Asianet Suvarna News Asianet Suvarna News

ಭಾರೀ ಹಗರಣ: BDAಗೆ 50 ಕೋಟಿ ನಷ್ಟ, IAS‌ ಅಧಿಕಾರಿಗೆ ನೋಟಿಸ್‌

ಸ್ವಾಧೀನಪಡಿಸಿಕೊಂಡ ಜಮೀನಿನ ಮಾಲೀಕರಿಗೆ ಅಕ್ರಮವಾಗಿ ಪರಿಹಾರ ನೀಡಲು ನೆರವು | ಬಿಡಿಎಗೆ 50 ಕೋಟಿಯಷ್ಟುನಷ್ಟ | ಐಎಎಸ್‌ ಅಧಿಕಾರಿ ಸೇರಿ ಮೂವರಿಗೆ ನೋಟಿಸ್‌

BDA Scam 50 crore loss notice issued to ias Officer dpl
Author
Bangalore, First Published Jan 6, 2021, 8:15 AM IST

ಬೆಂಗಳೂರು(ಜ.06): ಬೆಂಗಳೂರು ಅಭಿವೃಧ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡ ಭೂಮಿಯ ಮಾಲೀಕರಿಗೆ ಅಕ್ರಮವಾಗಿ ಪರಿಹಾರ ನೀಡಲು ಸಹಾಯ ಮಾಡಿ ಬಿಡಿಎಗೆ ಕೋಟ್ಯಂತರ ರು. ಆರ್ಥಿಕ ನಷ್ಟಉಂಟು ಮಾಡಿದ ಆರೋಪದಡಿ ಇಬ್ಬರು ನೌಕರರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಜತೆಗೆ ಸದರಿ ಪ್ರಕರಣ ಸಂಬಂಧ ಐಎಎಸ್‌ ಅಧಿಕಾರಿಯೊಬ್ಬರಿಗೆ ಸ್ಪಷ್ಟೀಕರಣ ಕೇಳಿ ಪತ್ರ ಬರೆಯಲಾಗಿದೆ.

ಉಪಕಾರ್ಯದರ್ಶಿ ವಿಭಾಗ 1ರ ಮೇಲ್ವಿಚಾರಕ ಗಂಗಾಧರ್‌ ಮತ್ತು ಪ್ರಥಮ ದರ್ಜೆ ಸಹಾಯಕ ಬಯ್ಯಾರೆಡ್ಡಿ ಅವರಿಗೆ ನೋಟಿಸ್‌ ನೀಡಲಾಗಿದೆ. ಅಲ್ಲದೇ ಅಂದು ಬಿಡಿಎ ಭೂಸ್ವಾಧೀನ ವಿಭಾಗದ ಉಪ ಆಯುಕ್ತರಾಗಿದ್ದ ಪ್ರಸ್ತುತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ವಸಂತಕುಮಾರ್‌ ಅವರಿಗೆ ಸ್ಪಷ್ಟೀಕರಣ ಕೇಳಿ ಪತ್ರ ಬರೆಯಲಾಗಿದೆ.

70ರ ವೃದ್ಧೆಯನ್ನು ರೇಪ್‌ ಮಾಡಿದ ತೃತೀಯ ಲಿಂಗಿ

ಬಿಟಿಎಂ ಬಡಾವಣೆ ನಿರ್ಮಾಣ ಸಂಬಂಧ ನಗರ ಅಭಿವೃದ್ಧಿ ಟ್ರಸ್ಟ್‌ ಬೋರ್ಡ್‌(ಸಿಐಟಿಬಿ) 1979ರಲ್ಲಿ ಮಡಿವಾಳದ ಸರ್ವೆ ನಂಬರ್‌ 53ರಲ್ಲಿ 1.20 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ಪೈಕಿ 33 ಗುಂಟೆ ಜಾಗಕ್ಕೆ ಸಂಬಂಧಿಸಿದಂತೆ ಭೂಮಾಲೀಕರು ಹೆಚ್ಚುವರಿ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಬಳಿಕ ವಿಚಾರಣೆ ನಡೆದು ಹೆಚ್ಚುವರಿ ಪರಿಹಾರ ಪಡೆದು ಪ್ರಕರಣ ಇತ್ಯರ್ಥವಾಗಿತ್ತು. ಇದಾದ ಬಳಿಕ ಆ ಜಾಗವನ್ನು ಬೇರೆಯವರಿಗೆ ಮಂಜೂರು ಮಾಡಲಾಗಿತ್ತು.

