ಮಂಗಳವಾರ ನಡೆಯಲಿರುವ ರೈಲ್ವೆ ಇಲಾಖೆಯಲ್ಲಿ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡ ಭಾಷೆ ಕೈಬಿಟ್ಟಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪರೀಕ್ಷಾರ್ಥಿಗಳು ಸೋಮವಾರ ಸಭೆ ನಡೆಸಿ ಪರೀಕ್ಷೆ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಹುಬ್ಬಳ್ಳಿ : ಮಂಗಳವಾರ ನಡೆಯಲಿರುವ ರೈಲ್ವೆ ಇಲಾಖೆಯಲ್ಲಿ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡ ಭಾಷೆ ಕೈಬಿಟ್ಟಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪರೀಕ್ಷಾರ್ಥಿಗಳು ಸೋಮವಾರ ಸಭೆ ನಡೆಸಿ ಪರೀಕ್ಷೆ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

‘ಕನ್ನಡಪ್ರಭ’ವು ಭಾನುವಾರ ‘ರೈಲ್ವೆ ಬಡ್ತಿ ಪರೀಕ್ಷೇಲಿ ಮತ್ತೆ ಕನ್ನಡಿಗರಿಗೆ ದ್ರೋಹ’ ಎಂಬ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಕನ್ನಡ ಸಂಘನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಇದೇ ವೇಳೆ, ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು. ಇಲ್ಲದೇ ಹೋದರೆ ಪರೀಕ್ಷೆಯನ್ನು ಬಹಿಷ್ಕರಿಸಲು ನಿರ್ಧಾರ ಕೈಗೊಳ್ಳುವುದಾಗಿ ರೈಲ್ವೆ ಮುಂಬಡ್ತಿ ಅಭ್ಯರ್ಥಿಗಳು ತಿಳಿಸಿದ್ದಾರೆ. ಇದಕ್ಕಾಗಿ ಮಾ.16ರಂದು ಸಭೆ ನಡೆಸಲು ನಿರ್ಧರಿಸಿದ್ದಾರೆ. ಅಂದೇ ತಮ್ಮ ಅಂತಿಮ ತೀರ್ಮಾನವನ್ನು ತಿಳಿಸಲಿದ್ದಾರೆ.

ಸ್ಪಷ್ಟೀಕರಣದಲ್ಲೂ ಗೊಂದಲ:

ಕಳೆದ ಸೆಪ್ಟೆಂಬರ್‌ನಲ್ಲಿ ಗೂಡ್ಸ್ ಟ್ರೇನ್ ಮ್ಯಾನೇಜರ್ ಹಾಗೂ ನವೆಂಬರ್‌ನಲ್ಲಿ ಎಲ್‌ಡಿಸಿಇ ಮುಂಬಡ್ತಿ ಪರೀಕ್ಷೆಗಳಿಗೆ ಮೂರು ಭಾಷೆಗಳಲ್ಲಿ ಪರೀಕ್ಷೆಗೆ ಅವಕಾಶ ನೀಡಿ ಅಧಿಸೂಚನೆ ಹೊರಡಿಸಿತ್ತು. ಬಳಿಕ ಮಾ.12ರಂದು ಕನ್ನಡ ಭಾಷೆ ಕೈಬಿಟ್ಟು, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗೆ ಮಾತ್ರ ಪರೀಕ್ಷೆಗೆ ಅವಕಾಶ ಕಲ್ಪಿಸಿ ಅಧಿಸೂಚನೆ ಹೊರಡಿಸಿತ್ತು. ಈ ವಿಷಯವನ್ನು ಮಾ.13ರಂದು ಸಂಜೆ ರೈಲ್ವೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಈ ಕುರಿತು ರೈಲ್ವೆ ಅಧಿಕಾರಿಗಳಿಗೆ ಕೇಳಿದಾಗ, ಡಿ.25ರಂದೇ ಅಧಿಸೂಚನೆ ತಿದ್ದುಪಡಿ ಮಾಡಿರುವ ಕುರಿತು ಸ್ಪಷ್ಟನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ನಮಗೆ ಯಾವುದೇ ಸ್ಪಷ್ಟೀಕರಣದ ಅಧಿಸೂಚನೆ ಬಗ್ಗೆ ಮಾಹಿತಿ ಇಲ್ಲ

ಆದರೆ ಪರೀಕ್ಷಾರ್ಥಿಗಳನ್ನು ಕೇಳಿದರೆ, ‘ನಮಗೆ ಯಾವುದೇ ಸ್ಪಷ್ಟೀಕರಣದ ಅಧಿಸೂಚನೆ ಬಗ್ಗೆ ಮಾಹಿತಿ ಇಲ್ಲ. ಈವರೆಗೂ ಯಾವ ಅಧಿಕಾರಿಯೂ ಮಾಹಿತಿ ನೀಡಿಲ್ಲ’ ಎಂದು ಹೇಳುತ್ತಿದ್ದಾರೆ. ಜತೆಗೆ, ‘ಡಿ.25ರಂದು ಕ್ರಿಸ್‌ಮಸ್‌ ಸರ್ಕಾರಿ ರಜೆ ಇದ್ದು, ಅಧಿಕಾರಿಗಳು ಈ ರೀತಿಯ ಅಧಿಸೂಚನೆ ಹೊರಡಿಸಲು ಹೇಗೆ ಸಾಧ್ಯ? ಅಲ್ಲದೇ ಸ್ಪಷ್ಟೀಕರಣದ ಅಧಿಸೂಚನೆಯಲ್ಲೂ ಸರಿಯಾದ ಸ್ಪಷ್ಟತೆಯಿಲ್ಲ’ ಎಂಬುದು ಪರೀಕ್ಷಾರ್ಥಿಗಳ ಆರೋಪ.

ಮಂಗಳವಾರ ನಡೆಯುವ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬಹಿಷ್ಕರಿಸಲು ನಿರ್ಧರಿಸಲಾಗುತ್ತಿದೆ. ಸೋಮವಾರ ಎಲ್ಲ ಪರೀಕ್ಷಾರ್ಥಿಗಳು ಒಂದೆಡೆ ಸಭೆ ಸೇರಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.