ಬೆಂಗಳೂರು ಕಂಬಳಕ್ಕೆ ಅದ್ಧೂರಿ ತೆರೆ; ಕಾಂತಾರದಲ್ಲಿ ರಿಷಬ್ ಓಡಿಸಿದ್ದ ಕೋಣಗಳಿಗೆ ಪ್ರಥಮ ಬಹುಮಾನ!
‘ಬೆಂಗಳೂರು ಕಂಬಳ-ನಮ್ಮ ಕಂಬಳ’ಕ್ಕೆ ಅದ್ಧೂರಿ ತೆರೆ ಬಿದ್ದಿದ್ದು, ಎರಡು ದಿನಗಳಲ್ಲಿ ಬರೋಬ್ಬರಿ ಎಂಟು ಲಕ್ಷಕ್ಕೂ ಅಧಿಕ ಜನ ಆಗಮಿಸಿ ಕರಾವಳಿಯ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಕಣ್ತುಂಬಿಕೊಂಡಿದ್ದಾರೆ. ಈ ಯಶಸ್ಸಿನ ಬೆನ್ನಲ್ಲೇ ಕಂಬಳವನ್ನು ಪ್ರತಿ ವರ್ಷ ರಾಜಧಾನಿಯಲ್ಲಿ ನಡೆಸುವ ಹಾಗೂ ಮುಂದೆ ಮುಂಬೈನಲ್ಲೂ ಆಯೋಜಿಸುವ ಆಶಯ ವ್ಯಕ್ತವಾಗಿದೆ.
ಬೆಂಗಳೂರು (ನ.27): ‘ಬೆಂಗಳೂರು ಕಂಬಳ-ನಮ್ಮ ಕಂಬಳ’ಕ್ಕೆ ಅದ್ಧೂರಿ ತೆರೆ ಬಿದ್ದಿದ್ದು, ಎರಡು ದಿನಗಳಲ್ಲಿ ಬರೋಬ್ಬರಿ ಎಂಟು ಲಕ್ಷಕ್ಕೂ ಅಧಿಕ ಜನ ಆಗಮಿಸಿ ಕರಾವಳಿಯ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಕಣ್ತುಂಬಿಕೊಂಡಿದ್ದಾರೆ. ಈ ಯಶಸ್ಸಿನ ಬೆನ್ನಲ್ಲೇ ಕಂಬಳವನ್ನು ಪ್ರತಿ ವರ್ಷ ರಾಜಧಾನಿಯಲ್ಲಿ ನಡೆಸುವ ಹಾಗೂ ಮುಂದೆ ಮುಂಬೈನಲ್ಲೂ ಆಯೋಜಿಸುವ ಆಶಯ ವ್ಯಕ್ತವಾಗಿದೆ.
ಬೆಂಗಳೂರು ಕಂಬಳ ಸಮಿತಿ ಇದೇ ಮೊದಲ ಬಾರಿ ರಾಜಧಾನಿಯಲ್ಲಿ ಏರ್ಪಡಿಸಿದ್ದ ಕಂಬಳ ಕ್ರೀಡಾಕೂಟ ನಿರೀಕ್ಷೆಗೂ ಮೀರಿ ಜನ ಮೆಚ್ಚುಗೆಗೆ ಪಾತ್ರವಾಯಿತು. ಹೀಗಾಗಿ ಈ ದೇಸಿ ಕ್ರೀಡೆಯನ್ನು ಮತ್ತಷ್ಟು ಪ್ರಚುರಪಡಿಸಲು ಚಿಂತನೆ ನಡೆದಿದೆ. ಹಾಗೆಯೇ ಪ್ರೀಮಿಯರ್ ಲೀಗ್ ಮಾದರಿಯಲ್ಲಿ ಕಂಬಳದ ಲೀಗ್ ನಡೆಸುವ ಬಗ್ಗೆಯೂ ಕಾರ್ಯಕ್ರಮದಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ರಾಜಧಾನಿಯಲ್ಲೂ ಕರಾವಳಿಯ ಕ್ರೀಡೆಯ ಕಂಪು..! ಪುನೀತ್-ರಾಜ್ ಹೆಸರಲ್ಲಿ ನಡೆಯುತ್ತೆ ಅದ್ಧೂರಿ ಕಂಬಳ..!
