ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಪತ್ನಿ ಅನಿತಾ ಕುಮಾರಸ್ವಾಮಿ ಮಾತನಾಡಿದ್ದು, ಯಾರೂ ಗಾಬರಿ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 

ಬೆಂಗಳೂರು (ಆ.30): ಸುಸ್ತು ಹಾಗೂ ನಿಶ್ಯಕ್ತಿಯಿಂದಾಗಿ ಬುಧವಾರ ಮುಂಜಾನೆಯೇ ಆಸ್ಪತ್ರೆಗೆ ದಾಖಲಾಗಿದ್ದ ಎಚ್‌ಡಿ ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಮಾಜಿ ಶಾಸಕಿ ಹಾಗೂ ಎಚ್‌ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಮಾತನಾಡಿದ್ದಾರೆ. ಕುಮಾರಸ್ವಾಮಿಯವರು ಆರಾಮವಾಗಿ ಇದ್ದಾರೆ. ಯಾರೂ ಕೂಡ ಊಹಾಪೋಹದ ಸುದ್ದಿಗಳನ್ನ ಹರಡಬೇಡಿ ಹಾಗೆಯೇ ರಾಜ್ಯದ ಜನತೆ ಗಾಬರಿಯಾಗೋದು ಬೇಡ. ಯಾರೂ ಸಹ ಆತಂಕಪಡೋದು ಬೇಡ. ನಾಳೆಯೇ ಡಿಸ್ಚಾರ್ಜ್ ಮಾಡ್ತೇವೆ ಎಂದು ವೈದ್ಯರು ಹೇಳಿದ್ದರು. ಆದರೆ, ನಾನೇ ಅವರಿಗೆ ಬೇಡ ಎಂದಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ತಕ್ಷಣವೇ ಡಿಸ್ಚಾರ್ಜ್‌ ಮಾಡೋದು ಬೇಡ ಎಂದು ನಾನೇ ಹೇಳಿದ್ದೇನೆ. ಡಿಸ್ಚಾರ್ಜ್ ಆದ್ರೇ ಮತ್ತೆ ಓಡಾಟ ಶುರು ಮಾಡಿಕೊಳ್ಳುತ್ತಾರೆ. ಅವರು ತುಂಬಾ ಆರಾಮವಾಗಿ ಇದ್ದಾರೆ. ಸುಳ್ಳುಸುದ್ದಿ ಹರಡೋದು ಬೇಡ. ಎಲ್ಲಾರ ಜೊತೆ‌ ಆರಾಮವಾಗಿ ‌ಮಾತನಾಡುತ್ತಿದ್ದಾರೆ. ಶುಕ್ರವಾರ ಬೆಳಿಗ್ಗೆ ಡಿಶ್ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಬುಧವಾರ ಮುಂಜಾನೆ ಮಲಗಿದ್ದ ಸಮಯದಲ್ಲಿಯೇ ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣಕ್ಕೆ ಎಚ್‌ಡಿ ಕುಮಾರಸ್ವಾಮಿ ಅವರನ್ನು 3.45ರ ವೇಳೆಗೆ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಬಗ್ಗೆ ಅಸ್ಪತ್ರೆ ಕೂಡ ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಿ ಮಾಹಿತಿ ನೀಡಿತ್ತು. ಆಸ್ಪತ್ರೆಗೆ ಬಂದ ತಕ್ಷಣ ಅವರಿಗೆ ತ್ವರಿತವಾಗಿ ಚಿಕಿತ್ಸೆ ನೀಡಲಾಗಿದೆ. ಅವರು ಕೂಡ ತಕ್ಷಣವೇ ಸ್ಪಂದಿಸಿದ್ದಾರೆ. ನಿಧಾನವಾಗಿ ಅವರು ಚೇತರಿಸಿಕೊಳ್ಳುತ್ತಿದ್ದು, 48 ಗಂಟೆಗಳ ಕಾಲ ಅವರ ಆರೋಗ್ಯದ ನಿಗಾ ವಹಿಸಲಾಗುತ್ತದೆ. ಚೇತರಿಕೆಯ ಹಂತವನ್ನು ನೋಡಿ ಅವರ ಡಿಸ್ಚಾರ್ಜ್‌ ಮಾಡಲಾಗುತ್ತದೆ ಎಂದು ಆಸ್ಪತ್ರೆ ತಿಳಿಸಿತ್ತು.

