ನೆರವಾಗುತ್ತದೆ. ಬೆಂಗಳೂರು ಪೈಲಟ್ ಯೋಜನೆಯ ಯಶಸ್ಸಿನ ನಂತರ ಈ ಸಂಸ್ಥೆಗಳು ಬೆಂಗಳೂರಿನಾದ್ಯಂತ ಹಂತ ಹಂತವಾಗಿ ವೈಮಾನಿಕ ವೈದ್ಯಕೀಯ ಲಾಜಿಸ್ಟಿಕ್ಸ್ ಮಾರ್ಗಗಳನ್ನು ವಿಸ್ತರಿಸಲು ಯೋಜನೆ ಹಾಕಿಕೊಂಡಿವೆ ಮತ್ತು ಅಂತಿಮವಾಗಿ ಕೋಲ್ಕತ್ತಾದಂತಹ ಇತರ ನಗರಗಳಲ್ಲೂ ಪರಿಚಯಿಸುವ ಗುರಿ ಇಟ್ಟುಕೊಂಡಿವೆ. ನಾರಾಯಣ ಹೆಲ್ತ್ ಪಾಲಿಗೆ ಕೋಲ್ಕತ್ತಾ ಪ್ರಮುಖ ಕೇಂದ್ರವಾಗಿದ್ದು, ಈ ಜಾಲವನ್ನು ವಿಸ್ತರಿಸುವ ಸಂದರ್ಭದಲ್ಲಿ ಸಂಸ್ಥೆಗಳು ನಿಯಂತ್ರಕ ಸಂಸ್ಥೆಗಳೊಂದಿಗೆ ಕೆಲಸ ಮಾಡಲಿವೆ.