ಕಾಲನಂತರ ಆ 33 ಗುಂಟೆ ಜಾಗಕ್ಕೆ ಈ ಹಿಂದೆ ಪರಿಹಾರ ನೀಡಲಾಗಿದ್ದರೂ ಈ ಪೈಕಿ 20 ಗಂಟೆ ಜಾಗಕ್ಕೆ ನ್ಯಾಯಾಲಯದ ಆದೇಶದ ಅನ್ವಯ ರೀಕನ್ವೆ ಮಾಡಿಕೊಡಲಾಗಿತ್ತು. ಉಳಿದ 13 ಗುಂಟೆ ಜಾಗವನ್ನು ಭೂಮಾಲೀಕರು ಖಾಸಗಿ ವ್ಯಕ್ತಿಯಿಬ್ಬರಿಗೆ ಜಿಪಿಎ ಮಾಡಿಕೊಟ್ಟಿದ್ದರು. ಇದಾದ ಬಳಿಕ ಜಿಪಿಎ ಮಾಲೀಕರು ಬದಲಿ ನಿವೇಶನಕ್ಕಾಗಿ ಮನವಿ ಮಾಡಿದ್ದರು. ನಿಯಮದ ಪ್ರಕಾರ ರೀಕನ್ವೆ ಮಾಡಿದ ಜಾಗಕ್ಕೆ ಬದಲಿ ನಿವೇಶನದಂತಹ ಪರಿಹಾರ ನೀಡಲು ಬರುವುದಿಲ್ಲ.

ದಾಖಲೆ ಪರಿಶೀಲಿಸದೆ ಸೈಟ್‌ ಹಂಚಿಕೆ:

ಹೀಗಿದ್ದರೂ ಕಾನೂನು ವಿಭಾಗದ ವರದಿಗಳನ್ನು ಮರೆಮಾಚಿ, ದಾಖಲೆಗಳನ್ನು ಪರಿಶೀಲಿಸದೆ ಎಚ್‌ಎಸ್‌ಆರ್‌, ಎಚ್‌ಬಿಆರ್‌, ಕೋರಮಂಗಲ ಮತ್ತು ಬನಶಂಕರಿಗಳಲ್ಲಿ 15 ಸಾವಿರ ಚದರ ಅಡಿ ವಿಸ್ತೀರ್ಣದ ನಿವೇಶನಗಳನ್ನು ಪ್ರತಿ ಚದರ ಅಡಿಗೆ 24 ರು. ನಿಗದಿಗೊಳಿಸಿ ಹಂಚಿಕೆ ಮಾಡಲಾಗಿದೆ. ಇದರಿಂದ ಬಿಡಿಎಗೆ ಸುಮಾರು 50 ಕೋಟಿ ರು. ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪ್ರಾಧಿಕಾರದ ಸಭೆಯಲ್ಲಿ ಮಂಡಿಸದ ಉಪಕಾರ್ಯದರ್ಶಿ ವಿಭಾಗ 1ರ ಮೇಲ್ವಿಚಾರಕ ಗಂಗಾಧರ್‌ ಹಾಗೂ ಕಾನೂನು ಅಧಿಕಾರಿಗಳು ನೀಡಿರುವ ಅಭಿಪ್ರಾಯ ಪರಿಶೀಲಿಸದ ಪ್ರಥಮ ದರ್ಜೆ ಸಹಾಯಕ ಬಯ್ಯಾರೆಡ್ಡಿ ಅವರ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಬಿಡಿಎ ಆರಕ್ಷಕ ಅಧೀಕ್ಷರು ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ.

ಈ ವರದಿ ಆಧರಿಸಿ ಬಿಡಿಎ ಆಯುಕ್ತ ಡಾ.ಎಚ್‌.ಆರ್‌.ಮಹದೇವ ಅವರು ಸದರಿ ಆರೋಪ ಕುರಿತಂತೆ ಮೂರು ದಿನಗಳೊಳಗೆ ಸಮಜಾಯಿಷಿ ನೀಡುವಂತೆ ನೋಟಿಸ್‌ ಜಾರಿ ಮಾಡಿದ್ದಾರೆ.

Follow Us:
Download App:
  • android
  • ios