ಎಚ್‌ಡಿಕೆ ಅವರಿಗೆ ಮೈಲ್ಡ್‌ ಸ್ಟ್ರೋಕ್‌ ಆಗಿದೆ, ಇನ್ನೂ ಐಸಿಯುನಲ್ಲಿ ಚಿಕಿತ್ಸೆ, ವೈದ್ಯರ ಹೇಳಿಕೆ!

ಇನ್ನು ಎಚ್‌ಡಿಕೆ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಅಪೊಲೋ ಆಸ್ಪತ್ರೆಯ ವೈದ್ಯ ಡಾ. ಸತೀಶ್‌ ಚಂದ್ರ ಮಾತನಾಡಿದ ಕುಮಾರಸ್ವಾಮಿ ಅವರಿಗೆ ಆಗಿದ್ದೇನು ಅನ್ನೋದನ್ನು ತಿಳಿಸಿದ್ದರು. ಮುಂಜಾನೆ 3.45 ವೇಳೆಗೆ ಆಸ್ಪತ್ರೆಗೆ ಬಂದಿದ್ದ ಕುಮಾರಸ್ವಾಮಿ ಅವರಿಗೆ ಸಣ್ಣ ಪ್ರಮಾಣದಲ್ಲಿ ಸ್ಟ್ರೋಕ್‌ ಆಗಿತ್ತು. ಈಗ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ. ಎಚ್‌ಡಿ ಕುಮಾರಸ್ವಾಮಿಯವರ ಎಡಭಾಗದಲ್ಲಿ ರಕ್ತನಾಳ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದಾಗಿ ಎಡಭಾಗಕ್ಕೆ ಮೈಲ್ಡ್ ಸ್ಟ್ರೋಕ್ ಆಗಿತ್ತು. ಆಸ್ಪತ್ರೆಗೆ ಬರುವಾಗ ಅವರ ಮಾತುಗಳು ತೊದಲುತ್ತಿತ್ತು. ತುಂಬಾ ಸುಸ್ತಾದವರಂತೆ ಕಾಣಿಸಿದ್ದರು. ಆಡ್ಮಿಟ್ ಆದ ಒಂದು ಗಂಟೆಯಲ್ಲೇ ಅವರ ಆರೋಗ್ಯ ಸ್ಥಿರವಾಗಿತ್ತು. ಅವರಿಗೆ ಇನ್ನೂ‌ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಾಳೆ ಅವರನ್ನು ಜನರಲ್‌ ವಾರ್ಡ್ ಗೆ ಶಿಫ್ಟ್ ಮಾಡಲಿದ್ದೇವೆ. ಇನ್ನೂ 2-3 ದಿನ ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ. ನಾಳೆ ಬೆಳಗ್ಗೆ ಮತ್ತೊಂದು ಹೆಲ್ತ್‌ ಬುಲೆಟಿನ್ ಬಿಡುಗಡೆ ಮಾಡಲಿದ್ದೇವೆ. ಈಗ ಅವರು ಎಲ್ಲರ ಜೊತೆಯಲ್ಲೂ ಮಾತನಾಡುತ್ತಿದ್ದಾರೆ. ಆರೋಗ್ಯವಾಗಿದ್ದಾರೆ ಯಾವುದೇ ತೊಂದರೆ ಇಲ್ಲ ಎಂದಿದ್ದರು.

ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯ ಚೇತರಿಕೆ, ಅಪೋಲೋದಿಂದ ಹೆಲ್ತ್ ಬುಲೆಟಿನ್ ಬಿಡುಗಡೆ