ಕಂಬಳದ ಎರಡನೇ ದಿನವಾದ ಭಾನುವಾರ ಜನ ಕಿಕ್ಕಿರಿದು ನೆರೆದಿದ್ದರು. ಇಡೀ ಅರಮನೆ ಮೈದಾನದ ತುಂಬ ಜನಜಾತ್ರೆ ಸೇರಿತ್ತು. ಕಂಬಳ ಕೋಣಗಳನ್ನು ವೀಕ್ಷಿಸಲು ನೂಕುನುಗ್ಗಲು ಉಂಟಾಗಿತ್ತು. ಶನಿವಾರಕ್ಕಿಂತಲೂ ದುಪ್ಪಟ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ಕಂಬಳ ಕೋಣಗಳ ಓಟ ವೀಕ್ಷಿಸಿದರು. ನೇರ ಪ್ರಸಾರ ವ್ಯವಸ್ಥೆ ಕಲ್ಪಿಸಿದ್ದ ಎಲ್ಇಡಿ ಸ್ಕ್ರೀನ್ ಬಳಿಯೂ ಜನಜಂಗುಳಿ ಇತ್ತು. ವಾರಾಂತ್ಯಕ್ಕೆ ಟ್ರೆಕ್ಕಿಂಗ್, ಕ್ಲಬ್, ಪಬ್ಬುಗಳತ್ತ ಹೋಗುತ್ತಿದ್ದ ಐಟಿ ಮಂದಿ ಕೂಡ ಕಂಬಳದತ್ತ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ವೀಕ್ಷಕ ವಿವರಣೆ ಕಂಬಳದ ಆಕರ್ಷಣೆಯಾಗಿತ್ತು. ಕರಾವಳಿಯಿಂದ ಬಂದಿದ್ದ ಬರೋಬ್ಬರಿ 30 ವೀಕ್ಷಕ ವಿವರಣೆಕಾರರು ಹಾಸ್ಯದ ಸಂಭಾಷಣೆಯಲ್ಲಿ ಕಂಬಳವನ್ನು ಕಣ್ಣಿಗೆ ಕಟ್ಟುವಂತೆ ತಿಳಿಸಿದರು. ಪ್ರತಿ ನಾಲ್ಕು ತಾಸಿಗೆ ವೀಕ್ಷಕ ವಿವರಣೆಕಾರರು ಬದಲಾಗುತ್ತಿದ್ದರು. ಕಂಬಳದ ನಿಯಮಾವಳಿ ತಿಳಿಸುತ್ತಿದ್ದ ಇವರ ವಿಶಿಷ್ಟ ಹಾಸ್ಯ ಚಟಾಕಿಗೆ ಪ್ರೇಕ್ಷಕರು ಮನಸೋತರು. ರಾತ್ರಿ ಅರಮನೆ ಮೈದಾನದ ಸುತ್ತ ಬಣ್ಣ-ಬಣ್ಣಗಳಿಂದ ಅಲಂಕೃತಗೊಂಡ ವಿದ್ಯುತ್ ದೀಪಗಳು ಕಂಗೊಳಿಸಿದರೆ, ಮೇಳದವರು ಇಂಪಾದ ವಾದ್ಯನುಡಿಸಿ ನೆರೆದಿದ್ದವರನ್ನು ಸೆಳೆದರು.
ಎರಡನೇ ದಿನವೂ ಫುಡ್ ಕೋರ್ಟ್ ಮತ್ಯ್ಸಖಾದ್ಯ ಪ್ರಿಯರಿಂದ ತುಂಬಿ ತುಳುಕಿತು. ಸ್ವಾದಿಷ್ಟವಾದ ತಾಜಾ ಬಂಗುಡೆ, ಏಂಜಲ್, ಸೀಗಡಿ, ಮುರವಾಯಿ, ಬೂತಾಯಿ, ಬೊಂಡಾಸ್, ಏಡಿ, ಕಾಣೆ ಮೀನು, ಪಾಂಫ್ರೆಟ್ ತಿಂದು ಕರಾವಳಿ ಖಾದ್ಯಕ್ಕೆ ಮನಸೋತರು. ಅಲ್ಲದೆ, ಮಧ್ಯಾಹ್ನದ ಊಟಕ್ಕೆ ಕುಚಲಕ್ಕಿ ಅನ್ನ, ಕಂಬಳದ ವಿಶೇಷವಾದ ಮಂಡಕ್ಕಿ, ಜಿಲೇಬಿ, ಮಿಠಾಯಿ, ಲಾಡು ಖರೀದಿಸಿ ಆಸ್ವಾದಿಸಿದರು.
ಕಾಂತಾರದಲ್ಲಿ ರಿಷಬ್ ಓಡಿಸಿದ್ದ ಕೋಣಗಳಿಗೆ ಪ್ರಥಮ ಬಹುಮಾನ:
ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಚಲನಚಿತ್ರದಲ್ಲಿ ಓಡಿದ್ದ ಕೋಣಗಳು ಬೆಂಗಳೂರು ಕಂಬಳ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿವೆ.
ಬೆಂಗಳೂರು ಕಂಬಳದಲ್ಲಿ ಅಪ್ಪು ಸ್ಮೃತಿ: ಕಂಬಳ ಸಮಿತಿಯ ನಿರ್ಧಾರಕ್ಕೆ ಪುನೀತ್ ಅಭಿಮಾನಿಗಳು ಫುಲ್ ಖುಷಿ..!
‘ನಮ್ಮ ಕಂಬಳ-ಬೆಂಗಳೂರು ಕಂಬಳ’ದ ಕೆನೆಹಲಗೆ ಹಿರಿಯ ವಿಭಾಗದಲ್ಲಿ ಈ ಕೋಣಗಳು ಪಾಲ್ಗೊಂಡಿದ್ದವು. ಬೊಳಂಬಳ್ಳಿ ಪರಮೇಶ್ವರ್ ಭಟ್ಟ ಅವರ ಅಪ್ಪು-ಕುಟ್ಟಿ ಕೋಣಗಳು 6.5 ಅಡಿ ನೀರು ಚಿಮ್ಮಿಸಿ ಮೊದಲ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದಿವೆ. ಈ ಸ್ಪರ್ಧೆಯಲ್ಲಿ ಒಟ್ಟು 7 ಜೋಡಿ ಕಂಬಳಗಳು ಪಾಲ್ಗೊಂಡಿದ್ದವು.